ಪುತ್ತೂರು: ವಿವಾಹವಾಗುವುದಾಗಿ ಭರವಸೆ ನೀಡಿ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ಸಂಭವಿಸಿದೆ. ಡಿಎನ್ಎ ಪರೀಕ್ಷೆಯ ವರದಿ ಹೊರಬಿದ್ದಿದ್ದು, ಶ್ರೀಕೃಷ್ಣ ಜೆ. ರಾವ್ ಮಗುವಿನ ತಂದೆ ಎಂದು ಸಂತ್ರಸ್ತೆಯ ಕುಟುಂಬಕ್ಕೆ ತಿಳಿಸಲಾಗಿದೆ. ಈ ಮಾಹಿತಿಯನ್ನು ವಿಶ್ವಕರ್ಮ ಮಹಾ ಮಂಡಲದ ರಾಜ್ಯಾಧ್ಯಕ್ಷ ಕೆ.ಪಿ. ನಂಜುಂಡಿ ಅವರು ಪತ್ರಿಕಾಗೋಷ್ಠಿಯಲ್ಲಿ ಬಹಿರಂಗಪಡಿಸಿದರು.
“ಸಮಾಜದ ಬಡ ಹೆಣ್ಣುಮಗಳ ವಿರುದ್ದ ಅನ್ಯಾಯ ನಡೆದಿದೆ. ಹಿಂದಿನ ಕಾಲದಲ್ಲಿ ಸೀತಾಮಾತೆಗೆ ಅಗ್ನಿ ಪರೀಕ್ಷೆ ನಡೆದಿತ್ತು. ಇಂದಿನ ಕಾಲದಲ್ಲಿ ಡಿಎನ್ಎ ಪರೀಕ್ಷೆಯೇ ಅಂತಿಮ ಸತ್ಯ. ಈ ಪ್ರಕರಣದಲ್ಲೂ ವರದಿ ಸ್ಪಷ್ಟವಾಗಿ ಬಂದಿದೆ ಮತ್ತು ಈಗಾಗಲೇ ಕೋರ್ಟ್ಗೆ ಸಲ್ಲಿಕೆಯಾಗಿದೆ,” ಎಂದು ಅವರು ಹೇಳಿದರು.
ಅವರು ಮುಂದುವರೆದು, “ಪಿಜಿ ಜಗನ್ನಿವಾಸ ರಾವ್ ಅವರ ಪುತ್ರ ಶ್ರೀಕೃಷ್ಣ ಜೆ. ರಾವ್ ಸಂತ್ರಸ್ತೆಯೊಂದಿಗೆ ವಿವಾಹವಾಗುವುದು ನಮ್ಮ ಒತ್ತಾಯ. ಹುಡುಗ ಇನ್ನೂ ಬಾಳಿನ ಹಾದಿ ಮುಂದುವರಿಸಬೇಕಾಗಿದೆ. ಮದುವೆಯಾಗುವುದು ಇಬ್ಬರಿಗೂ ಉತ್ತಮ. ನಮಗೆ ಕೋರ್ಟ್ ಪ್ರಕ್ರಿಯೆ ಬೇಡವಾದರೂ, ಕಾನೂನು ತನ್ನ ಮಾರ್ಗದಲ್ಲಿ ಸಾಗುತ್ತದೆ,” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಸಂತ್ರಸ್ತೆ, ಆಕೆಯ ತಾಯಿ ನಮಿತಾ ಹಾಗೂ ಸಂಘದ ಪ್ರಮುಖರು ಉಪಸ್ಥಿತರಿದ್ದರು.