ಪುತ್ತೂರು ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ದೇವರಿಗೆ ವಿರುದ್ಧವಾದ ವ್ಯವಸ್ಥೆಗಳು ನಡೆಯುತ್ತಿದ್ದು, ಇವುಗಳ ಬಗ್ಗೆ ಚರ್ಚೆ ನಡೆಸಲು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಕೂಡಲೇ ಭಕ್ತರ ಸಭೆ ನಡೆಸಬೇಕು ಎಂದು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ ಸಂರಕ್ಷಣಾ ಸಮಿತಿ ಆಗ್ರಹಿಸಿದೆ.
ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿ ಉದ್ಧೇಶಿಸಿ ಮಾತನಾಡಿದ ಸಂರಕ್ಷಣಾ ಸಮಿತಿ ಮುಖಂಡ ಹರಿಪ್ರಸಾದ್ ಶೆಟ್ಟಿ ನೆಲ್ಲಿಕಟ್ಟೆ ಕ್ಷೇತ್ರದಲ್ಲಿ ಈ ಹಿಂದೆ ನಡೆದ ಅಷ್ಟಮಂಗಲ ಪ್ರಶ್ನೆಯಂತೆ ಅಯ್ಯಪ್ಪ ಸ್ವಾಮಿ ಗುಡಿ,ನಾಗನ ಗುಡಿ ಎಲ್ಲವನ್ನೂ ತೆರವುಗೊಳಿಸಲಾಗಿದೆ. ಆದರೆ ಈವರೆಗೂ ಅಯ್ಯಪ್ಪ ಗುಡಿಯ ಮೂರ್ತಿಯನ್ನು ಶಾರದಾ ಭಜನಾ ಮಂದಿರದ ಒಳಗಡೆ ಇಡಲಾಗಿದೆ. ಅಯ್ಯಪ್ಪನ ವಿಗ್ರಹಕ್ಕೆ ಸಲ್ಲಬೇಕಾದ ಪೂಜೆಯೂ ನಡೆಯುತ್ತಿಲ್ಲ. ನವಗ್ರಹ ವಿಗ್ರಹಗಳನ್ನು ಸರಿಯಾದ ವಾಸ್ತು ಪ್ರಕಾರ ಪ್ರತಿಷ್ಠಾಪಿಸಿಲ್ಲ. ಈವರಗೆ ಕ್ಷೇತ್ರದಲ್ಲಿ ನಡೆದ ಅಷ್ಟಮಂಗಲ ಪ್ರಶ್ನೆಗಳಲ್ಲಿ ಒಬ್ಬೊಬ್ಬ ಒಂದೊಂದು ರೀತಿಯ ವಿಚಾರಗಳನ್ನು ಹೇಳುತ್ತಿರುವುದು ಭಕ್ತರ ಗೊಂದಲಕ್ಕೆ ಕಾರಣವಾಗಿದೆ. ಒಮ್ಮೆ ರಕ್ತೇಶ್ವರಿ ದೇವಿಯನ್ನು ದೇವಸ್ಥಾನದ ಒಳಗೆ ತಂದರೆ, ಇನ್ನೊಮ್ಮೆ ದೇವಸ್ಥಾನದ ಹೊರಗೆ ಈ ನ. ಒಂದು ಅಷ್ಟಮಂಗಲ ಪ್ರಶ್ನೆಯಲ್ಲಿ ಸಭಾಂಗಣ ತೆರವುಗೊಳಿಸಲು ಸೂಚಿಸಿದರೆ, ಇನ್ನೊಂದು ಅಷ್ಟಮಂಗಲದಲ್ಲಿ ಸಭಾಂಗಣ ತೆರವು ಅಗತ್ಯವಿಲ್ಲ ಎನ್ನೋದು ಕಂಡು ಬರುತ್ತಿದೆ. ದೇವಸ್ಥಾನದ ಪುಷ್ಕರಿಣಿ ಕೆಲಸ ಇನ್ನೂ ಮುಕ್ತಾಯವಾಗಿಲ್ಲ. ಈ ನಡುವೆ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯಕ್ಕೆ ಕೈ ಹಾಕಲಾಗಿದ್ದು, ಈ ಕಾರ್ಯದ ಮೊದಲು ಭಕ್ತರ ಸಭೆ ಕರೆಯಬೇಕೆಂದು ಅವರು ಒತ್ತಾಯಿಸಿದರು. ಅಲ್ಲದೆ ಈ ಬಾರಿಯ ಅಷ್ಟಮಂಗಲ ಪ್ರಶ್ನೆಯನ್ನು ಬ್ರಾಹ್ಮಣೇತರ ಪಂಡಿತರಿಗೆ ನಡೆಸಬೇಕು ಎಂದೂ ಅವರು ಇದೇ ಸಂದರ್ಭದಲ್ಲಿ ಆಗ್ರಹಿಸಿದರು.

























