ಉತ್ತರ ಪ್ರದೇಶದ ಎಟಾ ಮೂಲದವರಾದ ಭೋಲೆ ಬಾಬಾ ಅಲಿಯಾಸ್ ನಾರಾಯಣ ಸಾಕರ್ ಹರಿ ಅವರು ಹತ್ರಾಸ್ ಜಿಲ್ಲೆಯ ಗ್ರಾಮವೊಂದರಲ್ಲಿ ‘ಭೋಲೆ ಸತ್ಸಂಗ’ ಹೆಸರಿನ
ಏರ್ಪಡಿಸಿದ್ದರು. ಸಭೆಗೆ ಮಿತಿಮೀರಿ ಜನರು ಸೇರಿದ್ದರು. ಕೆಲವರು ಭೋಲೆ ಬಾಬಾ ಅವರನ್ನು ಹತ್ತಿರದಿಂದ ನೋಡಿ ಅವರು ಪಾದ ಇಟ್ಟ ಸ್ಥಳದ ಪಾದ ಧೂಳಿಯನ್ನು ಸಂಗ್ರಹಿಸಲು ಮುಗಿಬಿದ್ದರು. ಆಗ ನೂಕುನುಗ್ಗಲು ಉಂಟಾಗಿದೆ.
ಜಿಲ್ಲಾಡಳಿತ ನೀಡಿದ ಅನುಮತಿಯ ಮಿತಿ ಮೀರಿ ಜನರನ್ನು ಸೇರಿಸಲಾಗಿತ್ತು. ಹೀಗಾಗಿ ಸ್ಥಳದಲ್ಲಿ ಉಸಿರುಕಟ್ಟುವ ವಾತಾವರಣ ಹಾಗೂ ನೂಕುನುಗ್ಗಲು ಉಂಟಾಗಿ ಮಕ್ಕಳು, ಮಹಿಳೆಯರು ಸೇರಿ ಅನೇಕ ಜನರು ಒಬ್ಬರ ಮೇಲೊಬ್ಬರು ಬಿದ್ದು ಪ್ರಾಣ ಬಿಟ್ಟಿದ್ದಾರೆ. ಭೋಲೆ ಬಾಬಾ ಉತ್ತರ ಪ್ರದೇಶದ ಇಟಹಾ ಜಿಲ್ಲೆಯ ಪಿಟಲಿ ತಾಲ್ಲೂಕಿನ ಬಹದ್ದೂರ್ ಎಂಬ ಗ್ರಾಮಕ್ಕೆ ಸೇರಿದವರು. ಇವರು ಸ್ವಯಂ ಘೋಷಿತ ದೇವ ಮಾನವ. ನಾರಾಯಣ್ ಸಕಾರ್ ಹರಿ ಅಲಿಯಾಸ್ ಸಕಾರ್ ವಿಶ್ವ ಹರಿ ಅಲಿಯಾಸ್ ಭೋಲೆ ಬಾಬಾ ಎಂದು ಖ್ಯಾತಿ ಪಡೆದವರು.
ಈ ಹಿಂದೆ ಇಂಟಲಿಜೆನ್ಸ್ ಬ್ಯೂರೋದಲ್ಲಿ ಅಧಿಕಾರಿಯಾಗಿದ್ದ ಭೋಲೆ ಬಾಬಾ 26 ವರ್ಷಗಳ ಹಿಂದೆಯೇ ಈ ಸರ್ಕಾರಿ ಉದ್ಯೋಗ ತ್ಯಜಿಸಿದ. ಬಳಿಕ ಧಾರ್ಮಿಕ ಗುರುವಾದ ಇವರು ಪ್ರತಿ ಮಂಗಳವಾರ ಉತ್ತರ ಪ್ರದೇಶ, ರಾಜಸ್ಥಾನ ಸೇರಿ ವಿವಿಧೆಡೆ ಸತ್ಸಂಗ ನಡೆಸುತ್ತಿದ್ದರು. ಪ್ರತಿ ಬಾರಿಯೂ ಇವರ ಕಾರ್ಯಕ್ರಮಕ್ಕೆ ಸಾವಿರಾರು ಜನ ಸೇರುತ್ತಿದ್ದರು. ಆದರೆ ಈ ಬಾರಿ ಲಕ್ಷಾಂತರ ಜನ ಸೇರಿದ್ದರಿಂದ ಈ ಘಟನೆ ಸಂಭವಿಸಿದೆ.
ಘಟನೆಯ ತೀವ್ರತೆಯ ಬಗ್ಗೆ ಪ್ರತಿಕ್ರಿಯಿಸಿದ ಹತ್ರಾಸ್ ಜಿಲ್ಲೆಯ ವೈದ್ಯಾಧಿಕಾರಿ ಡಾ. ಉಮೇಶ್ ಕುಮಾರ್ ತ್ರಿಪಾಠಿ ಈ ದುರ್ಘಟನೆಯಲ್ಲಿ ಸತ್ತವರಲ್ಲಿ ಹೆಚ್ಚಿನವರು ಮಹಿಳೆಯರೇ ಆಗಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಮ್ಲಜನಕದ ಕೊರತೆಯಿಂದ ಕಾಲ್ತುಳಿತ ಉಂಟಾಗಿರಬಹುದು ಎಂದು ಹೇಳಲಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದ್ದು ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ. ಗಾಯಾಳುಗಳಲ್ಲಿ ಹಲವರ ಪರಿಸ್ಥಿತಿ ತೀವ್ರ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಭೀತಿ ಆವರಿಸಿದೆ ಎಂದು ಹೇಳಿದ್ದಾರೆ.
ಇನ್ನು ಈ ಘಟನೆಯ ಬಗ್ಗೆ ಘಟನೆಯ ಬಗ್ಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂತಾಪ ವ್ಯಕ್ತಪಡಿಸಿದ್ದು, ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಘಟನಾ ಸ್ಥಳಕ್ಕೆ ಧಾವಿಸಿ ಪರಿಹಾರ ಕಾರ್ಯಗಳನ್ನು ತ್ವರಿತಗೊಳಿಸುವಂತೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ದು ಸೂಕ್ತ ವೈದ್ಯಕೀಯ ನೆರವು ನೀಡುವಂತೆ ಸೂಚನೆ ನೀಡಿರುವ ಅವರು ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.