ಇಂದು ನೈಋತ್ಯ ಮಾನ್ಸೂನ್ ಕೇರಳವನ್ನು ತಲುಪಿದೆ. 2009ರಲ್ಲಿ ಮೇ 23ರಂದು ಮಾನ್ಸೂನ್ ಆಗಮನವಾಗಿತ್ತು. ಅದಾದ ಬಳಿಕ ಇದೇ ಮೊದಲ ಬಾರಿ ಅಂದರೆ 16 ವರ್ಷಗಳ ಬಳಿಕ ಮೇ ಕೊನೆಯ ವಾರದೊಳಗೆ ಆರಂಭವಾಗಿದೆ. ಸಾಮಾನ್ಯವಾಗಿ, ನೈಋತ್ಯ ಮಾನ್ಸೂನ್ ಜೂನ್ 1ರ ಬಳಿಕ ಕೇರಳಕ್ಕೆ ಪ್ರವೇಶವಾಗಲಿದೆ. ಜುಲೈ 8ರ ವೇಳೆಗೆ ಇಡೀ ದೇಶವನ್ನು ಆವರಿಸುತ್ತದೆ. ಇದು ಸೆಪ್ಟೆಂಬರ್ 17ರ ಸುಮಾರಿಗೆ ವಾಯುವ್ಯ ಭಾರತದಿಂದ ಹಿಮ್ಮೆಟ್ಟಲು ಪ್ರಾರಂಭಿಸುತ್ತದೆ ಮತ್ತು ಅಕ್ಟೋಬರ್ 15ರ ವೇಳೆಗೆ ಸಂಪೂರ್ಣವಾಗಿ ಕಡಿಮೆಯಾಗುತ್ತದೆ.
ಕಳೆದ ವರ್ಷ ಮೇ 30ರಂದು ದಕ್ಷಿಣ ರಾಜ್ಯದ ಮೇಲೆ ಮಾನ್ಸೂನ್ ಪ್ರವೇಶಿಸಿತು. 2023ರಲ್ಲಿ ಜೂನ್ 8, 2022ರಲ್ಲಿ ಮೇ 29, 2021ರಲ್ಲಿ ಜೂನ್ 3, 2020ರಲ್ಲಿ ಜೂನ್ 1, 2019ರಲ್ಲಿ ಜೂನ್ 8 ಮತ್ತು 2018ರಲ್ಲಿ ಮೇ 29ಎಂದು ಕೇರಳಕ್ಕೆ ಮಾನ್ಸೂನ್ ಆಗಮನವಾಗಿತ್ತು. ಹವಾಮಾನಶಾಸ್ತ್ರಜ್ಞರ ಪ್ರಕಾರ, ಮಳೆಗಾಲದ ಋತುವಿನಲ್ಲಿ ಮಳೆಯ ಪ್ರಾರಂಭದ ದಿನಾಂಕ ಮತ್ತು ದೇಶದಲ್ಲಿ ಒಟ್ಟು ಮಳೆಯ ನಡುವೆ ಯಾವುದೇ ನೇರ ಸಂಬಂಧವಿಲ್ಲ. ಕೇರಳದಲ್ಲಿ ಮುಂಗಾರು ಬೇಗ ಅಥವಾ ತಡವಾಗಿ ಆಗಮಿಸುತ್ತದೆ ಎಂದರೆ ಅದು ದೇಶದ ಇತರ ಭಾಗಗಳನ್ನು ಅದಕ್ಕೆ ಅನುಗುಣವಾಗಿ ಆವರಿಸುತ್ತದೆ ಎಂದರ್ಥವಲ್ಲ.