ಪುತ್ತೂರು ಜುಲೈ 23: ಪುತ್ತೂರು ಮತ್ತು ಉಪ್ಪಿನಂಗಡಿಯನ್ನು ಸಂಪರ್ಕಿಸುವ ಪ್ರಮುಖ ರಾಜ್ಯ ಹೆದ್ದಾರಿ ಕಾಮಗಾರಿ ಅತಿಯಾಗಿ ವಿಳಂಬಗೊಳ್ಳುತ್ತಿರುವುದನ್ನು ಖಂಡಿಸಿ, ಮಾಜಿ ಶಾಸಕ ಸಂಜೀವ ಮಠಂದೂರು ನೇತೃತ್ವದ ಬಿಜೆಪಿ ನಿಯೋಗವು ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಈ ಸಂದರ್ಭದಲ್ಲಿ ರಾಜ್ಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ರಸ್ತೆಯು ತೀರಾ ಹದಗೆಟ್ಟಿದ್ದ ಹಿನ್ನೆಲೆಯಲ್ಲಿ, ಪುತ್ತೂರು ಬಿಜೆಪಿಯ ವತಿಯಿಂದ ಕಲ್ಲುಗಳನ್ನು ಹಾಕಿ ವಾಹನ ರಸ್ತೆ ರಿಪೇರಿ ಮಾಡಿದ್ದಾರೆ.
ಮಾಜಿ ಶಾಸಕ ಸಂಜೀವ ಮಠಂದೂರು ಅವರ ನೇತೃತ್ವದಲ್ಲಿ ಬಿಜೆಪಿ ಪ್ರಮುಖರು, ಕಾರ್ಯಕರ್ತರು ಜು.23ರಂದು ಬೆಳಿಗ್ಗೆ ಬೊಳುವಾರು ಓಂ ಶ್ರೀ ಶಕ್ತಿ ಆಂಜನೇಯ ಮಂತ್ರಾಲಯದ ಬಳಿ ರಸ್ತೆ ಕಾಮಗಾರಿ ಕುರಿತು ಸ್ಥಳೀಯ ರಿಕ್ಷಾ ಚಾಲಕರು ಮತ್ತು ಸಾರ್ವಜನಿರಿಂದ ಮಾಹಿತಿ ಪಡೆದುಕೊಂಡರು. ಕಾಮಗಾರಿ ಸಮರ್ಪಕವಾಗಿ ಮಾಡದೇ ಇರುವುದರಿಂದ ಸುಮಾರು 15 ಮನೆಗಳಿಗೆ ನೀರಿನ ಸಂಪರ್ಕ ಕಳೆದ ಒಂದು ತಿಂಗಳಿಂದ ಕಡಿತವಾಗಿರುವುದು, ಕಾಂಕ್ರೀಟ್ ರಸ್ತೆ ಬದಿಗೆ ಮಣ್ಣು ಹಾಕದೆ ಅಪಾಯದ ಸ್ಥಿತಿ ನಿರ್ಮಾಣ ಮಾಡಿರುವ ಕುರಿತು ಸಾರ್ವಜನಿಕರ ಆರೋಪಗಳನ್ನು ಆಲಿಸಿದ ಮಾಜಿ ಶಾಸಕ ಸಂಜೀವ ಮಠಂದೂರು ಆರಂಭದಲ್ಲಿ ಪೌರಾಯುಕ್ತರಿಗೆ ಕರೆ ಮಾಡಿ ಕುಡಿಯುವ ನೀರಿನ ಸಂಪರ್ಕ ತಕ್ಷಣ ದುರಸ್ಥಿ ಮಾಡುವಂತೆ ಒತ್ತಾಯಿಸಿದರು. ಇದೇ ಸಂದರ್ಭ ಆಗಮಿಸಿದ ಲೋಕೋಪಯೋಗಿ ಸಹಾಯಕ ಕಾರ್ಯಪಾಲಕ ಅಭಿಯಂತರ ರಾಜೇಶ್ ಶೆಟ್ಟಿಯವರನ್ನು ಕಾಮಗಾರಿ ನಿದಾನಗತಿ ಕುರಿತು ತರಾಟೆಗೆತ್ತಿಕೊಂಡರು. ಕೊನೆಗೆ ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸದಿದ್ದರೆ ಪ್ರತಿಭಟನೆ ಎದುರಿಸಲು ಸಿದ್ದರಾಗಿ ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಜೀವ ಮಠಂದೂರು, “ಈ ಹೆದ್ದಾರಿ ಕಾಮಗಾರಿಯ ಅವಧಿ ಮುಗಿದು ಬರೋಬ್ಬರಿ 8 ತಿಂಗಳು ಕಳೆದರೂ ಇನ್ನು ಕೆಲಸ ಪೂರ್ಣಗೊಂಡಿಲ್ಲ. ಅವೈಜ್ಞಾನಿಕ ಕಾಮಗಾರಿಯಿಂದಾಗಿ ನಿತ್ಯ ಪ್ರಯಾಣಿಕರು ತೀವ್ರ ಕಿರಿಕಿರಿ ಮತ್ತು ತೊಂದರೆ ಅನುಭವಿಸುತ್ತಿದ್ದಾರೆ. ಪುತ್ತೂರಿನಿಂದ ಉಪ್ಪಿನಂಗಡಿಯ ನಡುವಿನ 13 ಕಿಲೋಮೀಟರ್ ದೂರದಲ್ಲಿ ಈಗಾಗಲೇ 11 ಕಿಲೋಮೀಟರ್ ಕಾಮಗಾರಿ ಮುಗಿದಿದೆ. ಆದರೆ ಉಳಿದಿರುವುದು ಕೇವಲ 2 ಕಿಲೋಮೀಟರ್ ಮಾತ್ರ. ಇದನ್ನು ಪೂರ್ಣಗೊಳಿಸಲು ನಾಲ್ಕೈದು ತಿಂಗಳಿಂದ ವಿಳಂಬ ಧೋರಣೆ ಅನುಸರಿಸಲಾಗುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಪಿ.ಬಿ, ಜಿಲ್ಲಾ ಕಾರ್ಯದರ್ಶಿ ವಿದ್ಯಾ ಗೌರಿ, ಬಿಜೆಪಿ ಜಿಲ್ಲಾ ಪ್ರಕೋಷ್ಟಗಳ ಸಹ ಸಂಯೋಜಕ ಪ್ರಸನ್ನ ದರ್ಬೆ, ನಗರಸಭೆ ನಿಕಟಪೂರ್ವ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ, ನಿಕಟಪೂರ್ವ ಸ್ಥಾಯಿ ಸಮಿತಿ ಅಧ್ಯಕ್ಷ, ಬಿಜೆಪಿ ವಕ್ತಾರ ರಾಜೇಶ್ ಬನ್ನೂರು, ಮಾಧ್ಯಮ ಪ್ರಮುಖ್ ಸತೀಶ್ ನಾೖಕ್ ದರ್ಬೆ, ಪುರುಷೋತ್ತಮ ಮುಂಗ್ಲಿಮನೆ, ಬಿಜೆಪಿ ಗ್ರಾಮಾಂತರ ಮಂಡಲದ ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಬೂಡಿಯಾರ್ ರಾಧಾಕೃಷ್ಣ ರೈ, ಯುವ ಮೋರ್ಚಾ ನಗರ ಅಧ್ಯಕ್ಷ ನಿತೇಶ್ ಕಲ್ಲೇಗ, ಮಹಿಳಾ ಮೋರ್ಚಾದ ಅಧ್ಯಕ್ಷೆ ಯಶೋದಾ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.























