ಪುತ್ತೂರು: ಉಪ್ಪಿನಂಗಡಿಯಿಂದ ಪುತ್ತೂರು ಸಂಪರ್ಕಿಸುವ ರಸ್ತೆಯನ್ನು PWD ದುರಸ್ತಿ ನಡೆಸದೆ ಇದ್ದಲ್ಲಿ ಪ್ರತಿಭಟನೆ ಮಾಡುವುದಾಗಿ ಬನ್ನೂರು ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಸಹಾಯಕ ಆಯುಕ್ತರು ಪುತ್ತೂರು, ಆರಕ್ಷಕರ ಠಾಣೆ ಪುತ್ತೂರು, ತಹಶೀಲ್ದಾರರು ಪುತ್ತೂರು, ತಾಲೂಕು ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿಗಳಿಗೆ ಮನವಿಯನ್ನು ನೀಡಿದ ಬಿಜೆಪಿ ಕಾರ್ಯಕರ್ತರು ತಮ್ಮ ಪ್ರತಿಭಟನೆಯ ನಿರ್ಧಾರವನ್ನು ತಿಳಿಸಿದರು.
ಜಿಲ್ಲಾ ಕೇಂದ್ರವಾಗಲು ಬೇಕಾಗುವ ಎಲ್ಲಾ ಮೂಲಭೂತ ಸೌಕರ್ಯಗಳ ಅಡಿಪಾಯದ ವ್ಯವಸ್ಥೆಯನ್ನು ಈ ಹಿಂದೆ ಆಡಳಿತದಲ್ಲಿದ್ದ ಬಿಜೆಪಿ ಸರ್ಕಾರ ಮಾಡಿದೆ.ಪುತ್ತೂರು ನಗರದ ನಂತರ ತಾಲೂಕಿನ ಅತೀ ದೊಡ್ಡ ಪೇಟೆಯಾದ ಉಪ್ಪಿನಂಗಡಿಯನ್ನು ಸಂಪರ್ಕಿಸುವ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಮಾಡಿ ರಾಜ್ಯ ಹೆದ್ದಾರಿಗೆ ಪರಿವರ್ತಿಸಲಾಗಿದೆ. ಪ್ರಸ್ತುತ ಬದಲಾಗಿ ಹೊಸ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ಈ ರಸ್ತೆಗೆ ಪುತ್ತೂರು ನಗರದಿಂದ ಸೇಡಿಯಾಪು ವರೆಗೆ ನಿಮ್ಮ ಯಾವುದೇ ನಿರ್ವಹಣೆಯನ್ನು ಮಾಡದೆ ಜನರು ನಿತ್ಯ ತೊಂದರೆಗಳನ್ನು ಎದುರಿಸುತ್ತಿದ್ದಾರೆ.
ಪುತ್ತೂರು-ಉಪ್ಪಿನಂಗಡಿ ರಸ್ತೆಯಲ್ಲಿ ಚತುಷ್ಪಥ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ವಾಹನ ಸಂಚಾರದ ಸಮಯ ಕಡಿಮೆಯಾಗಿದೆ. ಸುಗಮ ಸಂಚಾರ ಉತ್ತಮವಾದಷ್ಟೇ ಪ್ರಮಾಣದಲ್ಲಿ ಅಪಘಾತ ಪ್ರಮಾಣಗಳೂ ಅಧಿಕವಾಗಿದೆ. ನೆಕ್ಕಿಲಾಡಿಯ ಅದರ್ಶ ನಗರ, ಇಂದಾಜೆಯಲ್ಲಿ ಒಂದೂವರೆ ತಿಂಗಳಲ್ಲಿ 5ಕ್ಕೂ ಅಧಿಕ ಅಪಘಾತಗಳು ಸಂಭವಿಸಿದ್ದು, ಚತುಷ್ಪಥ ರಸ್ತೆಯ ಅವೈಜ್ಞಾನಿಕ ಕಾಮಗಾರಿಯೇ ಇದಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.
ಪುತ್ತೂರು-ಉಪ್ಪಿನಂಗಡಿ ರಸ್ತೆಯ ಬೇರಿಕೆಯಿಂದ ನೆಕ್ಕಿಲಾಡಿ ತನಕ ಕಳೆದ ಬಾರಿ ಚತುಷ್ಪಥ ಕಾಮಗಾರಿ ನಡೆದಿತ್ತು. ಮಳೆಗಾಲದಲ್ಲಿ ಹೊಂಡಗುಂಡಿಗಳಿಂದ ತುಂಬಿದ್ದ ರಸ್ತೆಗೆ ಡಾಮರೀಕರಣಗೊಂಡು ಅಂದದ ರಸ್ತೆ ನಿರ್ಮಾಣಗೊಂಡಿತ್ತು. ಹೀಗಾಗಿ ವಾಹನಗಳ ವೇಗದ ಮಿತಿ ಅಧಿಕವಾಗತೊಡಗಿತು.ಇದರಿಂದಾಗಿ ಅಪಘಾತಗಳುಂಟಾಗುವುದೂ ಸಾಮಾನ್ಯವಾಗ ತೊಡಗಿದೆ. ಕಳೆದ ಒಂದೂವರೆ ತಿಂಗಳಿನಲ್ಲಿ 5 ಅಪಘಾತಗಳು ಒಂದೇ ಸ್ಥಳದಲ್ಲಿ ಸಂಭವಿಸಿದೆ. ಈ ಪೈಕಿ ಕೆಲವು, ವಾಹನಗಳ ಅತಿ ವೇಗದ ಕಾರಣದಿಂದ ಸಂಭವಿಸಿದ್ದರೆ ಇನ್ನು ಕೆಲವು ಚತುಷ್ಪಥ ರಸ್ತೆಯ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಸಂಭವಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇದಕ್ಕೆ ಪೂರಕವಾಗಿ ಮನೆಯೊಂದರಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿರುವ ದೃಶ್ಯಗಳೇ ಸಾಕ್ಷಿಯಾಗಿದೆ
ಚತುಷ್ಪಥ ರಸ್ತೆ ನಿರ್ಮಾಣ ಅವೈಜ್ಞಾನಿಕವಾಗುತ್ತಿದೆ.ಅದನ್ನು ಸರಿಪಡಿಸಿ ಎಂದು ಕಾಮಗಾರಿ ಸಂದರ್ಭದಲ್ಲಿ ಇಂಜಿನಿಯರ್ ಹಾಗೂ ಗುತ್ತಿಗೆದಾರರ ಗಮನಕ್ಕೆ ತಂದಿದ್ದರೂ ಅವರು ಗಮನಹರಿಸಿಲ್ಲ.ಈ ಹಿಂದೆ ಇದ್ದ ಒಳರಸ್ತೆಗಳು ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವಲ್ಲಿಯೂ ಕಾಮಗಾರಿ ಸಮರ್ಪಕವಾಗಿ ಮಾಡಿಲ್ಲ.ಚತುಷ್ಪಥ ರಸ್ತೆ ಕೊನೆಗೊಂಡು ಏಕ ರಸ್ತೆಗ ಪ್ರವೇಶಿಸುವಲ್ಲಿ, ಶಾಲಾ ವಠಾರ, ತಿರುವು ಸೇರಿದಂತೆ ಅವಶ್ಯಕತೆಯಿರುವಲ್ಲಿಯೂ ಸೂಚನಾ ಫಲಕವನ್ನು ಅಳವಡಿಸದೇ ಇರುವುದೂ ಅಪಘಾತಕ್ಕೆ ಕಾರಣವಾಗಿದೆ ಎಂಬುದು ಸ್ಥಳೀಯರ ಆರೋಪವಾಗಿದೆ.
ಕಾಮಗಾರಿಗಾಗಿ ಎರಡು ವರ್ಷ ತಗೊಂಡಿದ್ದಾರೆ. ಈಗ ಕಾಮಗಾರಿ ಪೂರ್ಣಗೊಂಡಿದೆ ಎಂದು ಅವರು ಹೋಗಿದ್ದಾರೆ. ಆದರೆ ಇಲ್ಲಿ ಕೆಲಸ ಪೂರ್ಣಗೊಂಡಿಲ್ಲ. ಈ ಹಿಂದೆ ಇದ್ದ ಸಂಪರ್ಕ ರಸ್ತೆಗಳ ನಿರ್ವಹಣೆ ಸರಿಯಾಗಿ ಮಾಡಿಲ್ಲ. ರಸ್ತೆಯಲ್ಲಿ ಎಲ್ಲಿಯೂ ಸೂಚನಾ ಫಲಕವಿಲ್ಲ. ಕಾಮಗಾರಿಯನ್ನು ಅವೈಜ್ಞಾನಿಕವಾಗಿ ಮಾಡಿರುವುದರಿಂದ ಇಲ್ಲಿ ಹಲವು ಅಪಘಾತಗಳು ನಡೆಯುತ್ತಿದೆ. ರಸ್ತೆಯ ಎರಡೂ ಬದಿಯಲ್ಲಿ ಚರಂಡಿ ಮಾಡಿಕೊಡುವುದಾಗಿ ಪ್ರಾರಂಭದಲ್ಲಿ ತಿಳಿಸಿದ್ದರೂ ಈಗ ರಸ್ತೆಯ ಒಂದು ಬದಿ ಮಾತ್ರ ಚರಂಡಿ ನಿರ್ಮಿಸಿದ್ದಾರೆ. ಇದರ ಪರಿಣಾಮ ಮಳೆ ನೀರು ಪಕ್ಕದ ತೋಟಕ್ಕೆ ನುಗ್ಗಿ ಕೃಷಿ ಹಾನಿಯುಂಟಾಗುತ್ತಿದೆ. ಕೊಳಚೆ ನೀರು ಮನೆಯಂಗಳಕ್ಕೆ ಬರುತ್ತಿದೆ. ಚತುಷ್ಪಥ ರಸ್ತೆ ಕಾಮಗಾರಿಗಾಗಿ ತನ್ನ ಕೃಷಿಭೂಮಿಯನ್ನು ಬಿಟ್ಟುಕೊಟ್ಟಿದ್ದು, ಈಗ ಇರುವ ಅಲ್ಪ ಕೃಷಿಯೂ ತೋಟದಲ್ಲಿ ನೀರು ನಿಂತು ಹಾನಿಯಾಗುತ್ತಿರುವುದರಿಂದ ಅವರು ಸಂಕಷ್ಟ ಅನುಭವಿಸುತ್ತಿದ್ದಾರೆ.
ಕಾಮಗಾರಿಯು ಅವೈಜ್ಞಾನಿಕವಾಗಿ ನಡೆದಿದ್ದು, ಒಳರಸ್ತೆಯಿಂದ ಮುಖ್ಯರಸ್ತೆಗೆ ಪ್ರವೇಶ ಮಾಡುವಲ್ಲಿ ವಾಹನಗಳ ಸಂಚಾರ ಗಮನಕ್ಕೆ ಬರುವುದಿಲ್ಲ. ಇಂತಹ ಸ್ಥಳಗಳಲ್ಲಿ ಸಾರ್ವಜನಿಕರ ಸುರಕ್ಷತೆಯ ದೃಷ್ಠಿಯಿಂದ ಬ್ಯಾರಿಕೇಡ್ ಅಳವಡಿಸಲು ಪಂಚಾಯತ್ ಮುಂದಾಗಿತ್ತು. ಆದರೆ ಲೋಕೋಪಯೋಗಿ ಇಲಾಖೆಯವರು ಅನುಮತಿ ನೀಡುತ್ತಿಲ್ಲ. ಕಾಮಗಾರಿಯ ಪ್ರಾರಂಭದಲ್ಲಿ ರಸ್ತೆಯ ಎರಡೂ ಬದಿ ಚರಂಡಿ ಸೇರಿದಂತೆ ಅಗತ್ಯ ವ್ಯವಸ್ಥೆ ಮಾಡಿಕೊಡುವುದಾಗಿ ತಿಳಿಸಿದ್ದರು. ಕಾಮಗಾರಿ ನಡೆಯುತ್ತಿರುವಾಗಲೇ ಅವ್ಯವಸ್ಥೆಯ ಬಗ್ಗೆ ಇಂಜಿನಿಯರ್ ಹಾಗೂ ಗುತ್ತಿಗೆದಾರರ ಗಮನಕ್ಕೆ ತರಲಾಗಿದ್ದರೂ ಅವರು ಸ್ಪಂದನೆ ನೀಡಿಲ್ಲ. ಸಂಭಾವ್ಯ ಅಪಘಾತ,ಅನಾಹುತ ತಪ್ಪಿಸುವ ನಿಟ್ಟಿನಲ್ಲಿ ಇನ್ನು ಮುಂದೆಯಾದರೂ ಸಂಬಂಧಪಟ್ಟ ಇಲಾಖೆಯವರು ಸೂಕ್ತ ಕ್ರಮಕೈಗೊಳ್ಳಬೇಕು. ಅನಾಹುತ ನಡೆದ ಬಳಿಕ ಸಾಂತ್ವನ ಹೇಳುವ ಬದಲು ಜನಪ್ರತಿನಿಽಗಳು ಅಽಕಾರಿಗಳು ಎಚ್ಚೆತ್ತುಕೊಂಡು ಈಗಲೇ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.
ರಸ್ತೆ ಕಾಮಗಾರಿ ಮಾಡುವಾಗ ಇಲಾಖೆಯಲ್ಲಿ ತನ್ನದೇ ಮಾರ್ಗಸೂಚಿಗಳಿದ್ದು ಅದರಂತೆ ಕಾಮಗಾರಿ ಮಾಡಬೇಕು. ಆದರೆ ಮಾರ್ಗಸೂಚಿ ಬಿಟ್ಟು ರಸ್ತೆ ಕಾಮಗಾರಿ ಮಾಡಿರುವುದೇ ಇಲ್ಲಿ ಅಪಘಾತಕ್ಕೆ ಕಾರಣವಾಗಿದೆ. ಸಂಪರ್ಕ ರಸ್ತೆಗಳಿಗೂ ಮಾರ್ಗಸೂಚಿಯಂತೆ ಸಂಪರ್ಕ ಕಲ್ಪಿಸಬೇಕೆಂಬ ನಿಯಮಗಳಿದ್ದರೂ ಇದರಲ್ಲಿಯೂ ತಾರತಮ್ಯ ಮಾಡಿದ್ದಾರೆ. ಐನೂರಕ್ಕೂ ಅಧಿಕ ನಿವಾಸಿಗಳಿರುವ ಸಂಪರ್ಕ ರಸ್ತೆಯನ್ನು ಹಾಗೆಯೇ ಬಿಟ್ಟಿದ್ದಾರೆ. ಕೇವಲ ಅರು ಮನೆಗಳಿಗೆ ತೆರಳುವಲ್ಲಿ ರಸ್ತೆ ಮಾಡಿದ್ದಾರೆ. ಆದರ್ಶ ನಗರದಲ್ಲಿ ಭಜನಾ ಮಂದಿರ, ಮಸೀದಿ, ಮನೆಗಳು ಸಂಪರ್ಕ ಕಲ್ಪಿಸುವ ರಸ್ತೆ ಮಾಡಿಲ್ಲ. ಅವರು ರಾಜಕೀಯ ಒತ್ತಡಕ್ಕೆ ಮಣಿದು ಆ ರೀತಿ ಮಾಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ವ್ಯವಸ್ಥೆಯ ನಿರ್ಲಕ್ಷ್ಯದಿಂದ ಬೇಸತ್ತ ಸಾರ್ವಜನಿಕರು, ರಸ್ತೆಯ ಗುಂಡಿಗಳಲ್ಲಿ ಗಿಡಗಳನ್ನು ನೆಟ್ಟು ವಿನೂತನವಾಗಿ ಪ್ರತಿಭಟಿಸಿದ್ದಾರೆ. ಆದರೆ, ಇದೇ ರಸ್ತೆಯಲ್ಲಿ ನಿತ್ಯ ಓಡಾಡುವ ಶಾಸಕ ಅಶೋಕ್ ಕುಮಾರ್ ರೈ ಅವರಿಗಾಗಲೀ, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗಾಗಲೀ ಈ ಪ್ರತಿಭಟನೆಯ ಬಿಸಿ ಮುಟ್ಟಿದಂತಿಲ್ಲ. “ಶಾಸಕರು ಓಡಾಡುವ ಮುಖ್ಯ ರಸ್ತೆಯೇ ಹೀಗಿದ್ದರೆ, ಇನ್ನು ಹಳ್ಳಿ ರಸ್ತೆಗಳ ಗತಿ ಏನು?” ಎಂದು ವಾಹನ ಸವಾರರು ಪ್ರಶ್ನಿಸುತ್ತಿದ್ದಾರೆ. ಅಧಿಕಾರಿಗಳ ಮೇಲೆ ನಿಯಂತ್ರಣ ಸಾಧಿಸುವಲ್ಲಿ ಶಾಸಕರು ಸಂಪೂರ್ಣ ವಿಫಲರಾಗಿದ್ದಾರೆ ಎಂಬ ಆರೋಪ ಬಲವಾಗಿ ಕೇಳಿಬರುತ್ತಿದೆ.
PWD ರಸ್ತೆಯಲ್ಲಿರುವ ಹೊಂಡಗಳಿಂದಾಗಿ ಅಪಘಾತಗಳಾಗುವ ಅಪಾಯ ಎದುರಾಗಿದೆ. ಅನೇಕ ವಾಹನಗಳು ಈ ಹೊಂಡಗಳಲ್ಲಿ ಹೋತು ಹೋಗಿ ವಾಹನ ಸಂಚಾರಕ್ಕೂ ಅಡಚನೆಯಾಗುತ್ತಿದೆ. ಈ ರಸ್ತೆಯಲ್ಲಿ ಸಂಚರಿಸಲು ಭಯಭೀತರಾಗಿರುವ ಸಾರ್ವಜನಿಕರು ಈ ಅವ್ಯವಸ್ಥೆಯ ವಿರುದ್ಧ ಬಿಜೆಪಿ ಕಾರ್ಯಕರ್ತರಲ್ಲಿ ದೂರುಗಳನ್ನು ನೀಡುತ್ತಿದ್ದು ಹೋರಾಟ ನಡೆಸಲು ಒತ್ತಡ ಹೇರುತ್ತಿದ್ದಾರೆ. ಸಾರ್ವಜನಿಕರ ಈ ಸಮಸ್ಯೆಗಳಿಗೆ ಸ್ಪಂದಿಸಿ ಅವರನ್ನು ಜೊತೆಗೂಡಿಸಿಕೊಂಡು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.
ದಿನಾಂಕ 25.07.2025 ಶುಕ್ರವಾರದ ಒಳಗೆ ತಕ್ಷಣ ರಸ್ತೆ ದುರಸ್ತಿಗೊಳಿಸಿ ಚರಂಡಿ ವ್ಯವಸ್ಥೆ ಕಲ್ಪಿಸಬೇಕಾಗಿ ಆಗ್ರಹಿಸುತ್ತಾ ಇದಕ್ಕೆ ತಪ್ಪಿದಲ್ಲಿ ದಿನಾಂಕ 26.07.2025 ಶನಿವಾರದಿಂದ ಇದರ ವಿರುದ್ಧ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ನೀಡುತ್ತಿದ್ದೇವೆ. ಮುಂದಕ್ಕೆ ಇದರಿಂದಾಗುವ ಎಲ್ಲಾ ಅನಾಹುತಗಳಿಗೆ ನಿಮ್ಮ ಇಲಾಖೆಯೇ ನೇರ ಹೊಣೆಯಾಗಲಿದೆ. ಎಂದು ಹೇಳಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಪುತ್ತೂರು ಅರ್ಯಾಪು ಬಿಜೆಪಿ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ನಾಗೇಶ್ ಟಿ ಎಸ್ ಕೆಮ್ಮಾಯಿ, ಪುತ್ತೂರು ಉಪ್ಪಿನಂಗಡಿ ರಾಜ್ಯ ಹೆದ್ದಾರಿ ರಸ್ತೆಯು ಪುತ್ತೂರನ್ನು ಸಂಪರ್ಕಿಸುವ ಅತೀ ಪ್ರಮುಖ ರಸ್ತೆಯಾಗಿದ್ದು ಸಾವಿರಾರು ವಾಹನಗಳು ಓಡಾಡುವ ರಸ್ತೆಯಾಗಿದೆ. ಹಿಂದೆ ಆಡಳಿತದಲ್ಲಿ ಇದ್ದ ಬಿಜೆಪಿ ಸರ್ಕಾರ ಇದನ್ನು ರಾಜ್ಯ ಹೆದ್ದಾರಿಯಾಗಿ ಪರಿವರ್ತಿಸಿ ಅಭಿವೃದ್ಧಿ ನಡೆಸಿತ್ತು ಪ್ರಸ್ತುತ ಇದರ ನಿರ್ವಹಣೆಯನ್ನು ಮಾಡದೆ ಲೋಕೋಪಯೋಗಿ ಇಲಾಖೆಯ ನಿರ್ಲಕ್ಷ್ಯದಿಂದ ಸಂಪೂರ್ಣ ಹದಗೆಟ್ಟು ನಿತ್ಯ ಅಪಾಯವನ್ನು ಎದುರಿಸುವಂತಾಗಿದೆ, ಅಪಘಾತಗಳು ರಸ್ತೆಯಲ್ಲಿ ವಾಹನಗಳು ಹೂತು ಹೋಗುವ ಪ್ರಕರಣಗಳು ದಿನನಿತ್ಯ ನಡೆಯುತ್ತಿದೆ. ತಕ್ಷಣ ಇದನ್ನು ಸರಿ ಪಡಿಸದಿದ್ದಲ್ಲಿ ಬಿಜೆಪಿ ಮತ್ತು ಸಾರ್ವಜನಿಕರೊಂದಿಗೆ ಸೇರಿಕೊಂಡು ಪ್ರತಿಭಟನೆ ಮಾಡುವುದಾಗಿ ಹೇಳಿದರು.
ಮಾಜಿ ಗ್ರಾಮ ಪಂಚಾಯತ್ ಸದಸ್ಯ ರತ್ನಾಕರ ಪ್ರಭು ಮಾತನಾಡಿ
ಈಗಾಗಲೇ ಹಲವರು ಅಪಘಾತ ಗಳಾಗಿದ್ದು ಸವಾರರು ಸಣ್ಣ ಪುಟ್ಟ ಗಾಯಗಳಾಗಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆದು ಕೊಂಡಿದ್ದಾರೆ ಇದೇ ರೀತಿ ನಿರ್ಲಕ್ಷಿಸಿ ಅಪಘಾತವಾದರೆ ಇನ್ನಷ್ಟು ಸಾವು ನೋವು ಅಂಗವಿಕಲತೆ ಆಗಬಹುದು ಆದುದರಿಂದ ಶೀಘ್ರವಾಗಿ ದುರಸ್ಥಿ ನಡೆಯಲಿ ಎಂದರು
ಈ ಸಂದರ್ಭದಲ್ಲಿ ಚಿಕ್ಕಮುಡ್ನೂರು ಬಿಜೆಪಿ ಶಕ್ತಿಕೇಂದ್ರದ ಕಾರ್ತಿಕ್ ಅಂದ್ರಟ್ಟ , ಬೂತ್ ಅಧ್ಯಕ್ಷರುಗಳಾದ ದಯಾನಂದ ಅನಂತಿಮಾರು, ಪ್ರಕಾಶ್ ಚಿಕ್ಕಮುಡ್ನೂರು, ಬನ್ನೂರು ಪಂಚಾಯತ್ ಅಧ್ಯಕ್ಷೆ ಸ್ಮಿತಾ ಕೃಷ್ಣ, ಪಂ. ಮಾಜಿ ಅಧ್ಯಕ್ಷೆ ಜಯರಮೇಶ್, ಪಂ ಉಪಾಧ್ಯಕ್ಷ ಶೀನಪ್ಪ ಕುಲಾಲ್ ಸದಸ್ಯರಾದ ರಾಘವೇಂದ್ರ ಅಂದ್ರಟ್ಟ,
ತಿಮ್ಮಪ್ಪ ಮೂಡಾಯೂರು, ಬಿಜೆಪಿ ಕಾರ್ಯಕರ್ತರಾದ ನವೀನ್ ಕಂಜೂರು, ಹರೀಶ್, ಹಾಗೂ ಸಂತೋಷ್ ಮತ್ತಿತರರು ಉಪಸ್ಥಿತರಿದ್ದರು
ಒಟ್ಟಿನಲ್ಲಿ, ಪುತ್ತೂರು-ಉಪ್ಪಿನಂಗಡಿ ಹೆದ್ದಾರಿ ಕೇವಲ ರಸ್ತೆಯಾಗಿ ಉಳಿದಿಲ್ಲ, ಬದಲಾಗಿ ಆಡಳಿತಶಾಹಿ ಮತ್ತು ಜನಪ್ರತಿನಿಧಿಗಳ ಬೇಜವಾಬ್ದಾರಿತನದ ಹಾಗೂ ಕಳಪೆ ಕಾಮಗಾರಿಯ ಜೀವಂತ ಸ್ಮಾರಕವಾಗಿ ಮಾರ್ಪಟ್ಟಿದೆ. ಇನ್ನಾದರೂ ಸಂಬಂಧಪಟ್ಟವರು ಎಚ್ಚೆತ್ತುಕೊಳ್ಳದಿದ್ದರೆ, ಸಂಭವಿಸಬಹುದಾದ ಅನಾಹುತಗಳಿಗೆ ಯಾರು ಹೊಣೆ?