ಕರಾವಳಿ ಭಾಗದಲ್ಲೂ ಗ್ಯಾಸ್ ವ್ಯತ್ಯಯ ಬಿಸಿ ಕುಕ್ಕೆ ಸುಬ್ರಹ್ಮಣ್ಯಕ್ಕೂ ತಟ್ಟಿದ್ದು, ಗ್ಯಾಸ್ ಪೊರೈಕೆ ವ್ಯತ್ಯಯದಿಂದ ಮಾ.11ರ ಬುಧವಾರದಿಂದ ಬೆಳಗ್ಗಿನ ಉಪಹಾರದಲ್ಲಿ ಬದಲಾವಣೆ ಮಾಡಲಾಗಿದೆ. ಬಿಸಿ ದೇವಸ್ಥಾನಗಳ ಅನ್ನಪ್ರಸಾದಕ್ಕೂ ತಟ್ಟಿದ್ದು, ಹಲವೆಡೆ ಗ್ಯಾಸ್ ಸಮಸ್ಯೆಯಿಂದ ಅನ್ನ ತಯಾರಿಸುವುದೇ ಸವಾಲಾಗಿದೆ. ಮುಂದಿನ ದಿನಗಳಲ್ಲಿ ಇದು ಮತ್ತಷ್ಟು ತೀವ್ರತೆ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪ್ರತಿದಿನ ಬೆಳಗ್ಗೆ ವಿವಿಧ ಬಗೆಯ ಉಪಹಾರ ನೀಡಲಾಗುತ್ತಿತ್ತು, ಇದೀಗ ಗ್ಯಾಸ್ ಪೊರೈಕೆ ವ್ಯತ್ಯಯದಿಂದ ಬೇಯಿಸುವ ತಿನಿಸು ಬದಲಾಗಿ, ಅವಲಕ್ಕಿ, ಮೊಸರು ವಿತರಣೆ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ.
ದೇವಸ್ಥಾನದಲ್ಲಿ ಮುಂದಿನ 3 ದಿನಕ್ಕೆ ಬೇಕಾಗುವಷ್ಟು ಗ್ಯಾಸ್ ಲಭ್ಯವಿದ್ದು, ಬಳಿಕದಲ್ಲೂ ಪೊರೈಕೆ ಆಗದೇ ಇದ್ದಲ್ಲಿ ಸಮಸ್ಯೆ ಆಗಲಿದೆ ಎನ್ನಲಾಗಿದ್ದು, ಈಗಾಗಲೇ ಗ್ಯಾಸ್ ಪೊರೈಕೆ ಸಂಸ್ಥೆಯವರಿಗೆ ದಿನಕ್ಕೆ 20 ಸಿಲಿಂಡರ್ ಗ್ಯಾಸ್ ಪೊರೈಕೆ ಮಾಡಲು ದೇವಸ್ಥಾನದ ವತಿಯಿಂದ ಪತ್ರ ಬರೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮತ್ತೂ ಪೊರೈಕೆ ಆಗದೇ ಇದ್ದಲ್ಲಿ ಮಧ್ಯಾಹ್ನದ ಭೋಜನ ಪ್ರಸಾದ ವಿತರಣೆಯಲ್ಲೂ ಕೆಲ ಬದಲಾವಣೆ ಮಾಡಲು ಚಿಂತನೆ ನಡೆಸಲಾಗಿದ್ದು, ಬದಲಾವವಣೆ ಮಾಡುವುದಿದ್ದಲ್ಲಿ ಈ ಬಗ್ಗೆ ದೇವಸ್ಥಾನದ ವತಿಯಿಂದ ಅಧಿಕೃತ ಮಾಹಿತಿ ನೀಡಲಾಗುತ್ತದೆ ಎಂದು ತಿಳಿದುಬಂದಿದೆ.
ದೇವಸ್ಥಾನ, ಕ್ಯಾಟರಿಂಗ್, ಹಾಸ್ಟೆಲ್, ಪಿಜಿಗೆ, ಫಾಸ್ಟ್ಫುಡ್, ಗೂಡಂಗಡಿ ಸೇರಿದಂತೆ ಇತರೆಡೆ ಗ್ಯಾಸ್ ಸರಬರಾಜು ನಿಲ್ಲಿಸಿ ಕೇವಲ ಮನೆಗೆ ನೀಡಲಾಗುತ್ತಿದೆ. ರಾಜ್ಯದಲ್ಲಿ ನಂಬರ್ ವನ್ ಆದಾಯ ದೇವಸ್ಥಾನ ಎಂಬ ಹಿರಿಮೆ ಪಡೆದುಕೊಂಡ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಗ್ಯಾಸ್ ಪೂರೈಕೆ ಕೊರತೆಯಿಂದ ಮಾ. 11 ರಿಂದ ಬೆಳಗ್ಗಿನ ಉಪಾಹಾರದಲ್ಲಿ ಬದಲಾವಣೆ ಮಾಡಲಾಗಿದೆ.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಒಲೆ ಅಡುಗೆ:
ಗ್ಯಾಸ್ ಟ್ರಬಲ್ ಹಿನ್ನೆಲೆಯಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಉರುವಲು ಬಳಸಿ ಒಲೆಯಲ್ಲಿ ಅಡುಗೆ ಮಾಡಲು ನಿರ್ಧರಿಸಲಾಗಿದೆ.
ಮಾ.12 ರಿಂದ ದೇವಸ್ಥಾನದ ಪಾಕಶಾಲೆಯಲ್ಲಿ ಕಟ್ಟಿಗೆ ಒಲೆಯಲ್ಲಿ ಅಡುಗೆ ಮಾಡಲಾಗುವುದು. ಅನ್ನ, ಸಾರು, ಸಾಂಬಾರ್, ಪಾಯಸ ಇತ್ಯಾದಿಗಳನ್ನು ಕಟ್ಟಿಗೆ ಒಲೆಯಲ್ಲಿ ತಯಾರಿಸಲಾಗುತ್ತದೆ. ಇದಕ್ಕಾಗಿ ವೈಯಕ್ತಿಕವಾಗಿ ಎರಡು ಲೋಡ್ ಕಟ್ಟಿಗೆ ನೀಡಿದ್ದೇನೆ. ಭಕ್ತರಿಂದಲೂ ಒಂದು ಲೋಡ್ ಕಟ್ಟಿಗೆ ಸೇವಾರೂಪದಲ್ಲಿ ಬಂದಿದೆ. ದೇವರ ಪ್ರಸಾದ ಅಪ್ಪವನ್ನು ಸದ್ಯಕ್ಕೆ ಗ್ಯಾಸ್ ಒಲೆಯಲ್ಲಿಮಾಡಲಾಗುತ್ತದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ತಿಳಿಸಿದ್ದಾರೆ.
ವಾಣಿಜ್ಯ ಉದ್ದೇಶದ ಗ್ಯಾಸ್ ಸರಬರಾಜು ನಿಂತಿರುವ ಹಿನ್ನೆಲೆಯಲ್ಲಿ ಹೋಟೆಲ್, ಪಿಜಿ, ಫಾಸ್ಟ್ಫುಡ್ ಹಾಗೂ ಇತರ ವ್ಯಾಪಾರ ಕೇಂದ್ರಗಳ ವಾರೀಸುದಾರರು ಗ್ಯಾಸ್ ಏಜೆನ್ಸಿಗೆ ಮುಗಿಬಿದ್ದರು. ಆದರೆ ಮನೆಗಳಿಗೆ ಮಾತ್ರ ಗ್ಯಾಸ್ ಸರಬರಾಜು ಅನುಮತಿಯಿರುವ ಕಾರಣ ವಾಣಿಜ್ಯ ಗ್ಯಾಸ್ಗಳಿಗೆ ಏಜೆನ್ಸಿಯವರು ಹಿಂದೇಟು ಹಾಕಿದ್ದಾರೆ.
ಪ್ರಮುಖ ಗ್ಯಾಸ್ ಕಂಪನಿಗಳು ವಾಧಿಣಿಜ್ಯ ಸಿಲಿಂಡರ್ ಬುಕ್ಕಿಂಗ್ಗೆ ವ್ಯವಸ್ಥೆ ಮಾಡಿದರೂ, ಬಿಲ್ ಜನರೇಟ್ಗೆ 2ರಿಂದ 3 ದಿನ ಕಾಯುವ ಸ್ಥಿತಿ ಉದ್ಭವವಾಗಿದೆ.



























