ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ಖನನಕ್ಕೆ ಬಳಸಲಾಗುತ್ತಿರುವ GPR ತಂತ್ರಜ್ಞಾನವನ್ನು ಬಳಸಿಕೊಂಡು ಬಾಬಾ ಬುಡನ್ ಗಿರಿಯಲ್ಲಿರುವ ಮುಸ್ಲಿಂ ಸಮಾಧಿಗಳ ಉತ್ಖನನ ಮಾಡಬೇಕು ಎಂಬ ಆಗ್ರಹ ಕೇಳಿ ಬರುತ್ತಿದೆ.
ಹೌದು..ಧರ್ಮಸ್ಥಳ ಮಾದರಿಯಲ್ಲೇ ಬಾಬಾ ಬುಡನ್ ಗಿರಿಯಲ್ಲೂ ಮುಸ್ಲಿಂ ಸಮಾಧಿಗಳ ‘GPR’ ಉತ್ಖನನ ಮಾಡಬೇಕು ಎಂದು ಹಿಂದೂಪರ ಸಂಘಟನೆಗಳು ಆಗ್ರಹಿಸುತ್ತಿವೆ. ಆ ಮೂಲಕ ಚಿಕ್ಕಮಗಳೂರು ತಾಲ್ಲೂಕಿನ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿರುವ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ರಚನೆ ಮಾಡಿ ಉತ್ಖನನ ಮಾಡುವಂತೆ ಹಿಂದೂ ಸಂಘಟನೆಗಳು ಪಟ್ಟು ಹಿಡಿದಿವೆ. ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸುವಂತೆ ಸರ್ಕಾರಕ್ಕೆ ಹಿಂದೂಪರ ಸಂಘಟನೆಗಳು ಆಗ್ರಹಿಸುತ್ತಿದ್ದು, ಜಿಪಿಆರ್ ತಂತ್ರಜ್ಞಾನ ಬಳಸಿ ಉತ್ಖನನ ಮಾಡುವಂತೆ ಮನವಿ ಮಾಡಲಾಗುತ್ತಿದೆ.
ದತ್ತಪೀಠ ಹಿಂದೂಗಳ ಪೀಠ ದತ್ತಾತ್ರೇಯ ಸ್ವಾಮಿ ತಪಸ್ಸು ಮಾಡಿದ ಜಾಗ. ಇಲ್ಲಿ ನಕಲಿ ಗೋರಿಗಳನ್ನು ನಿರ್ಮಿಸಲಾಗಿದ್ದು ಈ ಬಗ್ಗೆ ಸತ್ಯ ತಿಳಿಯಲು ಆಧುನಿಕ ತಂತ್ರಜ್ಞಾನ ಬಳಸಿ ಉತ್ಖನನ ಮಾಡುವಂತೆ ಚಿಕ್ಕಮಗಳೂರು ಜಿಲ್ಲಾಡಳಿತಕ್ಕೆ ಹಿಂದೂ ಸಂಘಟನೆ ಮುಖಂಡ ರಘು ಸಕಲೇಶಪುರ ಮನವಿ ಮಾಡಿದ್ದಾರೆ.
ಏನಿದು ಬಾಬಾ ಬುಡನ್ ಗಿರಿ ವಿವಾದ? 2017ರ ಡಿಸೆಂಬರ್ 3 ರಂದು ದತ್ತ ಜಯಂತಿ ದಿನ ಇನಾಂ ದತ್ತಾತ್ರೇಯ ಬಾಬಾ ಬುಡನ್ ದರ್ಗಾ ಆವರಣದಲ್ಲಿದ್ದ ಎರಡು ಗೋರಿಗಳನ್ನು ಧ್ವಂಸಗೊಳಿಸಿದ್ದ ಘಟನೆ ನಡೆದಿತ್ತು. ಈ ಕುರಿತಾಗಿ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸ್ ಕೂಡ ದಾಖಲಾಗಿತ್ತು. ಸುಮಾರು 14 ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಾಗಿತ್ತು. ಅದೇ ರೀತಿಯಾಗಿ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿನ ಗೋರಿಗಳಿಗೆ ಅರ್ಚಕರು ಕುಂಕುಮ ಹಚ್ಚಿ, ಪೂಜೆ ಮಾಡಿದ್ದಾರೆ ಎಂದು ಮುಸ್ಲಿಂ ಸಮುದಾಯದ ಮುಖಂಡರು ಆರೋಪಗಳು ಕೇಳಿಬಂದಿದ್ದವು.
ಘಟನೆ ಖಂಡಿಸಿ ಶಾಖಾದ್ರಿ ಕುಟುಂಬಸ್ಥರು ದರ್ಗಾದ ಎದರು ಪ್ರತಿಭಟನೆ ಮಾಡಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಶಾಖಾದ್ರಿ ಕುಟುಂಬಸ್ಥರು ಮತ್ತು ಮುಜರಾಯಿ ಇಲಾಖೆಯ ಅಧಿಕಾರಿಗಳ ಮಧ್ಯೆ ವಾಗ್ವಾದ ಕೂಡ ನಡೆದಿತ್ತು. ಮುಸ್ಲಿಂ ಮುಖಂಡರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.