ಪುತ್ತೂರು: ಕೃಷ್ಣನಾರಾಯಣ ಮುಳಿಯ ಸಾರಥ್ಯದ ಕೃಷ್ಣಮುಳಿಯ ಗ್ರೀನ್ ಎನರ್ಜಿ ಎಲ್ಎಲ್ಪಿ ಸಂಸ್ಥೆಯಿಂದ ರೋಟರಿ ಕ್ಲಬ್ ಪುತ್ತೂರು ಈಸ್ಟ್, ಸ್ವಚ್ಛ ಭಾರತ ಟ್ರಸ್ಟ್ ನೇತೃತ್ವದಲ್ಲಿ ತ್ಯಾಜ್ಯವನ್ನು ಬಳಸಿಕೊಂಡು ಬಯೋ ಸಿಎನ್ಜಿ ಗ್ಯಾಸ್ ಉತ್ಪಾದನೆ ಮೂಲಕ ಝೀರೋ ಡಂಪಿಂಗ್ ಯಾರ್ಡ್ ಮಾಡುವುದಲ್ಲದೆ ದೇಶದಲ್ಲೇ ಪುತ್ತೂರು ನಗರಸಭೆ ವ್ಯಾಪ್ತಿಯಲ್ಲಿ ಪ್ರಥಮ ಘಟಕವಾಗಿ ಹೊರಹೊಮ್ಮಿರುವ ಪುತ್ತೂರು ಬನ್ನೂರಿನ ನೆಕ್ಕಿಲು ಎಂಬಲ್ಲಿನ ನೆಲಭರ್ತಿ ಸ್ಥಳ(ಲ್ಯಾಂಡ್ಫಿಲ್ ಸೈಟ್)ದಲ್ಲಿ ರೂ. 3 ಕೋಟಿ ವೆಚ್ಚದಲ್ಲಿ ಗ್ಯಾಸ್ ಉತ್ಪಾದನೆಯ ಕಂಪ್ರೆಸ್ಡ್ ಬಯೋ ಗ್ಯಾಸ್ (ಸಿ.ಬಿ.ಜಿ) ಘಟಕವು ಮಾ.15ರಂದು ಲೋಕಾರ್ಪಣೆಗೊಂಡಿತು.
ಘಟಕ ಪೂರ್ಣಗೊಂಡರೂ ಕೇಂದ್ರ ಸರಕಾರದ ಪೆಟ್ರೋಲಿಯಂ ಆಂಡ್ ಎಕ್ಸ್ಪ್ರೋಸಿವ್ ಸೇಫ್ಟಿ ಆರ್ಗನೈಸೇಶನ್ (ಪೆಸೋ)ನ ಲೈಸನ್ಸ್ ಬೇಕಾಗಿತ್ತು. ಅದೀಗ ಸಿಕ್ಕಿದ ಬಳಿಕ ಅಧಿಕೃತ ಲೋಕಾರ್ಪಣೆಗೊಂಡಿದೆ.
ಗ್ಯಾಸ್ ಉತ್ಪಾದನೆಯ ಕಂಪ್ರೆಸ್ಡ್ ಬಯೋ ಗ್ಯಾಸ್ (ಸಿ.ಬಿ.ಜಿ) ಘಟಕವನ್ನು ಶಾಸಕ ಅಶೋಕ್ ಕುಮಾರ್ ರೈ ಅವರು ಉದ್ಘಾಟಿಸಿ ಮಾತನಾಡಿ, ಈ ಘಟಕದ ಆರಂಭಕ್ಕಾಗಿ ಎಷ್ಟು ಕಷ್ಟ ಆಗಿದೆ ಎಂಬುದು ಕೃಷ್ಣನಾರಾಯಣ ಮುಳಿಯ ಮತ್ತು ರಾಜೇಶ್ ಬೆಜ್ಜಂಗಳ ಅವರಿಗೆ ಮಾತ್ರ ಗೊತ್ತು. ಈ ಯೋಜನೆಗೆ ಸರಕಾರದಿಂದ ಜಾಗ ಮತ್ತು ಅನುಮತಿ ಮಾತ್ರ ನೀಡಲಾಗಿದೆ. ಉಳಿದ ಯಾವುದೇ ಆರ್ಥಿಕ ಸಹಾಯ ಒದಗಿಸಿಲ್ಲ. ಕೃಷ್ಣನಾರಾಯಣ ಮುಳಿಯ ಅವರು ಸುಮಾರು 3 ಕೋಟಿ ರೂ. ಸಾಲ ಮಾಡಿ ತಿಂಗಳಿಗೆ 6 ಲಕ್ಷ ರೂ. ಇಎಮ್ಐ ಪಾವತಿಸಿ ಸಾರ್ವಜನಿಕರಿಗೆ ಪ್ರಯೋಜನ ಆಗಲಿ ಎಂದು ಕೆಲಸ ಮಾಡಿದ್ದಾರೆ. ಅವರಿಗೆ ಇದರಿಂದ ಒಂದು ರೂಪಾಯಿ ಕೂಡಾ ಪ್ರಯೋಜನ ಆಗಿಲ್ಲ. ಒಂದು ಕಾಲದಲ್ಲಿ ಈ ಭಾಗಕ್ಕೆ ಯಾರೂ ಬರಲು ಇಚ್ಚಿಸುತ್ತಿರಲಿಲ್ಲ. ಬಯೋಗ್ಯಾಸ್ ಬಂದ ಬಳಿಕ ಶೇ.75ರಷ್ಟು ವಾಸನೆ ಕಡಿಮೆ ಆಗಿದೆ. ಹಾಗಾಗಿ ಅಕ್ಕಪಕ್ಕ ಲೇ ಔಟ್ ಆರಂಭಗೊಂಡಿದೆ ಎಂದ ಅವರು ಸ್ವಚ್ಚತೆ ಇಲ್ಲದೆ ಯಾವುದೇ ನಗರ ಅಭಿವೃದ್ಧಿಯಾಗಲು ಸಾಧ್ಯವಿಲ್ಲ. ಮನೆ ಮನೆಯಿಂದ ಕಸ ಸಂಗ್ರಹ ಸಾಕಾಗುವುದಿಲ್ಲ. ಸರಿಯಾಗಿ ವಿಂಗಡಿಸಿದ ಕಸವನ್ನು ಜನರು ಕೊಟ್ಟು ಸಹಕರಿಸಬೇಕು. 8 ಟನ್ ಕಸ ಬೇಕಾಗಿದೆ. ಆದರೆ ಈಗ 3 ಟನ್ ಮಾತ್ರ ಕಸ ಬರುತ್ತಿದೆ. ಹಾಗಾಗಿ ಇಂತಹ ಯೋಜನೆಗೆ ನಮ್ಮಿಂದ ಆಗುವಷ್ಟು ಸಹಕಾರ ನೀಡಬೇಕು. ನಮ್ಮಿಂದ ಏನು ಆಗದಿದ್ದರೂ ಕಾಲು ಎಳೆಯುವ ಕೆಲಸ ಮಾಡಬಾರದು ಎಂದರು. ನಗರಸಭೆ ಜೊತೆ ಒಪ್ಪಂದ ಮಾಡಿಕೊಂಡು ನಗರಸಭೆ ವಾಹನಗಳಿಗೆ ಗ್ಯಾಸ್ ಖರೀದಿಸುವ ರೀತಿಯಲ್ಲಿ ಎಗ್ರಿಮೆಂಟ್ ಮಾಡಲು ಪೂರ್ಣ ಸಹಕಾರ ನೀಡಲಾಗುವುದು. ದೇಶಕ್ಕೆ ಮಾದರಿಯಾಗುವ ವ್ಯವಸ್ಥೆ ಆಗಿದೆ. ಮುಂದಕ್ಕೆ ಪುತ್ತೂರಿಗೆ ಡ್ರೈನೇಜ್ ಸಿಸ್ಟಮ್ ಆಗಲಿದೆ ಎಂದು ಶಾಸಕರು ಹೇಳಿದರು.
ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಅವರು ಮಾತನಾಡಿ, ಉದ್ಯಮದ ಜೊತೆಗೆ ಸ್ವಚ್ಚತಾ ಸೇವೆ ಮಾಡುತ್ತಿರುವ ಕೃಷ್ಣನಾರಾಯಣ ಮುಳಿಯ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಅವರು ಮಹತ್ಮಾಗಾಂಧಿಜಿ, ಪ್ರಧಾನಿ ನರೇಂದ್ರ ಮೋದಿಯವರ ಸ್ವದೇಶಿ ಚಿಂತನೆಗೆ ಒತ್ತು ನೀಡಿದ್ದಾರೆ. ಶೌಚಾಲಯ, ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ರಸ್ತೆ ಬದಿ, ಎಲ್ಲೆಂದರಲ್ಲಿ ಕಸ ಹಾಕುವವರಲ್ಲಿಯೂ ಜಾಗೃತಿ ಮೂಡಿಸುವ ಕೆಲಸ ಆಗಬೇಕಾಗಿದೆ. ಮನೆ ಮನೆಯಲ್ಲಿ ಸ್ವಯಂ ಪ್ರೇರಿತರಾಗಿ ಕಸ ಕೊಡುವುದರೊಂದಿಗೆ ಕಸವನ್ನು ವಿಂಗಡಿಸಿ ಕೊಟ್ಟಾಗ ಕಸ ಸಂಸ್ಕರಣೆಗೆ ಪ್ರಯೋಜವಾಗಲಿದೆ. ಹೀಗೆ ಘಟಕದಲ್ಲಿ ಉತ್ಪತ್ತಿಯಾಗುವ ಗ್ಯಾಸ್ ಪರಿಸರಕ್ಕೆ ಪೂರಕವಾಗಿರುವುದು ಸಂತೋಷದ ವಿಚಾರ ಎಂದರು.
ನಗರಸಭೆ ಪೌರಾಯುಕ್ತೆ ವಿದ್ಯಾ ಎಂ.ಕಾಳೆ ಅವರು ಮಾತನಾಡಿ, 2014ರಲ್ಲಿ ಸ್ವಚ್ಛ ಭಾರತ್-1 ಯೋಜನೆಯಲ್ಲಿ ಸರಕಾರದಿಂದ ಶೌಚಾಲಯ ನಿರ್ಮಾಣ, ಕಸ ಸಂಗ್ರಹಕ್ಕೆ ಗಮನ ಕೊಡಲಾಯಿತು. ಸಂಗ್ರಹವಾದ ಕಸವನ್ನು ನಿಗದಿ ಪಡಿಸಿದ ಸ್ಥಳದಲ್ಲಿ ಶೇಖರಣೆ ಮಾಡಲಾಯಿತು. 2ನೇ ಯೋಜನೆಯಲ್ಲಿ ಸಂಗ್ರಹದಾದ ಕಸವನ್ನು ಸಂಸ್ಕರಣೆ ಮಾಡುವ ನಿಟ್ಟಿನಲ್ಲಿ ಘನ ತ್ಯಾಜ್ಯ ಘಟಕ ವೈಜ್ಞಾನಿಕ ಘಟಕ ಆಗಿ ಮಾರ್ಪಾಡಾಯಿತು. ಅಲ್ಲಿ ಪಾರಂಪರಿಕ ತ್ಯಾಜ್ಯವನ್ನು ವರ್ಗೀಕರಿಸಲಾಯಿತು. ಈಗ ನಗರಸಭೆ ವ್ಯಾಪ್ತಿಯ ಬನ್ನೂರಿನಲ್ಲಿ ಡಂಪಿಂಗ್ ಯಾರ್ಡ್ ಬದಲು ಘನ ತ್ಯಾಜ್ಯ ವೈಜ್ಷಾನಿಕ ಸಂಸ್ಕರಣಾ ಘಟಕ ಆಗಿದೆ. ಹಸಿ ತ್ಯಾಜ ಕಸದಿಂದ ಗ್ಯಾಸ್ ಉತ್ಪಾದನೆಗೆ ಪುತ್ತೂರಿನ ಸಹೃದಯ ಜನತೆ ಸಹಕಾರ ನೀಡಿದ್ದಾರೆ. ಈ ಘಟಕದಲ್ಲಿ ಮಿಥೇನ್ ಉತ್ಪಾದನೆ ಆಗಲಿದೆ. ಇದು ಗಾಳಿಗಿಂತ ಹಗುರವಾದ್ದರಿಂದ ಇದರಿಂದ ಸಮಸ್ಯೆಯಿಲ್ಲ. ಉರಿದಾಗ ಹೆಚ್ಚು ಶಕ್ತಿಯನ್ನೂ ಕೊಡುತ್ತದೆ. ನಗರಸಭೆಯಿಂದ ಹಸಿ ಕಸ ಸರಿಯಾಗಿ ವಿಂಗಡಣೆಯಾಗಿ ಬರುತ್ತಿಲ್ಲ ಎಂಬ ಮಾಹಿತಿ ಇದ್ದು, ಈ ಕುರಿತು ಇನ್ನಷ್ಟು ಜಾಗೃತಿ ಮೂಡಿಸುವ ಕೆಲಸ ಮಾಡುತ್ತೇವೆ. ಜೊತೆಗೆ ಉಪ್ಪಿನಂಗಡಿ, ನೆಕ್ಕಿಲಾಡಿ ಪಂಚಾಯತ್ ಮೂಲಕವೂ ಹಸಿ ಕಸ ಬರುವ ವ್ಯವಸ್ಥೆ ಮಾಡುತ್ತೇವೆ ಎಂದರು.
ನಗರಸಭೆಯ ಮಾಜಿ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ್ ಅವರು ಮಾತನಾಡಿ, 2018ರಲ್ಲಿ ನಗರಸಭೆ ಸದಸ್ಯರ ಮೊದಲ ಸಭೆಯಲ್ಲಿ ನಮ್ಮ ಬೇಡಿಕೆಯಂತೆ ಆಗಿನ ಶಾಸಕರು ಹಸಿ ಕಸ ಸಂಗ್ರಹಕ್ಕೆ ವಾಹನದ ವ್ಯವಸ್ಥೆ ಮಾಡಿಕೊಟ್ಟರು. ಇದೀಗ ಹಸಿ ಕಸದ ಮೂಲಕ ಪುತ್ತೂರಿಗೆ ಬಯೋಗ್ಯಾಸ್ ಅನ್ನು ಮುಳಿಯದವರು ನೀಡುವ ಮೂಲಕ ಪುತ್ತೂರಿನ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೋಟರಿ ಸ್ವಚ್ಛ ಭಾರತ್ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷರೂ, ಕೃಷ್ಣಮುಳಿಯ ಗ್ರೀನ್ ಎನರ್ಜಿ ಎಲ್ಎಲ್ಪಿ ಸಂಸ್ಥೆಯ ಆಡಳಿತ ನಿರ್ದೇಶಕರೂ ಆದ ಕೃಷ್ಣನಾರಾಯಣ ಮುಳಿಯ ಅವರು ಮಾತನಾಡಿ, ಇದೊಂದು ಸಾರ್ಥಕವಾದ ಅನುಭವ. 12 ವರ್ಷದ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರು ಸ್ವಚ್ಛತೆಯ ಕಲ್ಪನೆ ಮಾಡುವ ಮೊದಲೇ ಮೇ 2ರಂದು ಜೆಸಿಯಿಂದ ಸ್ವಚ್ಛ ಪುತ್ತೂರು ಎಂಬ ಕಲ್ಪನೆಯನ್ನು ಆರಂಭಿಸಿದ್ದೆವು. ಈ ಯೋಜನೆ ಆರಂಭಿಸುವಾಗ ಯಾವುದೇ ಮಾಹಿತಿ, ತರಬೇತಿ ಪಡೆಯಲು ನಮ್ಮ ಮುಂದೆ ಯಾವ ಪ್ರೊಜೆಕ್ಟ್ ಸಹ ಇರಲಿಲ್ಲ. ಆರಂಭದಲ್ಲಿ ಕಷ್ಟ ಆಗಿದೆ. ಆದರೆ ಹಿಡಿದ ಯೋಜನೆಯನ್ನು ಮಧ್ಯದಲ್ಲಿ ಬಿಡದೆ ತುದಿ ತಲುಪಿಸಿದ್ದೇವೆ. ಈ ಯೋಜನೆ ಬಗ್ಗೆ ತಿಳಿಯಲು ಬೇರೆ ಬೇರೆ ಕಡೆಯಿಂದ ಬರುತ್ತಿದ್ದಾರೆ. ಇದು ನಮಗೆ ಹೆಮ್ಮೆ ಕೊಡುತ್ತಿದೆ ಎಂದರು. ನಾವು ಪ್ರಥಮ ಹಂತದಲ್ಲಿ ಜನರಿಗೆ ಕಸ ವಿಂಗಡಣೆಗೆ ಅರಿವು ಮೂಡಿಸುವ ಕೆಲಸ ಮಾಡಿದೆವು. ಆ ಬಳಿಕ ಪುತ್ತೂರಿನ ಜನತೆ ಸಹಕಾರ ನೀಡಿದ್ದಾರೆ. ನಮಗೆ ವಿಂಗಡಿಸಿದ ಕಸ ಬೇಕಾಗಿದೆ. 8 ಟನ್ ಕಸ ಬೇಕಾಗಿದೆ. ಪುತ್ತೂರಿನಲ್ಲಿ ಲೆಕ್ಕ ಪ್ರಕಾರ 30 ಟನ್ ವಿಂಗಡಿಸಿದ ಕಸ ಬರಬೇಕಾಗಿತ್ತು. ಆದರೆ ಈಗ ಕೇವಲ ನಾಲ್ಕೈದು ಟನ್ ಕಸ ಬರುತ್ತಿದೆ. ಮುಂದಿನ ದಿನ ಈ ಏಳು ಎಕ್ರೆ ಪ್ರದೇಶವನ್ನು ಪೂರ್ಣ ಸ್ವಚ್ಚಗೊಳಿಸಿ ಪುತ್ತೂರಿನ ಅತ್ಯುತ್ತಮ ಉದ್ಯಾನವನ ಮಾಡಬಹುದು. ಇದಕ್ಕೆ ಮುಳಿಯದಿಂದ ಸಹಕಾರ ನೀಡುತ್ತೇವೆ ಎಂದ ಅವರ ಪುತ್ತೂರನ್ನು ನಗರಸಭೆ ಮಟ್ಟದಲ್ಲಿ ಒಂದು ಮಾದರಿ ನಗರವನ್ನಾಗಿ ಮಾಡಬೇಕು. ಇದಕ್ಕೆ ಎಲ್ಲಾ ನಾಗರಿಕರು ಕೈ ಜೋಡಿಸಬೇಕು. ಮುಂದಿನ ಜನಾಂಗಗಳಿಗೆ ಅರಿವು ಮೂಡಿಸಲು ಶಾಲೆಗಳಲ್ಲಿ ಕಾರ್ಯಕ್ರಮ ನಡೆಯಲಿದೆ. ಅದಕ್ಕೆ ಎಲ್ಲರ ಸಹಕಾರ ಬೇಕೆಂದು ವಿನಂತಿಸಿದ ಅವರು ನಮಗೆ ಈ ಯೋಜನೆಗೆ ಆಗಿನ ಶಾಸಕರು, ಹಾಲಿ ಶಾಸಕರು, ನಗರಸಭೆ ಅಧ್ಯಕ್ಷರು, ಸದಸ್ಯರು, ಪೌರಾಯುಕ್ತರು, ಪೌರ ಕಾರ್ಮಿಕರು, ಅಽಕಾರಿಗಳು, ಜನರು ಪೂರ್ಣ ಸಹಕಾರ ನೀಡಿರುವುದನ್ನು ನೆನಪಿಸಿಕೊಂಡರು.
ಪ್ರಾಜೆಕ್ಟ್ ಡೈರೆಕ್ಟರ್ ರಾಜೇಶ್ ಬೆಜ್ಜಂಗಳ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, 12 ವರ್ಷಗಳ ಹಿಂದೆ ಆರಂಭಗೊಂಡ ಯೋಜನೆ ಇವತ್ತು ಲೋಕಾರ್ಪಣೆಗೊಂಡಿರುವುದು ಸಂತೋಷ ಕೊಟ್ಟಿದೆ. ಸಣ್ಣ ಯೋಜನೆಯನ್ನು ದೊಡ್ಡದಾಗಿ ಪುತ್ತೂರಿಗೆ ಮಾಡಿದರೆ ಹೇಗೆ ಎಂಬ ಆಲೋಚನೆಗೆ ಕೃಷ್ಣನಾರಾಯಣ ಮುಳಿಯ ಅವರು ದೊಡ್ಡ ರಿಸ್ಕ್ ತೆಗೆದುಕೊಂಡಿದ್ದರು. ರೂ. 3 ಕೋಟಿ ಸಾಲ ಮಾಡಿ ಕಳೆದ 1 ವರ್ಷ 8 ತಿಂಗಳಿನಿಂದ ರೂ. 6ಲಕ್ಷ ಇಎಮ್ಐ ಕಟ್ಟುತ್ತಿದ್ದಾರೆ ಎಂದರೆ ಯಾವ ರೀತಿ ಅವರಿಗೆ ಬೇರೆ ಬೇರೆ ಚಾಲೆಂಜ್ ಎದುರಾಗಿತ್ತು ಎಂಬುದನ್ನು ಗಮನಿಸಿ ಎಂದ ಅವರು ಒಂದಷ್ಟು ಸಮಸ್ಯೆ ಪ್ರತಿ ಹಂತದಲ್ಲಿ ಬರುತ್ತಿತ್ತು. ಉಂದುಪೂರ ಆಯರಪೋಯರ ಉಂಡಾ ಎಂದವರೂ ಇದ್ದಾರೆ. ಆದರೆ ಇವತ್ತು ಕಸದಲ್ಲೂ ಚಿನ್ನದ ಮೌಲ್ಯವನ್ನು ಕೃಷ್ಣನಾರಾಯಣ ಮುಳಿಯ ಮಾಡಿ ತೋರಿಸಿದ್ದಾರೆ. ನಗರ ಆಡಳಿತಕ್ಕೆ ಇದು ಮೊದಲ ಪ್ರೊಜೆಕ್ಟ್, ಈಗಾಗಲೇ ಸುಮಾರು 80 ಮಂದಿ ಬೇರೆ ಬೇರೆ ಕಡೆಯಿಂದ ಪರಿಸರ ಅಭಿಯಂತರರು ಬಂದು ನೋಡಿ ಹೋಗಿದ್ದಾರೆ. ಸುಮಾರು 10 ರಿಂದ 15 ನಗರಸಭಾಡಳಿತದಲ್ಲಿ ಈ ಯೋಜನೆಗೆ ಟೆಂಡರ್ ಕೂಡಾ ಆಗಿದೆ. ಹಾಗಾಗಿ ನಮಗೆ ಇದು ಹೆಮ್ಮೆಯಿದೆ ಎಂದರು.

ಈ ಘಟಕದ ಯೋಜನೆಗೆ ವಿವಿಧ ರೀತಿಯಲ್ಲಿ ಸಹಕಾರ ನೀಡಿದ ಅನುಪಮ, ದೀಪಕ್ ಶೆಟ್ಟಿ, ಗೋಪಾಲಕೃಷ್ಣ ಭಟ್, ಜಯಂತ ಬಿ, ಕೃಷ್ಣ ಭಟ್ ವಿ, ಕೂಡ್ಗಿ ರತ್ನಾಕರ ಶೆಣೈ, ಮಾಲಿನಿ ವಿ.ಎಸ್., ಮುರಳಿ ಶ್ಯಾಮ್, ನಂದನ ಸಚ್ಚಿದಾನಂದ, ನರಸಿಂಹ ಶರ್ಮ, ಪ್ರದೀಪ್ ರಾವ್, ಪುರಂದರ ರೈ, ರತೀಶ್ ಶೆಣೈ, ರವೀಂದ್ರನ್ ಟಿ.ವಿ, ಶಾಲಿನಿ ಕೆ, ಶರತ್ ಕುಮಾರ್ ರೈ, ಶ್ಯಾಮ್ ಪಿ ಆರ್, ಸೂರ್ಯನಾರಾಯಣ ನಿಡ್ವಣ್ಣಾಯ, ಸುರೇಶ್ ಕೆ.ಯು., ತನ್ವಿ ಶೆಣೈ, ಯತೀಶ್ ರೈ ಅವರನ್ನು ಗೌರವಿಸಲಾಯಿತು. ರೋಟರಿಕ್ಲಬ್ನ ಅಶ್ವಿನಿಕೃಷ್ಣ ಮುಳಿಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ತನ್ವಿ ಶೆಣೈ ಪ್ರಾರ್ಥಿಸಿದರು. ರೋಟರಿ ಸ್ವಚ್ಛಭಾರತ್ ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ರವಿಕುಮಾರ್ ರೈ ಕೆದಂಬಾಡಿ ಮಠ ವಂದಿಸಿದರು. ಬೆಳ್ಳಾರೆ ಪದವಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ. ರಾಮಚಂದ್ರ ಗೌಡ ಕಾರ್ಯಕ್ರಮ ನಿರೂಪಿಸಿದರು. ನಗರಸಭೆ ಸ್ಥಾಯಿ ಸಮಿತಿ ನಿಕಟಪೂರ್ವ ಅಧ್ಯಕ್ಷ ಸುಂದರ ಪೂಜಾರಿ ಬಡಾವು, ನಗರಸಭೆ ನಿಕಟಪೂರ್ವ ಸ್ಥಳೀಯ ಸದಸ್ಯೆ ಗೌರಿ ಬನ್ನೂರು, ಇಂದಿರಾ ಪುರುಷೋತ್ತಮ, ಪ್ರೇಮಲತಾ ನಂದಿಲ, ಮೋಹಿನಿ ವಿಶ್ವನಾಥ ಗೌಡ, ಯೂಸೂಪ್ ಡ್ರೀಮ್, ಮಾಜಿ ಪುರಸಭೆ ಅಧ್ಯಕ್ಷರಾದ ಗಣೇಶ್ ರಾವ್, ರಾಜೇಶ್ ಬನ್ನೂರು, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಮಾಜಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ, ಹಾಲಿ ಸದಸ್ಯ ಈಶ್ವರ ಬೆಡೇಕರ್, ನಗರಸಭೆ ಮಾಜಿ ಅಧ್ಯಕ್ಷ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ, ದಂಬೆಕಾನ ಸದಾಶಿವ ಶೆಟ್ಟಿ, ಜನಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷ ಪದ್ಮನಾಭ ಶೆಟ್ಟಿ, ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಪೈ, ವಿರೂಪಾಕ್ಷ ಭಟ್, ಕೃಷ್ಣವೇಣಿ ಮುಳಿಯ, ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕರಾದ ರಾಮಚಂದ್ರ, ಶ್ವೇತಾ ಕಿರಣ್, ನಗರಸಭೆಯ ಅಶೋಕ್, ರೋಟರಿ ಸ್ವಚ್ಛ ಭಾರತ್ ಚಾರಿಟೇಬಲ್ ಟ್ರಸ್ಟ್ನ ನಿರ್ದೇಶಕ ವಿಶ್ವಾಸ್ ಶೆಣೈ, ನಾಗೇಂದ್ರ ಬಾಳಿಗ, ಶಶಿಧರ್ ನಾಯಕ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಆರಂಭದಲ್ಲಿ ಶಿವಾನಂದ ಶೆಣೈ, ಸಮೃದ್ದಿ ಶೆಣೈ, ಭವ್ಯ ಆಚಾರ್ಯ ಅವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು. ಇದೇ ಸಂದರ್ಭ ರೀಟ್ಯಾಪ್ ಸೊಲ್ಯೂಶನ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಲಿಕಿತ್ ಅವರು ಘಟಕದ ಕಾರ್ಯಯೋಜನೆ ಕುರಿತು ಮಾಹಿತಿ ನೀಡಿದರು. ಸಭಾ ಕಾರ್ಯಕ್ರಮದ ಬಳಿಕ ಕಸ ವಿಂಗಡಣೆ ಸಂಸ್ಕರಣೆಯ ಪ್ರಾತ್ಯಕ್ಷಿತೆ ನಡೆಯಿತು.



























