ಕರ್ನಾಟಕದಲ್ಲಿ ಹವ್ಯಕ ಭಾಷಾ ಬೆಳವಣಿಗೆಗಾಗಿ ಹವ್ಯಕ ಭಾಷಾ ಅಕಾಡೆಮಿಯನ್ನು ಸ್ಥಾಪನೆ ಮಾಡುವುದಾಗಿ 2026-27ರ ಬಜೆಟ್ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಹವ್ಯಕ ಭಾಷೆಗೆ ಸಂಬಂಧಿಸಿದ ಅಕಾಡೆಮಿ ಸ್ಥಾಪನೆ ಮಾಡಬೇಕು ಎಂದು ಹವ್ಯಕ ಬ್ರಾಹ್ಮಣರು ಸುದೀರ್ಘ ಸಮಯದಿಂದ ಬೇಡಿಕೆ ಇಟ್ಟಿದ್ದರು.
ಶ್ರೀ ಅಖಿಲ ಹವ್ಯಕ ಮಹಾಸಭಾ ಸೇರಿದಂತೆ ಹಲವರ ಪ್ರಯತ್ನ ಇದರ ಹಿಂದಿತ್ತು. ಇದೇ ವೇಳೆ ಗೋರ್ ಬಂಜಾರ ಸಮುದಾಯದ ಇತಿಹಾಸ, ಸಂಸ್ಕೃತಿ, ಭಾಷೆ, ಆಚಾರ-ವಿಚಾರ, ಉಡುಗೆ, ಆಹಾರ ಪದ್ದತಿ, ಕಸುಬು ಇತ್ಯಾದಿಗಳನ್ನು ದಾಖಲಿಸಲು ಬಂಜಾರ ವಿಶ್ವಕೋಶವನ್ನು ಪ್ರಕಟಿಸಲಾಗುವುದು. 384. ಮಕ್ಕಳಿಗಾಗಿ ಪಂಪ, ರನ್ನ, ಜನ್ನ, ಬಸವಾದಿ ಶರಣರು, ಸರ್ವಜ್ಞ, ಕನಕ, ಪುರಂದರ, ಲಕ್ಷ್ಮೀಶ, ಸಂಚಿ ಹೊನ್ನಮ್ಮ ಇತ್ಯಾದಿ ಪ್ರಾಚೀನ ಕವಿಗಳ ಹಾಗೂ ಕುವೆಂಪು, ಶಿವರಾಮ ಕಾರಂತ, ದೇವನೂರು ಮಹದೇವ ಮುಂತಾದವರ ಕೃತಿಗಳ ಬಣ್ಣದ ಚಿತ್ರಗಳು ಮತ್ತು ಸಣ್ಣ ವಾಕ್ಯಗಳ ಪುಸ್ತಕಗಳನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಮುದ್ರಿಸಿ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.
ಹವ್ಯಕ ಭಾಷೆಯು ಕನ್ನಡದ ಸಾಮಾಜಿಕ ಉಪಭಾಷೆಯಾಗಿದೆ
ಹವಿಗನ್ನಡ, ಹವ್ಯಕ ಕನ್ನಡ, ಹೈವಗನ್ನಡ, ಹೈಗಭಾಷೆ ಎಂಬ ಹೆಸರುಗಳಿಂದ ಗುರುತಿಸಲ್ಪಡುವ ಹವ್ಯಕ ಭಾಷೆಯು ಕನ್ನಡದ ಸಾಮಾಜಿಕ ಉಪಭಾಷೆಯಾಗಿದ್ದು, ಭಾಷಾ ವೈವಿಧ್ಯ ಹಾಗೂ ಭಾಷಾ ಶ್ರೀಮಂತಿಕೆ ಕಾರಣದಿಂದಾಗಿ ಭಾಷಾ ಜಗತ್ತಿನಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಹೊಂದಿದೆ. ಪ್ರಾಂತ್ಯವಾರು ಭಾಷಾ ವೈವಿಧ್ಯ ಹವಿಗನ್ನಡದ ಶ್ರೀಮಂತಿಕೆಯ ಪ್ರತೀಕವಾಗಿದ್ದು, ಉತ್ತರಕನ್ನಡ, ದಕ್ಷಿಣಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ಕೊಡಗು, ಕಾಸರಗೋಡು ಮುಂತಾದ ಪ್ರದೇಶಗಳಲ್ಲಿ ವಾಸವಾಗಿರುವ 6 ಲಕ್ಷಕ್ಕೂ ಅಧಿಕ ಹವ್ಯಕರ ಮನೆ ಮಾತಾಗಿದೆ.
ಹವ್ಯಕ ಭಾಷಾ ಅಕಾಡೆಮಿ ಸ್ಥಾಪಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ, ರಾಮಚಂದ್ರಾಪುರ ಮಠ ಧನ್ಯವಾದ ಸಲ್ಲಿಸಿದೆ.
ಹವ್ಯಕ ಭಾಷಾ ಅಕಾಡೆಮಿಯನ್ನು ಸ್ಥಾಪಿಸುವ ನಿರ್ಧಾರವನ್ನು ಕೈಗೊಂಡಿರುವ, ರಾಜ್ಯ ಸರ್ಕಾರಕ್ಕೆ ಹಾಗೂ ಈ ಪ್ರಯತ್ನಕ್ಕೆ ಕೈಜೋಡಿಸಿದ ಎಲ್ಲಾ ಹಿತೈಷಿಗಳಿಗೂ ಸಮಾಜದ ಪ್ರಾತಿನಿಧಿಕ ಸಂಸ್ಥೆ ಶ್ರೀ ಅಖಿಲ ಹವ್ಯಕ ಮಹಾಸಭೆ ಹಾಗೂ ಸಮಸ್ತ ಹವ್ಯಕ ಸಮಾಜದ ಪರವಾಗಿ ಧನ್ಯವಾದಗಳನ್ನು ಮಹಾಸಭೆಯ ಅಧ್ಯಕ್ಷರಾದ ಡಾ.ಗಿರಿಧರ ಕಜೆ ತಿಳಿಸಿದ್ದಾರೆ.





























