ನವದೆಹಲಿ: 27 ವರ್ಷಗಳ ವನವಾಸದ ನಂತರ ದೆಹಲಿಯಲ್ಲಿ ಬಿಜೆಪಿ ಪುನರಾಗಮನದ ಹಾದಿಯಲ್ಲಿದೆ. 1 ದಶಕದ ಸುದೀರ್ಘ ಆಳ್ವಿಕೆಯ ನಂತರ ಆಮ್ ಆದ್ಮಿ ಪಕ್ಷ (ಎಎಪಿ)ವನ್ನು ಅಧಿಕಾರದಿಂದ ಕೆಳಗಿಸಿದ ಬಿಜೆಪಿ ಆಪ್ ನಾಯಕರಾದ ಅರವಿಂದ್ ಕೇಜ್ರಿವಾಲ್ ಮತ್ತು ಮನೀಶ್ ಸಿಸೋಡಿಯಾ ಅವರನ್ನು ಸೋಲಿಸಿತು. ಆಮ್ ಆದ್ಮಿ ಪಕ್ಷದ ನಾಯಕರ ಪೈಕಿ ಸಿಎಂ ಅತಿಶಿ ಒಬ್ಬರೇ ಗೆಲುವು ಸಾಧಿಸುವ ಮೂಲಕ ಪಕ್ಷದ ಮರ್ಯಾದೆ ಉಳಿಸಿದ ನಾಯಕಿ. ಈಗಾಗಲೇ ಹಲವಾರು ಸುತ್ತಿನ ಎಣಿಕೆ ಮುಗಿದಿದ್ದು, ಬಿಜೆಪಿ 2 ಸ್ಥಾನಗಳನ್ನು ಗೆದ್ದಿದೆ ಮತ್ತು 70 ಸ್ಥಾನಗಳ ಪೈಕಿ 45 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. 2020ರ ವಿಧಾನಸಭಾ ಚುನಾವಣೆಯಲ್ಲಿ ಒಂದಂಕಿ ಸ್ಥಾನಗಳನ್ನು ಪಡೆದಿದ್ದ ಬಿಜೆಪಿ ಈ ಬಾರಿ ಭರ್ಜರಿ ಯಶಸ್ಸಿನ ಮೂಲಕ ಪುನರಾಗಮನ ಮಾಡಿದೆ.
ಇಂದು ಮುಂಜಾನೆಯಿಂದ ದೆಹಲಿಯ 11 ಜಿಲ್ಲೆಗಳ 19 ಎಣಿಕೆ ಕೇಂದ್ರಗಳಲ್ಲಿ ದೆಹಲಿ ವಿಧಾನಸಭಾ ಚುನಾವಣೆಯ ಮತ ಎಣಿಕೆ ನಡೆಯುತ್ತಿದೆ. 699 ಅಭ್ಯರ್ಥಿಗಳನ್ನು ಹೊಂದಿರುವ 70 ಸದಸ್ಯರ ದೆಹಲಿ ವಿಧಾನಸಭೆಗೆ ಫೆಬ್ರವರಿ 5ರಂದು ಬೆಳಿಗ್ಗೆ 7ರಿಂದ ಸಂಜೆ 6 ರವರೆಗೆ ಮತದಾನ ನಡೆಯಿತು. ಫೆಬ್ರವರಿ 5ರಂದು ನಡೆದ ಚುನಾವಣೆಯಲ್ಲಿ ಶೇ. 60.54 ರಷ್ಟು ಮತದಾನ ದಾಖಲಾಗಿದೆ ಎಂದು ಭಾರತೀಯ ಚುನಾವಣಾ ಆಯೋಗ ತಿಳಿಸಿದೆ.
ಕಳೆದ 2 ವಿಧಾನಸಭಾ ಚುನಾವಣೆಗಳಲ್ಲಿ ಬಹುತೇಕ ಭರ್ಜರಿ ಗೆಲುವು ಸಾಧಿಸಿದ್ದ ಎಎಪಿ 2 ಸ್ಥಾನಗಳಲ್ಲಿ ಜಯ ಸಾಧಿಸಿದ್ದರೂ 21 ಸ್ಥಾನಗಳಲ್ಲಿ ಹಿಂದುಳಿದಿದೆ. ಒಂದೇ ಒಂದು ಸ್ಥಾನದಲ್ಲಿಯೂ ಮುನ್ನಡೆ ಸಾಧಿಸುವಲ್ಲಿ ವಿಫಲವಾದ ಕಾಂಗ್ರೆಸ್ ಸತತ ಮೂರನೇ ಬಾರಿಗೆ ಶೂನ್ಯ ಸ್ಥಾನ ಪಡೆಯುವ ಮೂಲಕ ದಾಖಲೆ ನಿರ್ಮಿಸುವ ಲಕ್ಷಣಗಳು ಕಾಣುತ್ತಿವೆ.