ಪುತ್ತೂರು: ಶಾಸಕ ಅಶೋಕ್ ಕುಮಾರ್ ರೈ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ರೀತಿಯಲ್ಲಿ ಚಿತ್ರಿಸಿ, ಸರ್ಕಾರ ಹಾಗೂ ಗೃಹ ಸಚಿವರ ಬಗ್ಗೆ ಜನರಲ್ಲಿ ತಪ್ಪು ಕಲ್ಪನೆ ಮೂಡಿಸುವ ಉದ್ದೇಶದಿಂದ ಪ್ರಚಾರ ನಡೆಸಲಾಗಿದೆ ಎಂದು ಆರೋಪಿಸಿ, ಮಹೇಶ್ ವಿಕ್ರಂ ಹೆಗಡೆ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಗೆ ಕಾಂಗ್ರೆಸ್ ಮುಖಂಡರು ದೂರು ನೀಡಿದ್ದಾರೆ.
ಪುತ್ತೂರು ಬ್ಲಾಕ್ ಕಾಂಗ್ರೆಸ್ ಹಾಗೂ ಬ್ಲಾಕ್ ಸಾಮಾಜಿಕ ಜಾಲತಾಣ ಘಟಕದ ವತಿಯಿಂದ ಪುತ್ತೂರು ಆರಕ್ಷಕ ಠಾಣೆಗೆ ದೂರು ಸಲ್ಲಿಸಲಾಗಿದೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇತೃತ್ವದಲ್ಲಿ, ಪುತ್ತೂರು ವಿಧಾನಸಭಾ ಕ್ಷೇತ್ರದ ಸಾಮಾಜಿಕ ಜಾಲತಾಣ ಘಟಕದ ಅಧ್ಯಕ್ಷ ಸುಪ್ರೀತ್ ಕಣ್ಣಾರಾಯ ಅವರು ದೂರು ನೀಡಿದ್ದಾರೆ.
ದೂರಿನಲ್ಲಿ, ಬಂಟ್ವಾಳದಲ್ಲಿ ನಡೆದ ಘಟನೆಗೆ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರ ಕುಮ್ಮಕ್ಕು ಇದೆ ಎಂಬ ಅರ್ಥ ಬರುವ ರೀತಿಯಲ್ಲಿ ಬರಹಗಳು ಹಾಗೂ ಭಾವಚಿತ್ರಗಳನ್ನು ದುರುಪಯೋಗಪಡಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಇಂತಹ ಪ್ರಚಾರದಿಂದ ಜನರಲ್ಲಿ ಶಾಸಕ ಅಶೋಕ್ ರೈ, ರಾಜ್ಯ ಸರ್ಕಾರ ಹಾಗೂ ಗೃಹ ಸಚಿವರ ಬಗ್ಗೆ ತಪ್ಪು ಗ್ರಹಿಕೆ ಮೂಡುತ್ತಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದ್ದು, ಮಹೇಶ್ ವಿಕ್ರಂ ಹೆಗಡೆ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಪುಡಾ ಅಧ್ಯಕ್ಷ ಅಮಳ ರಾಮಚಂದ್ರ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರವಿಪ್ರಸಾದ್ ಶೆಟ್ಟಿ, ಶರೋನ್ ಸಿಕ್ವೇರಾ, ಸೌರಭ್ ರೈ, ಬ್ಲಾಕ್ ಸಾಮಾಜಿಕ ಜಾಲತಾಣದ ಅಧ್ಯಕ್ಷ ಪೃಥ್ವಿರಾಜ್, ಅಕ್ರಮ-ಸಕ್ರಮ ಸಮಿತಿಯ ಸದಸ್ಯ ರಾಮಣ್ಣ ಪಿಲಿಂಜ, ಪ್ರಚಾರ ಸಮಿತಿಯ ಅಧ್ಯಕ್ಷ ಅಮರನಾಥ ಗೌಡ, ಬ್ಲಾಕ್ ಕಾರ್ಯದರ್ಶಿ ಗಂಗಾಧರ್ ಶೆಟ್ಟಿ ಎಲಿಕ್ಕ, ವಲಯಾಧ್ಯಕ್ಷರಾದ ಧೀರಜ್ ಗೌಡ ಕೊಡಿಪ್ಪಾಡಿ, ಗಿರೀಶ್ ರೈ ಆರ್ಯಪು, ಅಶೋಕ್ ಪಾಯಸ್ ಹಾಗೂ ಪ್ರಶಾಂತ್ ಮುರಾ ಉಪಸ್ಥಿತರಿದ್ದರು.
























