ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಅವ್ಯಾಹತ ಮಳೆಗೆ ಮತ್ತೊಂದು ಬಲಿಯಾಗಿದೆ. ಸ್ಟೇ ವೈಯರ್ ಗೆ ವಿದ್ಯುತ್ ತಂತಿ ಸ್ಪರ್ಷಿಸಿ ಯುವತಿಯೊಬ್ಬಳು ಮೃತಪಟ್ಟಿದ್ದಾಳೆ. ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದ ಬರ್ಗುಲಾ ನಿವಾಸಿ ಪ್ರತೀಕ್ಷಾ ಶೆಟ್ಟಿ (21) ಮೃತ ಯುವತಿ.
ಧರ್ಮಸ್ಥಳ ಠಾಣಾ ವ್ಯಾಪ್ತಿಯ ಕೊಕ್ಕಡದ ಶಿಬಾಜೆ ಬಳಿ ನಡೆದಿದ್ದು, ಮನೆಯ ರಸ್ತೆಗೆ ಪಾರ್ಸೆಲ್ ಬಂದಿದ್ದು, ಅದನ್ನು ಸ್ವೀಕರಿಸಲು ಹೋದಾಗ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಗಣೇಶ್ ಶೆಟ್ಟಿ ಮತ್ತು ರೋಹಿಣಿ ದಂಪತಿ ಪುತ್ರಿ ಪ್ರತೀಕ್ಷಾ ಮನೆ ಬಳಿ ಬಂದ ಪಾರ್ಸೆಲ್ ಅನ್ನು ಸ್ವೀಕರಿಸಲು ಹೋದಾಗ ಅವಘಡ ಸಂಭವಿಸಿದೆ . ರಸ್ತೆಯಲ್ಲಿ ಹರಿದಾಡುತ್ತಿದ್ದ ನೀರಿನಲ್ಲಿ ವಿದ್ಯುತ್ ಪ್ರವಹಿಸಿದ ಪರಿಣಾಮ ಅದನ್ನು ಸ್ಪರ್ಶಿಸಿದ ಪ್ರತಿಕ್ಷಾಗೆ ವಿದ್ಯುತ್ ಆಘಾತವಾಗಿದೆ.
ದುರ್ಘಟನೆ ತಂದೆಯ ಸಮ್ಮುಖವೇ ನಡೆದಿದ್ದು , ರಕ್ಷಿಸಲು ಧಾವಿಸಿದ ತಂದೆಗೂ ವಿದ್ಯುತ್ ಆಘಾತವಾಗಿದ್ದು, ಆದರೆ ಪುತ್ರಿಯನ್ನು ರಕ್ಷಿಸಲು ಸಾಧ್ಯವಾಗಿಲ್ಲ ಎಂದು ತಿಳಿದು ಬಂದಿದೆ.
ಸ್ಟೇ ವೈಯರ್ ಗೆ ವಿದ್ಯುತ್ ತಂತಿ ಸ್ಪರ್ಶಿಸಿದ ಪರಿಣಾಮ ಅದು ನೀರಿಗೆ ಪ್ರವಾಹಿಸಿದೆ. ಪರಿಣಾಮ ವಿದ್ಯುತ್ ಶಾಕ್ ಹೊಡೆದಿದೆ ಎಂದು ಪ್ರಾಥಮಿಕ ಮಾಹಿತಿ ಲಭಿಸಿದೆ.