ಪುತ್ತೂರು: ನಿರಂತರ ವಿದ್ಯುತ್ ಕಡಿತ: ಮೆಸ್ಕಾಂ ಕಚೇರಿ ಮುಂದೆ ನೀಡಿದ ಸಂಜೀವ ಮಠಂದೂರು ಪುತ್ತೂರು ತಾಲೂಕಿನ ಕಳೆದ 15 ದಿನಗಳಿಂದ ಗ್ರಾಮೀಣ ಮತ್ತು ನಗರ ಭಾಗದಲ್ಲಿ ನಿರಂತರ ವಿದ್ಯುತ್ ಕಡಿತ ಆಗುತ್ತಿದೆ. ಮಳೆಗಾಲ ಆರಂಭ ಆಗುವ ಮುಂದೆಯೇ ಈ ರೀತಿ ಆದರೆ ಮುಂದೇನು. ಜನಸಾಮಾನ್ಯರು ತೊಂದರೆ ಅನುಭವಿಸುತ್ತಿದ್ದಾರೆ. ತಕ್ಷಣ ಸಮಸ್ಯೆಯನ್ನು ಬಗೆ ಹರಿಸಬೇಕೆಂದು ಆಗ್ರಹಿಸಿ ಪುತ್ತೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಸಂಜೀವ ಮಠಂದೂರು ಅವರ ನೇತೃತ್ವದಲ್ಲಿ ಪುತ್ತೂರು ಬಿಜೆಪಿಯ ಪ್ರಮುಖರು ಕಾರ್ಯಕರ್ತರು ಬನ್ನೂರು ಮೆಸ್ಕಾಂ ಕಚೇರಿಗೆ ತೆರಳಿ ಮನವಿ ಮಾಡಿದ್ದಲ್ಲದೆ ಮುಂದೆ ಪ್ರತಿಭಟನೆಯ ಎಚ್ಚರಿಕೆಯನ್ನೂ ನೀಡಿದ್ದಾರೆ.
ಮಾಜಿ ಶಾಸಕ ಸಂಜೀವ ಮಠಂದೂರು ಅವರು ಮೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರ ರಾಮಚಂದ್ರ ಎ ಅವರಲ್ಲಿ ಸಮಸ್ಯೆಯನ್ನು ಮುಂದಿಟ್ಟರು. ಮಳೆಗಾಲ ಆರಂಭ ಆಗುವ ಮುನ್ನವೇ ಪುತ್ತೂರು ತಾಲೂಕಿನ ಬಹುತೇಕ ಕಡೆ ವಿದ್ಯುತ್ ವಾರಗಟ್ಟಲೆ ಕಡಿತ ಆಗಿ ಜನ ಸಾಮಾನ್ಯರು ಕುಡಿಯುವ ನೀರಿಗೆ ಬವಣೆ ಪಡುವಂತೆ ಆಗಿದೆ. ಮಳೆಗಾಳದಲ್ಲಿ ಸಹಜವಾಗಿ ವಿದ್ಯುತ್ ಕಡಿತವಾಗುತ್ತದೆ. ಆದರೆ ಈ ಭಾರಿ ಗಾಳ, ಮಳೆ, ಸಿಡಿಲು ಇಲ್ಲದೇ ಇದ್ದರೂ ವಿದ್ಯುತ್ ಕಡಿತವಾಗಿದೆ. ಉಪ್ಪಿನಂಗಡಿಯಲ್ಲಿ, ಕಬಕದಲ್ಲಿ ವಿದ್ಯುತ್ ಕಡಿತದಿಂದ ಜನ ಆಕ್ರೋಶಗೊಂಡಿದ್ದಾರೆ.
ಪುತ್ತೂರಿನಲ್ಲಿ ಪವರ್ ಮ್ಯಾನ್ಗಳ ವರ್ಗಾವಣೆ ಮಾಡುತ್ತಿರುವ ಪರಿಣಾಮ ಇವತ್ತು ಪುತ್ತೂರಿನಲ್ಲಿ ಯಾವುದೇ ದುರಸ್ಥಿ ಕಾರ್ಯ ಆಗುತ್ತಿಲ್ಲ. ಮಳೆ ಬರುವ ಮುಂಚೆ ಗಿಡ ಮರಗಳ ರೆಂಬೆ, ಕೊಂಬೆ ತುಂಡರಿಸುವ ಕೆಲಸ ಆಗಿಲ್ಲ. ಅಪಾಯಕಾರಿ ಮರಗಳು ವಿದ್ಯುತ್ ಲೈನ್ಗೆ ಬೀಳುವ ಸಂಭವ ಇದ್ದರೂ ಅದನ್ನು ತೆರವು ಮಾಡಿಲ್ಲ. ಇದರ ಪರಿಣಾಮ ವಿದ್ಯುತ್ ಕಡಿತವಾಗುತ್ತಿದೆ. ಮತ್ತೊಂದು ಕಡೆ ಗುತ್ತಿಗೆಯನ್ನು ಯಾರೋ ಹೊರ ಜಿಲ್ಲೆಯವರಿಗೆ ಕೊಡುವುದರಿಂದ ಸ್ಥಳೀಯ ಗುತ್ತಿಗೆದಾರರು ಸಣ್ಣಪುಟ್ಟ ಕೆಲಸ ಮಾಡಲು ಮುಂದೆ ಬರುತ್ತಿಲ್ಲ. ಹಾಗಾಗಿ ತಕ್ಷಣ ಪವರ್ಮ್ಯಾನ್ಗಳ ನೇಮಕ, ಪರಿವರ್ತಕರಗಳ ದುರಸ್ತಿ, ವಿದ್ಯುತ್ ಲೈನ್ಗಳು ಹಾದು ಹೋದಲ್ಲಿ ಮರಗಳ ಕೊಂಬೆ ರೆಂಬೆ ಕತ್ತರಿಸುವ ಕೆಲಸ ಮತ್ತು 24/7 ಮೆಸ್ಕಾಂ ಸಹಾಯವಾಣಿ ಕೇಂದ್ರ ಮಾಡುವಂತೆ ಅವರು ಆಗ್ರಹಿಸಿದರು. ಒಂದು ವಾರದಲ್ಲಿ ವಿದ್ಯುತ್ ಸಮಸ್ಯೆ ಬಗೆಹರಿಸದೇ ಇದ್ದರೆ ಬಿಜೆಪಿಯಿಂದ ಉಗ್ರ ಹೋರಾಟವನ್ನು ಮೆಸ್ಕಾಂ ಕಚೇರಿ ಮುಂದೆ ಮಾಡಲಿದ್ದೇವೆ ಎಂದು ಎಚ್ಚರಿಸಿದರು.
ನಗರಸಭೆ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಗೌರಿ ಬನ್ನೂರು ಅವರು ಮಾತನಾಡಿ ಮೆಸ್ಕಾಂ ಸಹಾಯವಾಣಿ ಇದೆ. ಆ ನಂಬರ್ಗೆ ಕರೆ ಮಾಡಿದರೆ ಯಾವಾಗಲೂ ಎಂಗೇಜ್ ಬರುತ್ತದೆ. ಸರಿಯಾದ ಸಹಾಯವಾಣಿಯನ್ನು ಜನರಿಗೆ ಕರೆ ಮಾಡಲು ಮಾಹಿತಿ ನೀಡಿ ಎಂದರು.
ನಗರಸಭೆ ಮಾಜಿ ಅಧ್ಯಕ್ಷ ಕೆ.ಜೀವಂಧರ್ ಜೈನ್ ಅವರು ಮಾತನಾಡಿ ವಿದ್ಯುತ್ ಕಡಿತದಿಂದ ಪುತ್ತೂರು ನಗರಕ್ಕೆ ಬರುವ ಕುಡಿಯುವ ನೀರು ಸಬರಾಜಿಗೆ ಸಮಸ್ಯೆ ಆಗುತ್ತದೆ. ಜನರಿಗೆ ನೀರು ಬಾರದಿದ್ದರೆ ವಿದ್ಯುತ್ ಸಮಸ್ಯೆ ಗೊತ್ತಾಗುವುದಿಲ್ಲ. ಹಾಗಾಗಿ ವಿದ್ಯುತ್ ಸಮಸ್ಯೆಯನ್ನು ತಕ್ಷಣ ಬಗೆಹರಿಸುವಂತೆ ಆಗ್ರಹಿಸಿದರು. ಈ ಸಂದರ್ಭ ನಗರಸಭೆ ನಿಕಟಪೂರ್ವ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ, ನಿಕಟಪೂರ್ವ ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು, ಬಿಜೆಪಿ ನಗರ ಮಂಡಲದ ಅಧ್ಯಕ್ಷ ಶಿವಕುಮಾರ್, ಪ್ರಧಾನ ಕಾರ್ಯದರ್ಶಿಗಳಾದ ಯೋಗೀಶ್ ಬಾಳಿಗ, ಗ್ರಾಮಾಂತರ ಮಂಡಲದ ಉಪಾಧ್ಯಕ್ಷ ಹರಿಪ್ರಸಾದ್ ಯಾದವ್, ಲೋಕೇಶ್ ಹೆಗ್ಡೆ, ಬಿಜೆಪಿ ಮಂಡಲದ ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ರಾಜೇಶ್ ಬನ್ನೂರು, ವಿಶ್ವನಾಥ ಗೌಡ ಬನ್ನೂರು, ಸತೀಶ್ ನಾಕ್, ವಿದ್ಯಾಧರ್ ಜೈನ್, ನಗರಸಭೆ ಮಾಜಿ ಸದಸ್ಯೆ ಮೋಹಿನಿ ವಿಶ್ವನಾಥ ಗೌಡ, ಮಹೇಶ್ ಕೆರಿ, ನಿತೀಶ್ ಕುಮಾರ್ ಶಾಂತಿವನ, ನಿತಿನ್ ಕಲ್ಲೇಗ, ನಿರಂಜನ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.
ಪುತ್ತೂರು ಮೆಸ್ಕಾಂ ಉಪವಿಭಾಗಕ್ಕೆ ಸಂಬಂಧಿಸಿ 393 ಪವರ್ಮ್ಯಾನ್ಗಳು ಬೇಕಾಗಿತ್ತು. ಆದರೆ 294 ವರ್ಕಿಂಗ್ನಲ್ಲಿದ್ದಾರೆ. ಹಾಗೆಂದು ಹೊರಗುತ್ತಿಗೆಯಿಂದ ಜನರನ್ನು ಪಡೆದರೆ ಅವರನ್ನು ಕಂಬ ಹತ್ತಿಸಲು ಆಗುವುದಿಲ್ಲ. ಅವರನ್ನು ಸಹಾಯಕರಾಗಿ ಪಡೆಯಬಹುದು. ನಿನ್ನೆ ಉಪ್ಪಿನಂಗಡಿಯಲ್ಲಿ 30 ರಿಂದ 40 ವಿದ್ಯುತ್ ಕಂಬ ತುಂಡಾಗಿದೆ. ಮೊನ್ನೆ ಪುತ್ತೂರು ಪೇಟೆಯಲ್ಲೇ ಕಂಬಗಳು ತುಂಡಾಗಿತ್ತು. ಕಬಕದಲ್ಲಿ ರಾತ್ರಿ ವಿದ್ಯುತ್ ಕಂಬ ತುಂಡಾಗಿತ್ತು. ಆದರೂ ರಾತ್ರಿಯೇ ವಿದ್ಯುತ್ ಸಮಸ್ಯೆಗೆ ಪರಿಹಾರ ನೀಡಿದ್ದೇವೆ. ಈ ನಡುವೆ ಜೊತೆಗೆ ಸುಮಾರು 40 ಮಂದಿ ಪವರ್ಮ್ಯಾನ್ಗಳಿಗೆ ವರ್ಗಾವಣೆ ಆದೇಶ ಅಗಿದೆ. ಆದರೂ ಅವರನ್ನು ನಾವು ಇಲ್ಲಿಗೆ ಬೇರೆ ಬದಲಿ ಜನ ಬಾರದೆ ರೀಲಿವ್ ಮಾಡಿಲ್ಲ. ಪ್ರತಿ ವರ್ಷದಂತೆ ಎಪ್ರಿಲ್ ಆರಂಭದಲ್ಲೇ 58 ಜನ ಬ್ಯಾಚ್ ಮಾಡಿ ಎಲ್ಲಾ ಸೆಕ್ಷನ್ಗಳಿಗೂ ತೆಗೆದು ಕೊಂಡಿದ್ದೇವೆ. ಈಗಾಗಲೇ ನಮ್ಮಲ್ಲಿ 8 ವಾಹನ 24/7 ಕಾರ್ಯ ನಿರ್ವಹಿಸುತ್ತಿದೆ.
























