ಪುತ್ತೂರು: ಸ್ಥಳೀಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸೇರಿದ ಆಸ್ತಿಗಳನ್ನು ಮರುಸ್ವಾಧೀನಪಡಿಸಿಕೊಳ್ಳುವ ಕಾರ್ಯ ಚುರುಕುಗೊಂಡಿದೆ. ಇದರ ಭಾಗವಾಗಿ, ನೆಲ್ಲಿಕಟ್ಟೆಯ ಅಶ್ವತ್ಥ ಮರದ ಸಮೀಪದಲ್ಲಿದ್ದ ಮನೆಯೊಂದನ್ನು ಶನಿವಾರ ಪರಸ್ಪರ ಒಪ್ಪಂದದ ಮೇರೆಗೆ ತೆರವುಗೊಳಿಸಿ ಜಾಗವನ್ನು ದೇವಸ್ಥಾನದ ವಶಕ್ಕೆ ಒಪ್ಪಿಸಲಾಯಿತು.
ಈ ಪ್ರಕ್ರಿಯೆ ಕಳೆದ ಒಂದು ವರ್ಷದಿಂದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹಾಗೂ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಅವರ ನೇತೃತ್ವದಲ್ಲಿ ನಡೆಯುತ್ತಿದೆ. ಇದೀಗ ಸುಮಾರು 8 ಸೆಂಟ್ಸ್ ವಿಸ್ತೀರ್ಣದ, ಅಂದಾಜು 1 ಕೋಟಿಗೂ ಅಧಿಕ ಮೌಲ್ಯದ ಜಾಗವನ್ನು ದೇವಸ್ಥಾನ ಮರಳಿ ಪಡೆದುಕೊಂಡಿದೆ.
ಸುಮಾರು ಆರು ದಶಕಗಳಿಂದ ಈ ಜಾಗದಲ್ಲಿ ಮನೆ ಹೊಂದಿದ್ದ ವಾಲ್ಟರ್ ಲೋಬೋ ಅವರು ದೇವಾಲಯದ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಸ್ವಯಂಪ್ರೇರಿತವಾಗಿ ಜಾಗವನ್ನು ಹಸ್ತಾಂತರಿಸಿದ್ದಾರೆ. ಯಾವುದೇ ವಿವಾದಕ್ಕೆ ತಾಣ ನೀಡದೆ, ಸೌಹಾರ್ದತೆಯಿಂದ ಜಾಗ ಬಿಟ್ಟುಕೊಟ್ಟಿರುವುದು ವಿಶೇಷವಾಗಿ ಗಮನಾರ್ಹವಾಗಿದೆ. ಈ ಮನೆಯನ್ನು ಅವರು ಹಲವು ವರ್ಷಗಳಿಂದ ಬಾಡಿಗೆಗೆ ನೀಡುತ್ತಿದ್ದರು ಎಂದು ತಿಳಿದುಬಂದಿದೆ.



























