ಎಸ್ಎಸ್ಎಲ್ಸಿ ಓದುತ್ತಿದ್ದ ಅವರೆಲ್ಲಾ ಇದೀಗ ಓರ್ವ ಬಾಲಕನ ಭವಿಷ್ಯವನ್ನೇ ಮಣ್ಣುಪಾಲು ಮಾಡಿದ್ದಾರೆ. ಅದರೊಟ್ಟಿಗೆ ತಮ್ಮ ಭವಿಷ್ಯದ ಮೇಲೆ ತಾವೇ ಕಲ್ಲು ಹಾಕಿಕೊಂಡಿದ್ದಾರೆ. ಧಾರವಾಡ ಜಿಲ್ಲೆಯ ಕುಂದಗೋಳ ಪಟ್ಟಣದಲ್ಲಿ ಶಾಲಾ ಬಾಲಕರೇ SSLC ವಿದ್ಯಾರ್ಥಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದಾರೆ. ಎಸ್ಎಸ್ಎಲ್ಸಿ ಓದುತ್ತಿದ್ದ ಬಾಲಕನನ್ನು ಮೂವರು ಬಾಲಕರು ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಧಾರವಾಡ ಜಿಲ್ಲೆಯ ಕುಂದಗೋಳ ಪಟ್ಟಣದಲ್ಲಿ ಬುಧವಾರ ಸಂಜೆ ನಡೆದಿದೆ.
ಕುಂದಗೋಳ ಪಟ್ಟಣದ ನಿಂಗರಾಜ್ ಅವಾರಿ (16) ಕೊಲೆಯಾದ ಬಾಲಕ. ಕುಂದಗೋಳ ಪಟ್ಟಣದ ಅನುದಾನಿತ ಶಾಲೆಯಲ್ಲಿ ಎಸ್ಎಸ್ಎಲ್ಸಿ ಓದುತ್ತಿದ್ದ ಆತನನ್ನು ಅದೇ ಶಾಲೆಯ ಓರ್ವ ಬಾಲಕ ಸೇರಿದಂತೆ ಮೂವರು ಬಾಲಕರು ಸೇರಿ ಕೊಲೆ ಮಾಡಿದ್ದಾರೆ.
ಬಾಲಕನ ಕೊಲೆಗೆ ಕಾರಣವಾಗಿದ್ದು ಶಾಲೆಯಲ್ಲಿ ನಡೆದ ಕ್ಷುಲಕ ವಿಚಾರ ಎನ್ನಲಾಗಿದೆ. ನಿಂಗರಾಜ್ ಮತ್ತು ಆತನ ಕೆಲ ಸ್ನೇಹಿತರಿಗೆ ಎರಡು ದಿನದ ಹಿಂದೆ ಕ್ಷುಲ್ಲಕ ವಿಚಾರಕ್ಕೆ ಜಗಳವಾಗಿತ್ತು. ಇದನ್ನೇ ದೊಡ್ಡದಾಗಿ ಮಾಡಿದ ಆತನ ಸಹಪಾಠಿಯೋರ್ವ ಎಸ್ಎಸ್ಎಲ್ಸಿ ಡ್ರಾಪ್ ಔಟ್ ಆಗಿದ್ದ ಇನ್ನಿಬ್ಬರು ತನ್ನ ಸ್ನೇಹಿತರನ್ನು ಕರೆದುಕೊಂಡು ಬಂದು ಕೃತ್ಯ ಎಸಗಿದ್ದಾನೆ.
ಕೊಲೆ ಬಗ್ಗೆ ಮಾಹಿತಿ ಗೊತ್ತಾಗುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಕುಂದಗೋಳ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡುತ್ತಿದ್ದಾರೆ. ಮೂವರು ಬಾಲಕರನ್ನು ವಶಕ್ಕೆ ಪಡೆದಿರುವ ಪೊಲೀಸರು ಕೊಲೆಗೆ ಬೇರೆಯೇ ಕಾರಣಗಳಿವೆಯೇ ಎಂಬುದರ ಪತ್ತೆಗೆ ತನಿಖೆ ಮುಂದುವರಿಸಿದ್ದಾರೆ.


























