ಪುತ್ತೂರು: ಪುತ್ತೂರಿನ ಎರಡನೇ ಅತಿ ದೊಡ್ಡ ಜಾತ್ರೆ ಎಂದೇ ಕರೆಯಲಾಗುತ್ತಿರುವ, ಕಾರಣಿಕ ಕ್ಷೇತ್ರವಾದ ಇತಿಹಾಸ ಪ್ರಸಿದ್ದ ಕಲ್ಲೇಗ ಶ್ರೀ ಕಲ್ಕುಡ ದೈವಸ್ಥಾನದಲ್ಲಿ ಫೆ.11 ರಂದು ಶ್ರೀ ಕಲ್ಕುಡ ಕಲ್ಲುರ್ಟಿ ದೈವಗಳ ವರ್ಷಾವಧಿ ನೇಮೋತ್ಸವ ನಡೆಯಿತು. ದೈವಗಳ ಮೂಲ ನೆಲೆ ಕಾರ್ಜಾಲು ಗುತ್ತುವಿನಿಂದ ರಾತ್ರಿ ವಿವಿಧ ಬಿರುದಾವಳಿಗಳು, ದಂಡ್ ಶಿಲಾಲ್, ಕೊಂಬು, ಶಂಖ, ಜಾಗಟೆ, ಟಾಸೆ, ಚೆಂಡೆಯ ಸದ್ದು ಮತ್ತು ಬೆಳಕಿನ ಸೂಟೆಯೊಂದಿಗೆ ದೈವಗಳ ಮೂಲ ನೆಲೆ ಕಾರ್ಜಾಲು ಗುತ್ತುವಿನಿಂದ ದೈವಗಳ ಭಂಡಾರ ಬರುವುದೇ ವಿಶೇಷವಾಗಿತ್ತು. ದೈವಗಳ ಭಂಡಾರದ ಜೊತೆ ಪಲ್ಲಕ್ಕಿಯ ಅಕ್ಕಪಕ್ಕ ದಂಡ್ ಶಿಲಾಲ್ ಬೆಳಕಿತ್ತು.
ಇದೆ ಸಂದರ್ಭದಲ್ಲಿ ಭಂಡಾರ ಬರುವ ದಾರಿಯುದ್ದಕ್ಕೂ ಆಕರ್ಷಕ ಸುಡುಮದ್ದು ಪ್ರದರ್ಶನ ನಡೆಯಿತು.
ಮಧ್ಯಾಹ್ನ ಕಲ್ಲೇಗ ದೈವಸ್ಥಾನದಲ್ಲಿ ಸಹಸ್ರಾರು ಮಂದಿ ಭಕ್ತರಿಗೆ ಅನ್ನಪ್ರಸಾದ ವಿತರಣೆ ಮಾಡಲಾಯಿತು.
ಬೆಳಿಗ್ಗೆ ಕಾರ್ಜಾಲು ಗುತ್ತಿನಲ್ಲಿ ಸ್ಥಳಶುದ್ಧಿ ಹೋಮ, ಕಲಶ ಪ್ರತಿಷ್ಠೆ, ಶ್ರೀ ದೈವಸ್ಥಾನದಲ್ಲಿ ಗಣಹೋಮ, ಶ್ರೀ ದೈವಗಳ ತಂಬಿಲ, ನಾಗತಂಬಿಲ, ಮಧ್ಯಾಹ್ನ ಶ್ರೀ ದೈವಸ್ಥಾನದ ಬಳಿ ಶ್ರೀ ದೈವಗಳ ಭಂಡಾರದ ವತಿಯಿಂದ ಅನ್ನಸಂತರ್ಪಣೆ ನಡೆಯಿತು.
ರಾತ್ರಿ ಕಾರ್ಜಾಲು ಗುತ್ತಿನಿಂದ ಶ್ರೀ ದೈವಗಳ ಭಂಡಾರ ಹೊರಟು ದೈವಸ್ಥಾನಕ್ಕೆ ಬಂದ ಬಳಿಕ ಗೋಂದೊಲು ಪೂಜೆ, ಶ್ರೀ ಕಲ್ಕುಡ ಕಲ್ಲುರ್ಟಿ ದೈವಗಳ ವರ್ಷಾವಧಿ ನೇಮೋತ್ಸವ ನಡೆಯಿತು.
ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಪುಡಾ ಸದಸ್ಯ ನಿಹಾಲ್ ಪಿ ಶೆಟ್ಟಿ, ದೈವಸ್ಥಾನದ ಆಡಳಿತಾಧಿಕಾರಿಯಾಗಿರುವ ಕಬಕದ ವಿ.ಎ ಚಂಗಪ್ಪ, ಶ್ರೀ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ನೂತನ ಸದಸ್ಯರಾಗಿರುವ ಅಜಿತ್ ಕುಮಾರ್ ಕಲ್ಲೇಗ, ಪಿ.ರಾಮಚಂದ್ರ ನಾಯ್ಕ ಸಹಿತ ನಗರಸಭಾ ನಿಕಟಪೂರ್ವ ಅಧ್ಯಕ್ಷ ಜೀವಂಧರ್ ಜೈನ್, ಕಲ್ಲೇಗ ರೂರಲ್ ಡೆವಲಪ್ಮೆಂಟ್ ಟ್ರಸ್ಟ್ನ ಅಧ್ಯಕ್ಷ ಕಲ್ಲೇಗ ಸಂಜೀವ ನಾಯಕ್ ಕಲ್ಲೇಗ, ಕಬಕ ಗ್ರಾ.ಪಂ ಸದಸ್ಯ ವಿನಯ ಕಲ್ಲೇಗ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಸಹಿತ ಸಾವಿರಾರು ಭಕ್ತರು ರಾತ್ರಿ ಭಂಡಾರ ಬರುವ ಸಂದರ್ಭ ಜೊತೆಗಿದ್ದರು.