ನವದೆಹಲಿ, ಜುಲೈ 25: ದೆಹಲಿಯ ಜಂತರ್ ಮಂತರ್ನಲ್ಲಿ ‘ಕಾಕ್ರೋಚ್ ಜನತಾ ಪಾರ್ಟಿ’ ನಡೆಸಿದ ಬೃಹತ್ ಪ್ರತಿಭಟನೆಗಳ ಬೆನ್ನಲ್ಲೇ ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ವಿವಾದಕ್ಕೆ ಸಂಬಂಧಿಸಿದಂತೆ ಧರ್ಮೇಂದ್ರ ಪ್ರಧಾನ್ ಇಂದು ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಶುಕ್ರವಾರ ಕೇಂದ್ರ ಸಚಿವರಾದ ಜೆಪಿ ನಡ್ಡಾ ಮತ್ತು ಜಿತೇಂದ್ರ ಸಿಂಗ್ ಅವರನ್ನು ಭೇಟಿಯಾಗಿದ್ದ ಸಿಜೆಪಿ ವಕ್ತಾರರು ತಮ್ಮ 3 ಬೇಡಿಕೆಗಳನ್ನು ಸಲ್ಲಿಸಿದ್ದರು. ಅದರಲ್ಲಿ ಧರ್ಮೇಂದ್ರ ಪ್ರಧಾನ್ ರಾಜೀನಾಮೆಯೇ ಮೊದಲ ಮತ್ತು ಮುಖ್ಯವಾದ ಬೇಡಿಕೆಯಾಗಿತ್ತು. ಸಂಧಾನ ಮಾತುಕತೆಯ ವೇಳೆ ಉಳಿದ ಎರಡು ಬೇಡಿಕೆಗಳಿಗೆ ಕೂಡಲೇ ಒಪ್ಪಿಗೆ ಸೂಚಿಸಿದ್ದ ಕೇಂದ್ರ ಸಚಿವರು ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕುರಿತು ನಿರ್ಧಾರ ತೆಗೆದುಕೊಳ್ಳಲು ಇಂದು (ಶನಿವಾರ) ಮಧ್ಯಾಹ್ನದವರೆಗೆ ಸಮಯ ಕೋರಿದ್ದರು.
ಇದೀಗ ಕೊನೆಗೂ ಸಿಜೆಪಿ ಹಾಗೂ ಪ್ರತಿಭಟನಾಕಾರರ ಬೇಡಿಕೆಗೆ ಮಣಿದಿರುವ ಕೇಂದ್ರ ಸರ್ಕಾರ ಧರ್ಮೇಂದ್ರ ಪ್ರಧಾನ್ ಅವರಿಂದ ರಾಜೀನಾಮೆ ಪಡೆದಿದೆ. ಅಲ್ಲಿಗೆ, ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿಸಿ ಪ್ರತಿಭಟನೆ ಮಾಡುತ್ತಿರುವವರ ಎಲ್ಲ ಬೇಡಿಕೆಗಳೂ ಈಡೇರಿದಂತಾಗಿದೆ.
ಧರ್ಮೇಂದ್ರ ಪ್ರಧಾನ್ ಕೇಂದ್ರ ಸಚಿವ ಮಂಡಳಿಗೆ ರಾಜೀನಾಮೆ ನೀಡಿದರು, ಇದನ್ನು ಸಿಜೆಪಿ ವಕ್ತಾರ ಅಶುತೋಷ್ ರಾಂಕಾ “ಸಾಮಾನ್ಯ ಜನರಿಗೆ ಗೆಲುವು” ಎಂದು ಹೇಳಿದ್ದಾರೆ. ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ, ಆತ್ಮಹತ್ಯೆಯಿಂದ ಸಾವನ್ನಪ್ಪಿದ ನೀಟ್ ಆಕಾಂಕ್ಷಿಗಳ ಕುಟುಂಬಗಳಿಗೆ ರೂ. 1 ಕೋಟಿ ಪರಿಹಾರ ಮತ್ತು ಪ್ರತಿಭಟನಾಕಾರರ ವಿರುದ್ಧದ ಎಫ್ಐಆರ್ಗಳನ್ನು ಹಿಂಪಡೆಯುವುದು ಸಿಜೆಪಿಯ ಮೂರು ಬೇಡಿಕೆಗಳಲ್ಲಿ ಸೇರಿವೆ.
ಕೊನೆಗೂ ಸರ್ಕಾರ ತಲೆಬಾಗಿದೆ ಎಂದ ಪ್ರಿಯಾಂಕಾ ಗಾಂಧಿ:
“ಇದು ಭಾರತದ ಯುವಜನತೆಗೆ ಸಿಕ್ಕ ಗೆಲುವು ಎಂದು ನಾನು ನಂಬುತ್ತೇನೆ, ಮತ್ತು ತಮ್ಮ ಹಕ್ಕುಗಳಿಗಾಗಿ ಹಠಕ್ಕೆ ಬಿದ್ದು ನಿಂತ ಪ್ರತಿಯೊಬ್ಬ ಯುವಕ-ಯುವತಿಯರ ಬಗ್ಗೆ ನನಗೆ ಹೆಮ್ಮೆಯಿದೆ. ಮಹಾತ್ಮ ಗಾಂಧೀಜಿಯವರು ನಮಗೆ ಕಲಿಸಿದ ಹಾದಿಯಲ್ಲೇ ಅವರು ಇದನ್ನು ಮಾಡಿದರು. ಅವರು ಇದನ್ನು ಸಂಪೂರ್ಣ ಅಹಿಂಸಾತ್ಮಕವಾಗಿಯೇ ಮಾಡಿದರು. ಅವರ ಮೇಲೆ ಪೆಲೆಟ್ ಗನ್ಗಳನ್ನು ಹಾರಿಸಲಾಯಿತು, ಅಶ್ರುವಾಯು ಬಳಸಲಾಯಿತು, ಲಾಠಿಗಳಿಂದ ಹೊಡೆಯಲಾಯಿತು. ಅವರಿಗೆ ಗಂಭೀರ ಗಾಯಗಳಾದವು. ಆದರೆ ಅವರು ಎಂದಿಗೂ ತಲೆಬಾಗಲಿಲ್ಲ. ಕೊನೆಗೆ ಮೋದಿ ಸರ್ಕಾರವೇ ಅವರ ಬೇಡಿಕೆಗೆ ತಲೆಬಾಗಬೇಕಾಯಿತು” ಎಂದು ಪ್ರಿಯಾಂಕಾ ಗಾಂಧಿ ಮೆಚ್ಚುಗೆ ಸೂಚಿಸಿದ್ದಾರೆ.
ಪ್ರಜಾಪ್ರಭುತ್ವದ ಗೆಲುವು- ಅರವಿಂದ್ ಕೇಜ್ರಿವಾಲ್:
“ನಿಮ್ಮೆಲ್ಲರಿಗೂ ಅಭಿನಂದನೆಗಳು. ನಮ್ಮ ದೇಶದ ಯುವಜನತೆಗೆ ಅಭಿನಂದನೆಗಳು. ನಿಮ್ಮ ಹೋರಾಟಕ್ಕೆ ಕೊನೆಗೂ ಫಲ ಸಿಕ್ಕಿರುವುದು ಅತ್ಯಂತ ಸಂತೋಷದ ವಿಷಯ. ಧರ್ಮೇಂದ್ರ ಪ್ರಧಾನ್ ಕೊನೆಗೂ ರಾಜೀನಾಮೆ ನೀಡಬೇಕಾಯಿತು. ಇದು ನಮ್ಮ ಪ್ರಜಾಪ್ರಭುತ್ವಕ್ಕೆ ಸಿಕ್ಕ ಬೃಹತ್ ಗೆಲುವು. ನಮ್ಮ ದೇಶದ ಜನರಿಗೆ ಪ್ರಜಾಪ್ರಭುತ್ವದ ಮೇಲಿದ್ದ ನಂಬಿಕೆಯೇ ಕುಸಿಯಲು ತೊಡಗಿತ್ತು. ಸರ್ಕಾರಗಳು ಜನರ ಧ್ವನಿಗೆ ಕಿವಿಗೊಡುವುದಿಲ್ಲ ಎಂದೇ ಅವರು ಭಾವಿಸಿದ್ದರು. ಜನರು ಸರ್ಕಾರದ ಮುಂದೆ ಕೈಮುಗಿದು ಮನವಿ ಮಾಡುತ್ತಿದ್ದರು, ಧ್ವನಿ ಎತ್ತುತ್ತಿದ್ದರು, ಆದರೂ ಸರ್ಕಾರ ಎಂದಿಗೂ ಆಲಿಸುತ್ತಿರಲಿಲ್ಲ. ಈಗ ಕೊನೆಗೂ ಸರ್ಕಾರ ಮಣಿಯಬೇಕಾಯಿತು” ಎಂದು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಎಎಪಿ ನಾಯಕ ಮನೀಶ್ ಸಿಸೋಡಿಯಾ ಹೇಳಿದ್ದೇನು?:
“ಧರ್ಮೇಂದ್ರ ಪ್ರಧಾನ್ ಅವರು ಸ್ವಯಂಪ್ರೇರಿತವಾಗಿ ರಾಜೀನಾಮೆ ಸಲ್ಲಿಸಿಲ್ಲ. ದೇಶದ ಮಕ್ಕಳು, ದೇಶದ ವಿದ್ಯಾರ್ಥಿಗಳು ಧರ್ಮೇಂದ್ರ ಪ್ರಧಾನ್ ಅವರಿಂದ ರಾಜೀನಾಮೆ ಪಡೆಯುವಂತೆ ಮಾಡಿದ್ದಾರೆ. ಇದು ನಿಜಕ್ಕೂ ಸ್ವಯಂಪ್ರೇರಿತ ರಾಜೀನಾಮೆಯಾಗಿದ್ದರೆ, ನೀಟ್ ಪೇಪರ್ ಲೀಕ್ ಸಂಭವಿಸಿದ ತಕ್ಷಣವೇ ನಡೆಯಬೇಕಿತ್ತು. ದೇಶಕ್ಕೆ ಈಗ ಬೃಹತ್ ಶಿಕ್ಷಣ ಕ್ರಾಂತಿಯ ಅಗತ್ಯವಿದೆ” ಎಂದು ಆಮ್ ಆದ್ಮಿ ಪಕ್ಷದ ನಾಯಕ ಮನೀಶ್ ಸಿಸೋಡಿಯಾ ಹೇಳಿದ್ದಾರೆ.
ಕಾಂಗ್ರೆಸ್ ಸಂಸದ ದೀಪೇಂದರ್ ಹೂಡಾ ಹೇಳಿಕೆ:
“ಇದು ದೇಶದ ಯುವಶಕ್ತಿ ಮತ್ತು ವಿದ್ಯಾರ್ಥಿ ಚಳವಳಿಗೆ ಸಿಕ್ಕ ಮೊದಲ ಜಯ. ದೇಶದ ಎಲ್ಲಾ ವಿದ್ಯಾರ್ಥಿಗಳು ಹಾಗೂ ಯುವಜನತೆಗೆ ಕೋಟಿ ಕೋಟಿ ಅಭಿನಂದನೆಗಳು. ಇದು ಮೊದಲ ಜಯ, ಮೊದಲ ಹೆಜ್ಜೆ. ಬಿಜೆಪಿ ಸರ್ಕಾರದ ಅಹಂಕಾರ ಖಂಡಿತವಾಗಿಯೂ ಮುರಿದುಬಿದ್ದಿದೆ. ಆದರೆ ಅದು ಸಂಪೂರ್ಣವಾಗಿ ಶಮನವಾಗುವವರೆಗೆ ಮತ್ತು ಶಿಕ್ಷಣ ಹಾಗೂ ಪರೀಕ್ಷಾ ವ್ಯವಸ್ಥೆಯಲ್ಲಿ ಸಂಪೂರ್ಣ ಸುಧಾರಣೆಯಾಗುವವರೆಗೆ, ನಾವು ಈ ಹೋರಾಟವನ್ನು ಮುಂದುವರಿಸುತ್ತೇವೆ…” ಎಂದು ಕಾಂಗ್ರೆಸ್ ಸಂಸದ ದೀಪೇಂದರ್ ಹೂಡಾ ಹೇಳಿದ್ದಾರೆ.
























