ಪುತ್ತೂರು: ಪುತ್ತೂರಿನಲ್ಲಿ ಸೆಂಟ್ರಲ್ ಇಂಟಲಿಜೆನ್ಸ್ (ಕೇಂದ್ರ ಗುಪ್ತಚರ) ಕಚೇರಿ ಸ್ಥಾಪನೆಗೆ ಕೇಂದ್ರ ಸರ್ಕಾರ ಮುಂದಾಗಿದೆ. ಈ ನಿರ್ಧಾರವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಕ್ಷತೆ ಮತ್ತು ಗುಪ್ತಚರ ಮಾಹಿತಿ ಸಂಗ್ರಹಣೆಯನ್ನು ಬಲಪಡಿಸುವ ಉದ್ದೇಶದಿಂದ ಕೈಗೊಳ್ಳಲಾಗಿದೆ.
ಕೇಂದ್ರದ Intelligence Bureau (ಐಬಿ) ಇಲಾಖೆಯ ಇನ್ಸ್ಪೆಕ್ಟರ್ ಮಟ್ಟದ ಕಚೇರಿ ಪುತ್ತೂರಿನಲ್ಲಿ ಕಾರ್ಯನಿರ್ವಹಿಸಲಿದ್ದು, ಇದರ ಮೂಲಕ ದಕ್ಷಿಣ ಕನ್ನಡ ಹಾಗೂ ಕೇರಳ ಗಡಿಭಾಗದ ಚಟುವಟಿಕೆಗಳ ಮೇಲೆ ನಿಗಾ ವಹಿಸುವುದು ಮುಖ್ಯ ಉದ್ದೇಶವಾಗಿದೆ.
ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣವೂ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತೀಯ ಸಂಘಟನೆಗಳ ಚಟುವಟಿಕೆ ಬೇರೂರುತ್ತಿರುವ ಹಿನ್ನೆಲೆಯಲ್ಲಿ ದೀರ್ಘಕಾಲಿಕ ಕ್ರಮಗಳತ್ತ ಚಿತ್ತ ಹರಿಸಿರುವ ಕೇಂದ್ರ ಸರಕಾರ, ಪುತ್ತೂರಿನಲ್ಲಿ ಸೆಂಟ್ರಲ್ ಇಂಟಲಿಜೆನ್ಸಿ ಕೇಂದ್ರ ಸ್ಥಾಪಿಸಿ ಗುಪ್ತಚರ ಇಲಾಖೆಯ ಕಾರ್ಯಕ್ಷಮತೆ ಬಲಪಡಿಸಲು ಮುಂದಾಗಿದೆ.
2022ರ ಜುಲೈ 26ರಂದು ಪ್ರವೀಣ್ ನೆಟ್ಟಾರ್ ಕೊಲೆ ನಡೆದ ಬಳಿಕ ಕೇಂದ್ರ ಸರಕಾರದ ಅಧೀನದಲ್ಲಿರುವ ಎನ್ಐಎ (ರಾಷ್ಟ್ರೀಯ ತನಿಖಾ ದಳ) ದಕ್ಷಿಣ ಕನ್ನಡ ಮತ್ತು ಪಕ್ಕದ ಕೇರಳದಲ್ಲಿ ಬಿರುಸಿನ ತನಿಖೆ ಕೈಗೊಂಡಿತ್ತು. ಈ ಸಂದರ್ಭ ಕೇಂದ್ರ ಗುಪ್ತಚರ ಇಲಾಖೆ ದಕ್ಷಿಣ ಕನ್ನಡದತ್ತ ಗಮನ ಕೇಂದ್ರೀಕರಿಸಿತ್ತು. ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣದ ಬಳಿಕ ಪಿಎಫ್ಐ ಸಂಘಟನೆ ನಿಷೇಧಿಸುವ ನಿರ್ಧಾರವನ್ನು ಕೇಂದ್ರ ಸರಕಾರ ಕೈಗೊಂಡಿತ್ತು.
ಮತೀಯವಾದಿ ಸಂಘಟನೆಗಳು ಬಲಗೊಳ್ಳುವ ಸೂಕ್ಷ್ಮತೆ ಅರ್ಥ ಮಾಡಿಕೊಂಡು ಪುತ್ತೂರಿನಲ್ಲಿ ಸೆಂಟ್ರಲ್ ಇಂಟಲಿಜೆನ್ಸಿ ಕಚೇರಿ ಸ್ಥಾಪನೆಗೆ ನಿರ್ಧರಿಸಲಾಗಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.
ಪುತ್ತೂರು ಹೊರವಲಯದ ಪಡ್ನೂರಿನಲ್ಲಿ 0.44 ಎಕರೆ ಜಮೀನನ್ನು ಸೆಂಟ್ರಲ್ ಇಂಟೆಲಿಜೆನ್ಸಿ ಕಚೇರಿ ಸ್ಥಾಪನೆಗೆಂದೇ ಶಾಸಕ ಅಶೋಕ್ ರೈ ನೇತೃತ್ವದಲ್ಲಿ ತಾಲೂಕು ಕಂದಾಯ ಇಲಾಖೆ ಮಂಜೂರು ಮಾಡಿದೆ. ಮುಂದಿನ ದಿನಗಳಲ್ಲಿ ಇಲ್ಲಿ ಸೆಂಟ್ರಲ್ ಇಂಟೆಲಿಜೆನ್ಸಿ ಇನ್ಸ್ಪೆಕ್ಟರ್ ಕಚೇರಿ ನಿರ್ಮಾಣವಾಗಲಿದ್ದು, ಅಗತ್ಯ ಸಿಬ್ಬಂದಿ ನೇಮಕವಾಗಲಿದೆ.
ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ವ್ಯಾಪ್ತಿಗೆ ಸೆಂಟ್ರಲ್ ಇಂಟೆಲಿಜೆನ್ಸಿಯಲ್ಲಿ ಪಶ್ಚಿಮ ವಲಯವಿದೆ. ಇದರಡಿಯಲ್ಲಿ ಪ್ರತೀ ಜಿಲ್ಲಾ ಕೇಂದ್ರಗಳಲ್ಲಿ ಒಂದೊಂದು ಡಿವಿಶನ್ ಕಚೇರಿಗಳಿವೆ. ಇವುಗಳನ್ನು ಹೊರತುಪಡಿಸಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿಇನ್ಸ್ಪೆಕ್ಟರ್ ಕಚೇರಿ ಇರುವುದು ಬಿಟ್ಟರೆ ಬೇರಾವುದೇ ತಾಲೂಕು ಕೇಂದ್ರಗಳಲ್ಲಿ ಕಚೇರಿಯಿಲ್ಲ.
ಇದೇ ಮೊದಲ ಬಾರಿ ಪುತ್ತೂರನ್ನು ಆರಿಸಿಕೊಂಡು ಇನ್ಸ್ಪೆಕ್ಟರ್ ಮಟ್ಟದ ಕಚೇರಿ ಸ್ಥಾಪಿಸಲು ನಿರ್ಧರಿಸಲಾಗಿದೆ. ಕೋಮುಸೂಕ್ಷ್ಮ ಎಂಬ ಕಾರಣಕ್ಕೆ ಭಟ್ಕಳವನ್ನು ಆರಿಸಿಕೊಂಡಿದ್ದರೆ, ಇದೇ ಕಾರಣಕ್ಕೆ ದಕ್ಷಿಣ ಕನ್ನಡ ಗ್ರಾಮಾಂತರ ಭಾಗವನ್ನು ಗಮನದಲ್ಲಿಟ್ಟುಕೊಂಡು ಪುತ್ತೂರನ್ನು ಆರಿಸಲಾಗಿದೆ. ಪ್ರವೀಣ್ ನೆಟ್ಟಾರ್ ಕೊಲೆಯ ನಂತರ ದಕ್ಷಿಣ ಕನ್ನಡಕ್ಕೆ ನೆರೆಯ ಕೇರಳದಿಂದ ಮತೀಯವಾದಿ ಶಕ್ತಿಗಳು ಪ್ರವೇಶಿಸುತ್ತಿರುವುದನ್ನು ಮನಗಂಡು ಈ ಕ್ರಮ ಕೈಗೊಳ್ಳಲಾಗಿದೆ.
ಪುತ್ತೂರಿನಲ್ಲಿ ಸೆಂಟ್ರಲ್ ಇಂಟಲಿಜೆನ್ಸ್ ಕಚೇರಿ ಆರಂಭವಾದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾನೂನು-ಸುವ್ಯವಸ್ಥೆ ಕಾಪಾಡಲು ಹಾಗೂ ಸಂವೇದನಾಶೀಲ ಪ್ರದೇಶಗಳ ಮೇಲೆ ನಿಗಾ ವಹಿಸಲು ಇದು ನೆರವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಹತ್ಯೆ ಪ್ರಕರಣದ ಬಳಿಕ ಜಿಲ್ಲೆಯಲ್ಲಿ ಅತಿರೇಕಿ ಚಟುವಟಿಕೆಗಳ ಮೇಲೆ ಕಣ್ಣಿಟ್ಟುಕೊಳ್ಳುವ ಅಗತ್ಯ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಗುಪ್ತಚರ ಘಟಕವನ್ನು ಪುತ್ತೂರಿನಲ್ಲಿ ಸ್ಥಾಪಿಸುವ ಯೋಜನೆ ರೂಪಿಸಲಾಗಿದೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ಸೆಂಟ್ರಲ್ ಇಂಟೆಲಿಜೆನ್ಸಿಯ ಮಂಗಳೂರು ಡಿವಿಶನ್ನ ಎಸ್ಪಿ ಕಚೇರಿ ಮಂಗಳೂರಿನಲ್ಲಿಯೇ ಇರಲಿದ್ದು, ಜಿಲ್ಲೆ ಮತ್ತು ಕಮಿಷನರೇಟ್ ವ್ಯಾಪ್ತಿಯ ಅಧಿಕಾರ ಯಥಾಪ್ರಕಾರ ಇರಲಿದೆ. ಕಮಿಷನರೇಟ್ ಹೊರತುಪಡಿಸಿದ ದ.ಕ. ಜಿಲ್ಲಾ ವ್ಯಾಪ್ತಿಗೆ ಪುತ್ತೂರಿನಲ್ಲಿ ಇನ್ಸ್ಪೆಕ್ಟರ್ ಕಚೇರಿ ರಚನೆಯಾಗಿ, ಇಲ್ಲಿ ಅಗತ್ಯ ಸಿಬ್ಬಂದಿ ನೇಮಕವಾಗಲಿದೆ.
(ಪುತ್ತೂರಿನಲ್ಲಿ ಸೆಂಟ್ರಲ್ ಇಂಟೆಲಿಜೆನ್ಸಿ ಕಚೇರಿ ಸ್ಥಾಪನೆಗೆ ಅಗತ್ಯ ಜಮೀನು ಮಂಜೂರು ಮಾಡುವಂತೆ ಇಲಾಖೆಯ ಎಸ್ಪಿ ಕಚೇರಿಯಿಂದ 2 ತಿಂಗಳ ಹಿಂದೆ ಮನವಿ ಮಾಡಲಾಗಿತ್ತು. ಇದರಂತೆ ಪಡ್ನೂರಿನಲ್ಲಿ 0.44 ಎಕರೆ ಜಮೀನು ಮಂಜೂರು ಮಾಡಿ ಪಹಣಿ ಮಾಡಲಾಗಿದೆ. ಅದನ್ನು ಇಲಾಖೆಗೆ ಹಸ್ತಾಂತರಿಸಿದ್ದೇವೆ. ಒಂದು ವರ್ಷದೊಳಗೆ ಕಟ್ಟಡ ನಿರ್ಮಾಣವಾಗಿ ಕಚೇರಿ ಕಾರ್ಯಾರಂಭ ಮಾಡಲಿದೆ. ಕಾನೂನು ಮತ್ತು ಸುವ್ಯವಸ್ಥೆ ಪಾಲನೆ ದೃಷ್ಟಿಯಲ್ಲಿ ಇದು ಮಹತ್ವದ ಬೆಳವಣಿಗೆ ಎಂದಿದ್ದಾರೆ ಅಶೋಕ್ ರೈ, ಶಾಸಕ, ಪುತ್ತೂರು.)


























