ಮಂಗಳೂರು ಹಾಗೂ ಬೆಂಗಳೂರು ನಡುವಿನ ಹೈಸ್ಪೀಡ್ ಕಾರಿಡಾರ್ ಸಂಬಂಧ ಶಿರಾಡಿ ಘಾಟಿಯಲ್ಲಿ ಸುರಂಗ ಮಾರ್ಗ ಸೇರಿದಂತೆ ರೈಲ್ವೇ ಮತ್ತು ಹೆದ್ದಾರಿಗಳ ಸಮಗ್ರ ಅಭಿವೃದ್ಧಿಗೆ ಜಂಟಿ ಸಮೀಕ್ಷೆ ನಡೆಸಲು ಕೇಂದ್ರ ಸರ್ಕಾರವು ಇದೀಗ ತಜ್ಞರ ಜಂಟಿ ಕಾರ್ಯಕಾರಿ ಸಮಿತಿಯನ್ನು ರಚಿಸಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ತಿಳಿಸಿದ್ದಾರೆ.
ಬೆಂಗಳೂರು-ಮಂಗಳೂರು ಹೈಸ್ಪೀಡ್ ಕಾರಿಡಾರ್ ಯೋಜನೆಯಡಿ ಶಿರಾಡಿ ಘಾಟಿಯಲ್ಲಿ ಹೆದ್ದಾರಿ ಹಾಗೂ ರೈಲ್ವೆ ಮಾರ್ಗ ಅಭಿವೃದ್ಧಿಗೆ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸುವುದಕ್ಕೆ ಸಂಬಂಧಿಸಿದಂತೆ ಎರಡೂ ಇಲಾಖೆಗಳ ಸಹಭಾಗಿತ್ವದಲ್ಲಿ ಜಂಟಿ ಸಮೀಕ್ಷೆ ನಡೆಸಲು ತಜ್ಞರ ಸಮಿತಿ ರಚಿಸುವಂತೆ ಕ್ಯಾ. ಚೌಟ ಅವರು ಕೇಂದ್ರ ಹೆದ್ದಾರಿ ಸಚಿವಾಲಯಕ್ಕೆ ಮನವಿ ಮಾಡಿದ್ದರು. ಕ್ಯಾ. ಚೌಟ ಅವರ ಕೋರಿಕೆಗೆ ಸ್ಪಂದಿಸಿ ಹೆದ್ದಾರಿ ಸಚಿವಾಲಯವು ತಜ್ಞರ ಜಂಟಿ ಕಾರ್ಯಕಾರಿ ಸಮಿತಿ ರಚನೆ ಮಾಡಿದೆ.
“ರೈಲ್ವೆ ಇಲಾಖೆಯೊಂದಿಗೆ ಶಿರಾಡಿ ಘಾಟ್ ಪ್ರದೇಶದ ಜಂಟಿ ಸಮೀಕ್ಷೆ ನಡೆಸಲು ತಜ್ಞರ ಸಮಿತಿ ನೇಮಿಸುವ ಕುರಿತು ತಾವು ಮಾಡಿದ ವಿಚಾರವನ್ನು ಪರಿಶೀಲಿಸಲಾಗಿದ್ದು, ಹೆದ್ದಾರಿ ಸಚಿವಾಲಯ, ರೈಲ್ವೆ ಸಚಿವಾಲಯ ಹಾಗೂ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ಒಳಗೊಂಡ ಜಂಟಿ ಕಾರ್ಯಕಾರಿ ಸಮಿತಿಯನ್ನು ರಚಿಸಲಾಗಿದೆ. ಈ ತಜ್ಞರ ಸಮಿತಿಯು ಶಿರಾಡಿ ಘಾಟ್ ಪ್ರದೇಶದಲ್ಲಿ ರೈಲು ಮತ್ತು ರಸ್ತೆ ಸಂಪರ್ಕಿತ ಸುರಂಗ ಮಾರ್ಗದ ಸಾಧ್ಯತೆ ಹಾಗೂ ಸಾಧಕ-ಬಾಧಕಗಳ ಬಗ್ಗೆ ಸಮಗ್ರ ಪರಿಶೀಲನೆ ನಡೆಸಲಿದೆ ಎಂದು ಹೆದ್ದಾರಿ ಸಚಿವ ನಿತಿನ್ ಗಡ್ಕರ್ ಅವರು ಕ್ಯಾ. ಚೌಟ ಅವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
ಹರ್ಷ ವ್ಯಕ್ತಪಡಿಸಿದ ಸಂಸದ ಕ್ಯಾ. ಚೌಟ
ಶಿರಾಡಿ ಘಾಟಿನಲ್ಲಿ ರೈಲ್ವೆ ಮತ್ತು ಹೆದ್ದಾರಿ ಜಂಟಿ ಸಮೀಕ್ಷೆಗಾಗಿ ತಜ್ಞರ ಜಂಟಿ ಸಮಿತಿ ರಚನೆ ಮಾಡಿರುವುದಕ್ಕೆ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಇದು ಬೆಂಗಳೂರು-ಮಂಗಳೂರು ಹೈಸ್ಪೀಡ್ ಕಾರಿಡಾರ್ ಯೋಜನೆ ಸಂಬಂಧ ದಕ್ಷಿಣ ಕನ್ನಡ ಜನರ ಬಹುದಿನದ ಕನಸು ನನಸಾಗುವ ಮೊದಲ ಹೆಜ್ಜೆಯಾಗಿದೆ. ಶಿರಾಡಿ ಘಾಟಿ ಪ್ರದೇಶದ ಪರಿಸರ ಸೂಕ್ಷ್ಮತೆ ಮತ್ತು ಭೌಗೋಳಿಕ ಸಂಕೀರ್ಣತೆ ಗಮನದಲ್ಲಿಟ್ಟುಕೊಂಡು ಈ ಭಾಗದಲ್ಲಿ ರಸ್ತೆ ಹಾಗೂ ರೈಲು ಹಳಿಗಳ ಅಭಿವೃದ್ದಿ ಕಾಮಗಾರಿಗೆ ರೈಲ್ವೇ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಜಂಟಿ ಸಮೀಕ್ಷೆ ಕೈಗೊಳ್ಳಲು ಮತ್ತು ಡಿಪಿಆರ್ ಮೇಲ್ವೀಚಾರಣೆಗೆ ತಜ್ಞರ ಸಮಿತಿ ನೇಮಿಸುವಂತೆ ಮನವಿ ಮಾಡಲಾಗಿತ್ತು. ನಮ್ಮ ಮನವಿಗೆ ತಕ್ಷಣ ಸ್ಪಂದಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ರೈಲ್ವೆ ಮತ್ತು NHAI ಅಧಿಕಾರಿಗಳನ್ನೊಳಗೊಂಡ ಸಮಿತಿ ರಚಿಸಿದ್ದಾರೆ. ಈ ಹಿನ್ನಲೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಈ ಸಮಿತಿಯು ರಸ್ತೆ ಮತ್ತು ರೈಲು ಸುರಂಗ ಮಾರ್ಗದ ಕಾರ್ಯಸಾಧ್ಯತೆಯನ್ನು ಪರಿಶೀಲಿಸಲಿದೆ. ಇದರೊಂದಿಗೆ ಬೆಂಗಳೂರು-ಮಂಗಳೂರು ಹೈಸ್ಪೀಡ್ ಕಾರಿಡಾರ್ ಡಿಪಿಆರ್ ಪ್ರಕ್ರಿಯೆ ಚುರುಕುಗೊಳ್ಳಲಿದೆ ಎಂದು ಕ್ಯಾ. ಚೌಟ ಹೇಳಿದ್ದಾರೆ.
ಸಮಗ್ರ ಕರಾವಳಿ ಹಾಗೂ ಮಂಗಳೂರು ಬಂದರು ಅಭಿವೃದ್ದಿ ದೃಷ್ಟಿಯಿಂದ ಮಂಗಳೂರ -ಬೆಂಗಳೂರು ನಡುವೆ ರೈಲ್ವೇ ಹಾಗೂ ಹೆದ್ದಾರಿ ಅಭಿವೃದ್ದಿ ಆಗಬೇಕಾಗಿದೆ. ಅದರಂತೆ ಬೆಂಗಳೂರು-ಮಂಗಳೂರು ಹೈಸ್ಪೀಡ್ ಕಾರಿಡಾರ್ ಸಂಬಂಧ ಶಿರಾಡಿ ಘಾಟಿಯಲ್ಲಿ ಹೆಚ್ಚುವರಿಯಾಗಿ ದ್ವಿಪಥ ನಿರ್ಮಾಣಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ರೈಲ್ವೆ ಇಲಾಖೆ ಜಂಟಿಯಾಗಿ ವಿಸ್ತೃತ ಯೋಜನಾ ವರದಿ(ಡಿಪಿಆರ್) ಸಿದ್ಧಪಡಿಸಲು ಸಮಿತಿ ರಚಿಸುವಂತೆ ಕೋರಿ ಸಂಸದ ಕ್ಯಾ. ಚೌಟ ಅವರು ಕಳೆದ ಜುಲೈನಲ್ಲಿ ಹೆದ್ದಾರಿ ಇಲಾಖೆಗೆ ಪತ್ರ ಮುಖೇನ ಕೋರಿದ್ದರು. ಅಲ್ಲದೇ ಇದಾದ ಬೆನ್ನಲ್ಲೇ ನವದೆಹಲಿ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಖುದ್ದು ಬೇಟಿ ಮಾಡಿ ಮನವಿ ಕೂಡ ಸಲ್ಲಿಸಿದ್ದರು. ಸಂಸದರ ಕೋರಿಕೆಗೆ ಸ್ಪಂದಿಸಿದ ಸಚಿವ ನಿತಿನಿ ಗಡ್ಕರಿ ಅವರು ಜಂಟಿ ಕಾರ್ಯಕಾರಿ ಸಮಿತಿ ರಚಿಸಿರುವ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.
























