ಅಯೋಧ್ಯೆ, ಜುಲೈ 6: ಅಯೋಧ್ಯೆಯ ರಾಮ ಮಂದಿರಕ್ಕೆ ಬಂದ ದೇಣಿಗೆ ಹಣದ ಆಪಾದಿತ ಕಳ್ಳತನದ ತನಿಖೆ ನಡೆಯುತ್ತಿರುವ ನಡುವೆಯೇ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಇಂದು ಚಂಪತ್ ರಾಯ್ ಅವರ ರಾಜೀನಾಮೆಯನ್ನು ಅಂಗೀಕರಿಸಿದೆ. ಅಯೋಧ್ಯೆಯ ಮಂದಿರದ ಆವರಣದಲ್ಲಿ ನಡೆದ ನಿರ್ಣಾಯಕ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಚಂಪತ್ ರಾಯ್ ಅವರ ಸ್ಥಾನಕ್ಕೆ ಬಜರಂಗ್ ಬಾಗ್ರ ಅವರನ್ನು ಟ್ರಸ್ಟ್ನ ನೂತನ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ರಾಮ ಮಂದಿರದ ದೇಣಿಗೆ ಹಣ ದುರುಪಯೋಗದ ಆರೋಪದ ತನಿಖೆ ಚುರುಕುಗೊಂಡ ಹಿನ್ನೆಲೆಯಲ್ಲಿ ಜೂನ್ 26ರಂದೇ ಚಂಪತ್ ರಾಯ್ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದರು. ಇದಕ್ಕೂ ಒಂದು ದಿನ ಮುಂಚಿತವಾಗಿ ಪೊಲೀಸರು ಚಂಪತ್ ರಾಯ್ ಅವರ ಚಾಲಕ ಟಿನ್ನು ಸೇರಿದಂತೆ 8 ಜನರನ್ನು ಬಂಧಿಸಿದ್ದರು. ಚಂಪತ್ ರಾಯ್ ಅವರೊಂದಿಗೆ ಟ್ರಸ್ಟ್ನ ಮತ್ತೊಬ್ಬ ಟ್ರಸ್ಟಿ ಅನಿಲ್ ಮಿಶ್ರಾ ಕೂಡ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಈ ಇಬ್ಬರು ನಾಯಕರ ಹೆಸರು ದೇಣಿಗೆ ಕಳ್ಳತನದ ವಿವಾದಕ್ಕೆ ಲಿಂಕ್ ಆಗಿದ್ದರೂ, ಇವರ ವಿರುದ್ಧ ಯಾವುದೇ ಕ್ರಿಮಿನಲ್ ಮೊಕದ್ದಮೆ ದಾಖಲಾಗಿಲ್ಲ.
ಮೂಲಗಳ ಪ್ರಕಾರ, ಈ ದೇಣಿಗೆ ಕಳ್ಳತನವು ಟ್ರಸ್ಟ್ನ ವಿಶ್ವಾಸಾರ್ಹತೆ, ರಾಮ ಭಕ್ತರ ಭಾವನೆಗಳು ಮತ್ತು ಸಾರ್ವಜನಿಕರ ನಂಬಿಕೆಗೆ ಧಕ್ಕೆ ತಂದಿದೆ ಎಂದು ಬಹುತೇಕ ಟ್ರಸ್ಟಿಗಳು ಸಭೆಯಲ್ಲಿ ಬೇಸರ ಹೊರಹಾಕಿದ್ದಾರೆ. ಈ ವಿವಾದದ ಸುತ್ತ ಹರಡಿರುವ ಗೊಂದಲ ಮತ್ತು ತಪ್ಪು ಮಾಹಿತಿಯ ಬಗ್ಗೆ ಸದಸ್ಯರು ಕಳವಳ ವ್ಯಕ್ತಪಡಿಸಿದ್ದು, ಇದು ದೇಶಾದ್ಯಂತ ತಪ್ಪು ಸಂದೇಶವನ್ನು ರವಾನಿಸುತ್ತಿದೆ ಎಂದು ಹೇಳಿದ್ದಾರೆ.
ರಾಮ ಮಂದಿರದ ದೇಣಿಗೆ ವಿವಾದದ ಬಗ್ಗೆ ದೇಶಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿದೆ. ಭಕ್ತರು ತಾವು ನೀಡಿದ್ದ ಹಣ ದುರುಪಯೋಗವಾಗಿರುವ ಬಗ್ಗೆ ಅಸಮಾಧಾನ ಹೊರಹಾಕುತ್ತಿದ್ದಾರೆ. ಈ ಪ್ರಕರಣದ ತನಿಖೆಗೆ ಎಸ್ಐಟಿಯನ್ನೂ ರಚನೆ ಮಾಡಲಾಗಿದೆ. ಈ ವಿವಾದದ ಬಳಿಕ ನಡೆದ ಇಂದಿನ ಸಭೆಯು 2020ರಲ್ಲಿ ಟ್ರಸ್ಟ್ ರಚನೆಯಾದ ನಂತರದ ಅತ್ಯಂತ ಮಹತ್ವದ ಸಭೆ ಎಂದು ಪರಿಗಣಿಸಲಾಗಿದೆ.
ಪ್ರಸ್ತುತ ಎಸ್ಐಟಿ ಮತ್ತು ಪೊಲೀಸರು ಈ ದೇಣಿಗೆ ಹಗರಣದ ತನಿಖೆ ನಡೆಸುತ್ತಿದ್ದಾರೆ. ತನಿಖೆಯ ಭಾಗವಾಗಿ ಚಂಪತ್ ರಾಯ್, ಅನಿಲ್ ಮಿಶ್ರಾ ಮತ್ತು ಗೋಪಾಲ್ ರಾವ್ ಅವರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆಯಾದರೂ, ಇವರ ವಿರುದ್ಧ ಯಾವುದೇ ಎಫ್ಐಆರ್ ದಾಖಲಾಗಿಲ್ಲ ಎಂಬುದು ಗಮನಾರ್ಹ ಸಂಗತಿ.
























