ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರದಲ್ಲಿ ಬಂಧನದಲ್ಲಿರುವ ನಟ ದರ್ಶನ್ಗೆ ಜೈಲಿನಲ್ಲಿ ರಾಜಾತಿಥ್ಯ ಹಾಗೂ ರೌಡಿಗಳ ಜೊತೆಗೆ ವಿಡಿಯೋ ಕಾಲ್ ಸಂಭಾಷಣೆ ಮಾಡಿರುವ ಫೋಟೋಗಳು, ವಿಡಿಯೋಗಳು ಸಾಕಷ್ಟು ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಗಳು ವ್ಯಕ್ತವಾಗುತ್ತಿದೆ. ಈ ನಡುವೆ ಎಚ್ಚೆತ್ತುಕೊಂಡಿರುವ ಗೃಹ ಇಲಾಖೆ 7 ಮಂದಿ ಜೈಲು ಸಿಬ್ಬಂದಿಯನ್ನು ಅಮಾನತು ಮಾಡಿದೆಬೆಂಗಳೂರಿನಲ್ಲಿ ಇದೇ ವಿಚಾರವಾಗಿ ಸೋಮವಾರ ಹೇಳಿಕೆ ನೀಡಿರುವ ಗೃಹ ಸಚಿವ ಡಾ. ಜಿ ಪರಮೇಶ್ವರ್, ರಾಜ್ಯದ ಎಲ್ಲಾ ಜೈಲುಗಳಲ್ಲಿ ಸಿಸಿ ಟಿವಿ, ಜಾಮರ್ ಅಳವಡಿಸಲಾಗಿದೆ. ಹೀಗಿದ್ದರೂ ಇಂತಹ ಘಟನೆಗಳು ನಡೆಯುತ್ತವೆ ಎಂದಾದರೆ ಅಧಿಕಾರಿಗಳು ಕಟ್ಟುನಿಟ್ಟಾಗಿ ಕೆಲಸ ಮಾಡಬೇಕಾಗಿದೆ.
ಇಂತಹ ಘಟನೆಗಳಿಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಂಡು, ಇಂತಹ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗುವುದು ಎಂದು ತಿಳಿಸಿದರು..ಸದ್ಯ 7 ಮಂದಿ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಈ ಘಟನೆಯಲ್ಲಿ ಜೈಲಾಧಿಕಾರಿಗಳು ನೇರವಾಗಿ ಭಾಗಿಯಾದರೆ ಅವರನ್ನು ಅಮಾನತು ಮಾಡುತ್ತೇವೆ. ಇದರಲ್ಲಿ ಯಾವುದೇ ಮುಲಾಜು ಇಲ್ಲ. ಇದರಲ್ಲಿ ಸಿಬ್ಬಂದಿ ಹಾಗೂ ಅಧಿಕಾರಿ ಎಂದು ತಾರತಮ್ಯ ಮಾಡಲ್ಲ ಎಂದು ತಿಳಿಸಿದರು.
ಈ ಹಿಂದೆ ದರ್ಶನ್ಗೆ ಜೈಲಿನಲ್ಲಿ ಚಿಕನ್ ಬಿರಿಯಾನಿ ಕೊಡಲಾಗಿದೆ ಎಂಬ ಸುದ್ದಿ ಹರಡಿತ್ತು. ಆದರೆ ಅದನ್ನು ಕೊಟ್ಟಿರಲ್ಲ, ಅಂತಹ ಘಟನೆ ನಡೆಯಲ್ಲ ಎಂದು ಹೇಳಿದ್ದೆ. ಆದರೆ ಇದೀಗ ರಾಜ್ಯಾತಿಥ್ಯ ನೀಡಿದ ಘಟನೆ ನಡೆದಿದೆ. ಇದನ್ನು ನಾನು ಸಮರ್ಥನೆ ಮಾಡಲ್ಲ. ಇಂತಹ ಘಟನೆ ಆಗಬಾರದು ಎಂದು ಹೇಳಿದರು
ಜೈಲಿನಲ್ಲಿ ಈಗಾಗಲೇ ಜಾಮರ್ ಅಳವಡಿಸಲಾಗಿದೆ. ಆದರೆ ಇದರ ಪ್ರೀಕ್ವೆನ್ಸಿ ಜಾಸ್ತಿ ಇದ್ದರೆ ಅಕ್ಕಪಟ್ಟಕ್ಕೆ ತೊಂದರೆ ಆಗುತ್ತದೆ. ಅದಕ್ಕೆ ಪ್ರೀಕ್ವೆನ್ಸಿ ಕಡಿಮೆ ಮಾಡಿದ್ದೇವೆ. ಇವಾಗ ದರ್ಶನ್ ಟೀ ಕುಡಿಯುವ ಹಾಗೂ ಸಿಗರೇಟು ಸೇದುವ ಫೋಟೋ ಯಾರು ತೆಗೆದರು? ಮೊಬೈಲ್ ಜೈಲಿನ ಒಳಗಡೆ ಹೇಗೆ ಹೋಯಿತು? ಯಾವ ಮೊಬೈಲ್ನಲ್ಲಿ ಫೋಟೋ ತೆಗೆದಿದ್ದಾರೆ ಎಂಬ ಬಗ್ಗೆ ತನಿಖೆ ನಡೆಸುತ್ತೇವೆ ಎಂದು ತಿಳಿಸಿದರು.ದರ್ಶನ್ ನೋಡಲು ಜೈಲಿಗೆ ಎಲ್ಲರಿಗೂ ಒಳಗಡೆ ಹೋಗಲು ಅವಕಾಶ ಇಲ್ಲ. ಜೈಲಾಧಿಕಾರಿ ಅವಕಾಶ ಕೊಟ್ಟರೆ ಮಾತ್ರ ಅನುಮತಿ ನೀಡಲಾಗುತ್ತಿದೆ. ತನಿಖೆಯಲ್ಲಿ ಎಲ್ಲವೂ ಹೊರ ಬರಲಿದೆ. ಫೋನ್ ಬಳಸಲು ಹೇಗೆ ಅವಕಾಶ ಕೊಟ್ಟವರು ಯಾರು? ಸಿಗರೇಟು ಹೇಗೆ ಸಿಕ್ಕಿತು? ಇದೆಲ್ಲದರ ಬಗ್ಗೆ ತನಿಖೆ ನಡೆಸಲಾಗುತ್ತದೆ ಎಂದರು.24/7 ಸಿಟಿ ಟಿವಿ ಇರುತ್ತದೆ. ಯಾವ ಯಾವ ಬ್ಯಾರಕ್ನಲ್ಲಿ ಏನು ನಡೆಯುತ್ತದೆ ಎಂಬುವುದು ಸಿಸಿ ಟಿವಿಯಲ್ಲಿ ಕಾಣುತ್ತದೆ. ಹೀಗಿದ್ದರೂ ಕ್ರಮ ಕೈಗೊಳ್ಳದೆ ಇದ್ದರೆ ಅಂತವರ ವಿರುದ್ಧ ಕಾನೂನು ಕ್ರಮವನ್ನು ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ಯಾರ ಒತ್ತಡನೂ ನನ್ನ ಮೇಲಿಲ್ಲ. ನನ್ನ ಲೆವರ್ ಒರೆಗೆ ಯಾರು ಮುಟ್ಟಲು ಆಗಲ್ಲ ಎಂದ ಅವರು ದರ್ಶನ್ ಹಾಗೂ ಗ್ಯಾಂಗ್ ಸದಸ್ಯರನ್ನು ಬೇರೆ ಜೈಲಿಗೆ ವರ್ಗಾವಣೆ ಮಾಡುವ ನಿಟ್ಟಿನಲ್ಲಿ ಚಿಂತನೆ ನಡೆಯುತ್ತಿದೆ ಎಂದೂ ಇದೇ ಸಂದರ್ಭದಲ್ಲಿ ತಿಳಿಸಿದರು.