ಉಳ್ಳಾಲ: ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವ ನಿಟ್ಟಿನಲ್ಲಿ ಕೆಂಪುಕಲ್ಲಿಗೆ ರಾಜಧನ ಹೆಚ್ಚಿಸುವ ಮೂಲಕ ಜನಸಾಮಾನ್ಯರ ಬದುಕನ್ನು ದುಸ್ತರವನ್ನಾಗಿಸಿದೆ ಎಂದು ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ಆರೋಪಿಸಿದರು.
ಜಿಲ್ಲೆಯಲ್ಲಿ ತಲೆದೋರಿರುವ ಕೆಂಪುಕಲ್ಲು, ಮರಳು ಸಮಸ್ಯೆ ಪರಿಹರಿಸದ ರಾಜ್ಯ ಸರ್ಕಾರದ ವೈಫಲ್ಯ ಖಂಡಿಸಿ ಬಿಜೆಪಿ ಮಂಗಳೂರು ಮಂಡಲ ವತಿಯಿಂದ ತೊಕ್ಕೊಟ್ಟಿನ ಪ್ರೈಓವರ್ ಕೆಳಗಡೆ ಸೋಮವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.
ಕೆಂಪುಕಲ್ಲನ್ನು ಅಧಿಕಾರಿಗಳು ಗಣಿಗಾರಿಕೆಯ ಪಟ್ಟಿಗೆ ಸೇರಿಸಿದ ಪರಿಣಾಮ 32 ರೂಪಾಯಿಗೆ ಸಿಗುತ್ತಿದ್ದ ಕೆಂಪುಕಲ್ಲಿನ ದರ 52 ರೂಪಾಯಿಗೆ ಏರಿಕೆಯಾಗಿದೆ. ಸಮಸ್ಯೆ ಪರಿಹಾರಕ್ಕಾಗಿ ಅಧಿಕಾರಿಗಳಿಗೆ ಒತ್ತಡ ತರುವ ಕೆಲಸ ಮಾಡಿದರೂ ಸರ್ಕಾರ ಇದನ್ನೂ ಪರಿಗಣಿಸದೆ ಜನವಿರೋಧಿ ನೀತಿ ಅನುಸರಿಸಿದೆ ಎಂದರು.
ಬಿಜೆಪಿ ರೈತ ಮೋರ್ಚಾದ ಮಂಡಲ ಪ್ರಧಾನ ಕಾರ್ಯದರ್ಶಿ ರವಿ ರೈ ಪಜೀರು, ಜಿಲ್ಲಾ ಉಪಾಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು, ಕ್ಷೇತ್ರಾಧ್ಯಕ್ಷ ಜಗದೀಶ್ ಆಳ್ವ ಕುವೆತ್ತಬೈಲು, ಮುಖಂಡರಾದ ಟಿ.ಜಿ.ರಾಜಾರಾಮ ಭಟ್, ಸಂತೋಷ್ ಕುಮಾರ್ ರೈ ಬೋಳಿಯಾರ್, ಸೀತಾರಾಮ ಬಂಗೇರ, ಲಲಿತಾ ಸುಂದರ್, ರವಿಶಂಕರ್ ಸೋಮೇಶ್ವರ, ಸುರೇಶ್ಆಳ್ವ ಸಾಂತ್ಯಗುತ್ತು, ಸುಮನಾ ಶೆಟ್ಟಿ, ಮೋಹನ್ ರಾಜ್ ಕೆ.ಆರ್., ದಯಾನಂದ ತೊಕ್ಕೊಟ್ಟು, ರಮೇಶ್ ಬೆದ್ರೋಳಿಕೆ. ಮಾಧವಿ ಉಳ್ಳಾಲ್, ನಿಶಾಂತ್ ಪೂಜಾರಿ, ಮುರಳಿ ಕೊಣಾಜೆ, ಸತೀಶ್ ಕರ್ಕೇರ, ಮನೋಜ್ ನಾಣ್ಯ, ಹೇಮಂತ್ ಶೆಟ್ಟಿ, ಹರೀಶ್ ಅಂಬಮೊಗರು, ಧನಲಕ್ಷ್ಮೀ ಗಟ್ಟಿ, ಜೀವನ್ ಕುಮಾರ್ ಕೆರೆಬೈಲು ಇನ್ನಿತರರು ಉಪಸ್ಥಿತರಿದ್ದರು.
























