ಪುತ್ತೂರು: ಮಹತೋಭಾರ ಮಹಾಲಿಂಗೇಶ್ವರ ದೇವಳದಲ್ಲಿ ದೀಪಾವಳಿ ಪ್ರಯುಕ್ತ ಅ.18ರಂದು ವಿಶೇಷವಾಗಿ ಶಿವಲಿಂಗಕ್ಕೆ ಶುದ್ಧ ಎಳ್ಳೆಣ್ಣೆ ಅಭಿಷೇಕ ಕಾರ್ಯಕ್ರಮ ನಡೆಯಲಿದೆ. ಭಕ್ತರು ಎಳ್ಳೆಣ್ಣೆ ಸಮರ್ಪಣೆ ಮಾಡಬಹುದಾಗಿದ್ದು ಸಮರ್ಪಣಾ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಲಾಯಿತು.
ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಮೊದಲು ಎಳ್ಳೆಣ್ಣೆ ಪಡೆದು ಶೇಖರಣಾ ಡಬ್ಬಕ್ಕೆ ಎರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ವಸಂತ ಕೆದಿಲಾಯ ಪ್ರಾರ್ಥನೆ ಸಲ್ಲಿಸಿದರು.
ದೇವಳದಲ್ಲಿ ಈ ಹಿಂದೆ ನಡೆಸಲಾದ ಅಷ್ಟಮಂಗಲ ಪ್ರಶ್ನೆ ಚಿಂತನೆಯಲ್ಲಿ ಕಂಡು ಬಂದ ಪ್ರಕಾರ ದೈವಜ್ಞರು ಉಲ್ಲೇಖಿಸಿದಂತೆ ದೀಪಾವಳಿಯ ಸಂದರ್ಭದಲ್ಲಿ ಅ.18ರಂದು ಶಿವಲಿಂಗಕ್ಕೆ ಶುದ್ಧ ಎಳ್ಳೆಣ್ಣೆ ಅಭಿಷೇಕ ನಡೆಯಲಿದ್ದು, ಭಕ್ತರೆಲ್ಲರಿಗೂ ಎಳ್ಳೆಣ್ಣೆ ಸಮರ್ಪಣೆಗೆ ಅವಕಾಶವಿದೆ ಎಂದು ಪಂಜಿಗುಡ್ಡೆ ಈಶ್ವರ ಭಟ್ ಅವರು ತಿಳಿಸಿದರು.
ದೇವಸ್ಥಾನಕ್ಕೆ ಕೆಯ್ಯೂರು ಶ್ರೀ ಮಹಿಷಮರ್ದಿನಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಮೊಕ್ತೇಸರ, ಪ್ರಗತಿಪರ ಕೃಷಿಕ ಮೋಹನ್ ರೈ ಓಲೆಮುಂಡೋವು ಅವರು 12 ಕಿಂಟ್ವಾಲ್ ಅಕ್ಕಿ ಮತ್ತು 5 ಲೀಟರ್ ಶುದ್ದ ಎಳ್ಳೆಣ್ಣೆ ಸಮರ್ಪಣೆ ಮಾಡಿದರು.
ಮೋಹನ್ ರೈ ಓಲೆಮುಂಡೋವು ಅವರು ದಂಪತಿ ಸಮೇತ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರ ಕೋರಿಕೆಯಂತೆ ದೇವಸ್ಥಾನಕ್ಕೆ ಅಕ್ಕಿ ಮತ್ತು ಎಳ್ಳೆಣ್ಣೆ ಸಮರ್ಪಣೆ ಮಾಡಿದ್ದಾರೆ.
ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಮಹಾಬಲ ರೈ ವಳತ್ತಡ್ಕ, ವಿನಯ ಸುವರ್ಣ, ಸುಭಾಷ್ ರೈ ಬೆಳ್ಳಿಪ್ಪಾಡಿ, ಈಶ್ವರ್ ಬೆಡೇಕರ್, ಪ್ರಮುಖರಾದ ಕಿಟ್ಟಣ್ಣ ಗೌಡ ಬಪ್ಪಳಿಗೆ, ಶಿವರಾಮ ಆಳ್ವ, ಭಾಸ್ಕರ ಬಾರ್ಯ, ಗೋವಿಂದ ಭಟ್, ಗೋವರ್ಧನ್ ಕಾವೇರಿಮೂಲೆ ಪಾಲ್ಗೊಂಡಿದ್ದರು