ಬೆಳ್ತಂಗಡಿ: ಬಾಲಕ ಸುಮಂತ್ ಅವರ ನಿಗೂಢ ಸಾವಿನ ಪ್ರಕರಣ ಗೇರುಕಟ್ಟೆ ಸಮೀಪದ ಸಂಭೋಳ್ಯದ ತಂದೆ, ತಾಯಿ, ಸಹೋದರ ಸಹಿತ ಐವರ ಬೈನ್ ಮ್ಯಾಪಿಂಗ್ ಪ್ರಕ್ರಿಯೆ ಆರಂಭಗೊಂಡಿದೆ.
ಬೆಳ್ತಂಗಡಿ ತಾಲೂಕಿನ ನಾಳಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ 2026ರ ಜ.14ರಂದು ಮುಂಜಾನೆ ಧನುಪೂಜೆಗೆ ತೆರಳಿದ್ದ ಗೇರುಕಟ್ಟೆ ಸಮೀಪದ ಓಡಿಲ್ನಾಳ ಗ್ರಾಮದ ಸಂಭೋಳ್ಯ ನಿವಾಸಿ ಸುಮಂತ್ (15) ಅವರ ಸಂಶಯಾಸ್ಪದ ಸಾವಿನ ಪ್ರಕರಣದ ನಿಗೂಢತೆ ಬಯಲಿಗೆಳೆಯಲು ಪೊಲೀಸ್ ಇಲಾಖೆ ಹರಸಾಹಸ ಪಟ್ಟಿದ್ದರೂ ಈ ಕೇಸ್ ನಿಗೂಢವಾಗಿಯೇ ಮುಂದುವರಿದಿರುವ ಹಿನ್ನೆಲೆಯಲ್ಲಿ ಮಂಪರು ಪರೀಕ್ಷೆಯ ಪ್ರಯೋಗ ನಡೆಸುತ್ತಿದೆ.
ಸುಮಂತ್ ಅವರ ತಂದೆ ಸುಬ್ರಹ್ಮಣ್ಯ ನಾಯಕ್, ತಾಯಿ ರತ್ನಾವತಿ, ಸಹೋದರ ಸುದರ್ಶನ್, ರತ್ನಾವತಿ ಅವರ ತಮ್ಮ ರಾಧಾಕೃಷ್ಣ ಮತ್ತು ರತ್ನಾವತಿ ಅವರ ದೊಡ್ಡಪ್ಪನ ಮಗ ಲಕ್ಷ್ಮಿನಾರಾಯಣ ಅವರ ಮೊದಲ ಹಂತದ ಪ್ರಶೋತ್ತರ ಬೆಂಗಳೂರಿನ ಮಡಿವಾಳದಲ್ಲಿರುವ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ನಡೆದಿದೆ.
ಕೃಷಿಕರಾಗಿರುವ ಸುಬ್ರಹ್ಮಣ್ಯ ನಾಯಕ್ ಮತ್ತು ಗೃಹಿಣಿಯಾಗಿರುವ ರತ್ನಾವತಿ ಅವರನ್ನು ಆ.10ರಂದು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಪ್ರಶೋತ್ತರಕ್ಕೆ ಒಳಪಡಿಸಲಾಗಿದೆ. ನಿಟ್ಟೆಯಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿರುವ ಸುದರ್ಶನ್ ಅವರನ್ನು ಮಧ್ಯಾಹ್ನದಿಂದ ಸಂಜೆಯವರೆಗೆ ಪ್ರಶೋತ್ತರ ನಡೆಸಲಾಗಿದೆ. ಬಳಿಕ ಅವರನ್ನು ಪೊಲೀಸರು ಬೆಳ್ತಂಗಡಿಗೆ ಕರೆ ತಂದಿದ್ದಾರೆ.
ಪೆರ್ಲದವರಾಗಿದ್ದು ಅರ್ಚಕರಾಗಿರುವ ರಾಧಾಕೃಷ್ಣ ಮತ್ತು ಕಾಸರಗೋಡಿನವರಾಗಿದ್ದು ಅಡುಗೆ ವೃತ್ತಿ ಮಾಡುತ್ತಿರುವ ಲಕ್ಷ್ಮಿನಾರಾಯಣ ಅವರನ್ನು ಆ.11ರಂದು ಟ್ರೈನ್ ಮ್ಯಾಪಿಂಗ್ನ ಪ್ರಶೋತ್ತರ ನಡೆಸಿ ಪೊಲೀಸರು ಕರೆದುಕೊಂಡು ಬಂದಿದ್ದಾರೆ. ಘಟನೆ ನಡೆದ ದಿನದಂದು ಸುಬ್ರಹ್ಮಣ್ಯ ನಾಯಕ್, ರತ್ನಾವತಿ ಮತ್ತು ಸುದರ್ಶನ್ ಅವರು ಸಂಭೋಳ್ಯದ ಮನೆಯಲ್ಲಿದ್ದರು. ಲಕ್ಷ್ಮಿನಾರಾಯಣ ಅವರು ಘಟನೆ ನಡೆಯುವ ಮೂರು ದಿನದ ಮೊದಲು ಸುಮಂತ್ ಮನೆಗೆ ಬಂದಿದ್ದರು. ರಾಧಾಕೃಷ್ಣ ಅವರು ಘಟನೆ ನಡೆದ ಬಳಿಕ ಹತ್ತು ಗಂಟೆ ವೇಳೆಗೆ ಆಗಮಿಸಿದ್ದರು. ಈ ಐವರಿಗೆ ಕೇಳಲಾದ ಪ್ರಶ್ನೆಗಳನ್ನು ಮತ್ತು ಅವರು ನೀಡಿರುವ ಉತ್ತರವನ್ನು ದಾಖಲಿಸಿಕೊಳ್ಳಲಾಗಿದ್ದು ಮುಂದಿನ ಪ್ರಕ್ರಿಯೆಗೆ ಮತ್ತೊಮ್ಮೆ ಬರುವಂತೆ ತಿಳಿಸಲಾಗುವುದು ಎಂದು ವಿಧಿವಿಜ್ಞಾನ ಪ್ರಯೋಗಾಲಯದವರು ತಿಳಿಸಿದ್ದಾರೆ.
ಪ್ರಥಮ ಹಂತದಲ್ಲಿ ಕೇಳಲಾಗಿರುವ ಪ್ರಶ್ನೆ ಮತ್ತು ಉತ್ತರವನ್ನು ಇನ್ನೊಮ್ಮೆ ತಾಳೆ ಹಾಕುವ ಪ್ರಕ್ರಿಯೆ ಆಗಲಿದೆ. ಆ ನಂತರ ಬೈನ್ ಮ್ಯಾಪಿಂಗ್ ನಡೆಯಲಿದೆ. ಪ್ರಕರಣದ ತನಿಖಾಧಿಕಾರಿಯಾಗಿರುವ ವೃತ್ತ ನಿರೀಕ್ಷಕ ರವಿ ಬಿ.ಎಸ್. ಅವರು ಪ್ರಶ್ನೆಗಳನ್ನು ಸಿದ್ದಪಡಿಸಿ ವಿಧಿವಿಜ್ಞಾನ ಪ್ರಯೋಗಾಲಯದವರಿಗೆ ನೀಡಿದ್ದಾರೆ.ಶಂಕಿತರಿಗೆ ಬಲೆ: ಸುಮಂತ್ ಅವರಮನೆಯವರು ಸೇರಿದಂತೆ ಐವರ ಮಂಪರು ಪರೀಕ್ಷೆ ನಡೆಸಿದ ಬಳಿಕ ಶಂಕಿತರ ಬೈನ್ ಮ್ಯಾಪಿಂಗ್ ನಡೆಸಲು ಪೊಲೀಸ್ ಇಲಾಖೆ ನಿರ್ಧರಿಸಿದೆ.
ಗೇರುಕಟ್ಟೆ ಸರಕಾರಿ ಪ್ರೌಢಶಾಲೆಯಲ್ಲಿ 9ನೇ ತರಗತಿಯ ವಿದ್ಯಾರ್ಥಿಯಾಗಿದ್ದ ಪ್ರತಿಭಾನ್ವಿತ ಬಾಲಕ ಸುಮಂತ್ ಅವರನ್ನು ವ್ಯವಸ್ಥಿತವಾಗಿ ಕೊಲೆ ಮಾಡಲಾಗಿದೆ ಎಂಬ ಸಂಶಯದ ಆಧಾರದಲ್ಲಿ ತಂಡ ರಚಿಸಿ ತನಿಖೆ ನಡೆಸಿದ್ದ ಪೊಲೀಸ್ ಇಲಾಖೆ ಯಾವುದೇ ಫಲಿತಾಂಶ ದೊರಕದೆ ನಿರಾಶೆಗೊಳಗಾಗಿದ್ದು ಇದೀಗ ಕೊನೇಯ ಅಸ್ತ್ರವಾಗಿ ಶಂಕಿತರನ್ನು ಮಂಪರು ಪರೀಕ್ಷೆ ನಡೆಸಲು ಮುಂದಾಗಿದೆ. ಇದರ ಮೊದಲ ಹಂತವಾಗಿ ಸುಮಂತ್ ಅವರ ತಂದೆ ಸುಬ್ರಹ್ಮಣ್ಯ ನಾಯಕ್, ತಾಯಿ ರತ್ನಾವತಿ, ಸಹೋದರ ಸುದರ್ಶನ್, ಸಂಬಂಧಿಕರಾದ ಲಕ್ಷ್ಮೀನಾರಾಯಣ ಮತ್ತು ರಾಧಾಕೃಷ್ಣರವರನ್ನು ಮಂಪರು ಪರೀಕ್ಷೆ ನಡೆಸಲಾಗುತ್ತಿದೆ. ಪ್ರಕರಣದ ತನಿಖಾಧಿಕಾರಿಯಾಗಿರುವ ಸರ್ಕಲ್ ಇನ್ಸ್ಪೆಕ್ಟರ್ ರವಿ ಬಿ.ಎಸ್. ಅವರು ಮಂಪರು ಪರೀಕ್ಷೆಗೆ ಒಳಪಡಿಸಲು ಕೋರ್ಟ್ ಅನುಮತಿ ಪಡೆದು ಪ್ರಕ್ರಿಯೆ ಆರಂಭಿಸಿದ್ದಾರೆ.
ಗೃಹ ಸಚಿವರಿಗೆ ಮನವಿ: ಈ ಪ್ರಕರಣದ ನಿಗೂಢತೆ ಮುಚ್ಚಿಹೋಗಬಾರದು ಮತ್ತು ಸಮಗ್ರ ತನಿಖೆಯಾಗಬೇಕು ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ಬೆಂಗಳೂರಿನಲ್ಲಿ ಗೃಹ ಸಚಿವ ಜಿ. ಪರಮೇಶ್ವರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು.
























