ಶೀಘ್ರದಲ್ಲೇ ಪುತ್ತೂರಿನಲ್ಲಿ ಪ್ರಾರಂಭವಾಗಲಿದೆ ಆಯುಷ್ ಆಸ್ಪತ್ರೆಕಬಕದಲ್ಲಿ ಒಂದೂವರೆ ಎಕ್ರೆ ಜಾಗ ಮಂಜೂರು: ಸರಕಾರಕ್ಕೆ ಮನವಿ ಸಲ್ಲಿಸಿದ ಶಾಸಕ ಅಶೋಕ್ ರೈ
ಪುತ್ತೂರು: ಪುತ್ತೂರಿನಲ್ಲಿ ಆಯುಷ್ ಆಸ್ಪತ್ರೆ ನಿರ್ಮಾಣಕ್ಕೆ ಸಂಬಂದಿಸಿದಂತೆ ಕಬಕದಲ್ಲಿ ಶಾಸಕ ಅಶೋಕ್ ರೈಯವರ ಮೂಲಕ ಈಗಾಗಲೇ ಜಾಗವನ್ನು ಮೀಸಲಿರಿಸಲಾಗಿದ್ದು , ಈ ಜಾಗದಲ್ಲಿ ಶೀಘ್ರ ಆಸ್ಪತ್ರೆ ಮಂಜೂರು ಮಾಡುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮುಖ್ಯ ಕಾರ್ಯದರ್ಶಿ ಹರ್ಷಗುಪ್ತ ಅವರಿಗೆ ಪುತ್ತೂರು ಶಾಸಕರಾದ ಅಶೋಕ್ ರೈಯವರು ಮನವಿ ಸಲ್ಲಿಸಿದರು.
ಗುರುವಾರ ಬೆಂಗಳೂರಿನಲ್ಲಿ ಹರ್ಷಗುಪ್ತ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಶಾಸಕರು ಈಗಾಗಲೇ 1.27 ಎಕ್ರೆ ಜಾಗವನ್ನು ಕಬಕದಲ್ಲಿ ಕಾಯ್ದಿರಿಸಲಾಗಿದೆ. ಅದೇ ಸ್ಥಳದಲ್ಲಿ ಆಸ್ಪತ್ರೆ ನಿರ್ಮಾಣ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಮತ್ತು ಅತಿ ಶೀಘ್ರದಲ್ಲೇ ಆಸ್ಪತ್ರೆ ನಿರ್ಮಾಣವಾಗುವಲ್ಲಿ ಅಧಿಕಾರಿಗಳು ಕೂಡಾ ಮುತುವರ್ಜಿ ವಹಿಸಬೇಕು ಎಂದು ಮನವಿ ಮಾಡಿದರು. ಪುತ್ತೂರು ಸೇರಿದಂತೆ ದ.ಕ ಜಿಲ್ಲೆಯ ಉಳಿದ ಎರಡು ಕಡೆಗಳಲ್ಲಿ ಆಯುಷ್ ಆಸ್ಪತ್ರೆ ನಿರ್ಮಾಣವಾಗಲಿದೆ.
*30 ಬೆಡ್ಗಳ ಆಸ್ಪತ್ರೆ*
ಆಯುಷ್ ಆಸ್ಪತ್ರೆಯು 30 ಬೆಡ್ಗಳ ಆಸ್ಪತ್ರೆಯಾಗಿದ್ದು ಕಬಕದದಲ್ಲಿ ನಿರ್ಮಾಣವಾಗಲಿದೆ.
ಮನವಿಯಲ್ಲೇನಿದೆ?
ಪುತ್ತೂರು ತಾಲೂಕಿನ ಕಬಕ ಗ್ರಾಮದಲ್ಲಿ ಸರ್ವೆ ನಂ. 197/3A (ನಕ್ಷೆಯಂತೆ ಸ.ನಂ197/3Ap2)ರಲ್ಲಿ 1.27 ಎಕ್ರೆ ಜಮೀನು ದಕ್ಷಿಣ ಕನ್ನಡ ಜಿಲ್ಲಾ ಆಯುಷ್ ಇಲಾಖೆಗೆ ಕಾದಿರಿಸಲಾಗಿದೆ. ಪುತ್ತೂರು ತಾಲೂಕು ಕೇಂದ್ರದಿಂದ 2 ಕಿ.ಮೀ ದೂರದಲ್ಲಿದ್ದು, ಪ್ರದೇಶದ ಜನಸಂಖ್ಯೆ 2,5೦,೦೦೦ ಇಲ್ಲಿ ಆಯುಷ್ ಆಸ್ಪತ್ರೆಯು ಅತೀ ಅಗತ್ಯವಿರುತ್ತದೆ. ದ.ಕ. ಜಿಲ್ಲೆಯಲ್ಲಿ ಆಯುಷ್ ಪದ್ಧತಿಗಳಿಗೆ ಅಪಾರ ಬೇಡಿಕೆಯಿದ್ದು, ಸರಕಾರಿ ಆಯುಷ್ ಆಸ್ಪತ್ರೆಗಳ ಕೊರತೆ ತುಂಬಾ ಇದೆ. ಪುತ್ತೂರು, ಸುಳ್ಯ ಕಡಬ, ಉಳ್ಳಾಲ ಮೂಡಬಿದ್ರೆ ಮುಂತಾದ ತಾಲೂಕುಗಳಲ್ಲಿ ಆಯುಷ್ ಇಲಾಖೆಯ ಅಸ್ತಿತ್ವವೇ ಇಲ್ಲ. ಅದುದರಿಂದ ಸಾರ್ವಜನಿಕರ ಬೇಡಿಕೆಯ ಅನ್ವಯ ಹಾಗೂ ಆಯುಷ್ ಚಿಕಿತ್ಸಾ ಪದ್ಧತಿಗಳನ್ನು ಪ್ರತಿಯೊಂದು ಜನರಿಗೂ ತಲುಪಿಸುವ ಉದ್ದೇಶದಿಂದ ಪ್ರಸಕ್ತ ವರ್ಷದಲ್ಲಿ (2024-25) ಗುಣಮಟ್ಟಕ್ಕೆ ಅನುಸಾರವಾಗಿ ಎರಡು 3೦ ಹಾಸಿಗೆಗಳ ಆಯುಷ್ ಆಸ್ಪತ್ರೆಯನ್ನು ಮಂಜೂರುಗೊಳಿಸಬೇಕು ಎಂದು ಶಾಸಕರು ನೀಡಿದ ಮನವಿಯಲ್ಲಿ ತಿಳಿಸಲಾಗಿದೆ.
*ಪುತ್ತೂರಿಗೆ ಆಯುಷ್ಆಸ್ಪತ್ರೆ ನಿರ್ಮಾಣಕ್ಕೆ ಸರಕಾರ ಮುಂದಾಗಿದ್ದರೂ ಇಲ್ಲಿ ಅವರಿಗೆ ಜಾಗವನ್ನು ಮಂಜೂರು ಮಾಡಿಕೊಟ್ಟಿರಲಿಲ್ಲ. ಜಾಗ ಮಂಜೂರು ಮಾಡಿಕೊಡದ ಕಾರಣ ಕಳೇದ ನಾಲ್ಕೈದು ವರ್ಷಗಳಿಂದ ಅದು ಪೆಂಡಿಂಗ್ ಆಗಿತ್ತು. ಈ ವಿಚಾರ ನನ್ನ ಗಮನಕ್ಕೆ ಬಂದಾಗ ನಾನು ಆಯುಷ್ ಇಲಾಖೆಗೆ ಸಂಬಂದಪಟ್ಟವರನ್ನು ಕಚೇರಿಗೆ ಕರೆಸಿ ಅವರಿಗೆ ಕಬಕದಲ್ಲಿ 1.27 ಎಕ್ರೆ ಜಾಗವನ್ನು ಗುರುತಿಸಿ ನೀಡಿದ್ದೇನೆ. ಆಸ್ಪತ್ರೆ ನಿರ್ಮಾಣವಾದರೆ ಜನರಿಗೆ ಪ್ರಯೋಜನವಾಗುತ್ತದೆ. ವಿಶೇಷವಾಗಿ ಬಡವರಿಗೂ ಇದರಿಂದ ತುಂಬಾ ಪ್ರಯೋಜನವಾಗುವುದರ ಜೊತೆಗೆ ಬೆಳೆಯುತ್ತಿರುವ ಪುತ್ತೂರು ನಗರದ ಹಿರಿಮೆಯನ್ನು ಹೆಚ್ಚಿಸುತ್ತದೆ. ಜಾಗ ಕಾಯ್ದಿರಿಸಿದ್ದೇವೆ ಆಸ್ಪತ್ರೆಯನ್ನು ಶೀಘ್ರ ಮಂಜೂರು ಮಾಡಿ ಎಂದು ಸಂಬಂಧಪಟ್ಟ ಇಲಾಖೆಗೆ ಮನವಿಯನ್ನು ಮಾಡಿದ್ದೇನೆ. ಶೀಘ್ರ ಮಂಜೂರಾಗುವ ಭರವಸೆ ಇದೆ.*
ಅಶೋಕ್ ರೈ ಶಾಸಕರು ಪುತ್ತೂರು