ಪುತ್ತೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವಮಾರು ಗದ್ದೆಯಲ್ಲಿ 33 ನೇ ವರ್ಷದ ಕೋಟಿ ಚೆನ್ನಯ್ಯ ಜೋಡುಕೆರೆ ಕಂಬಳವು ಜನವರಿ 24 ರಿಂದ ಪ್ರಾರಂಭಗೊಂಡು 25 ರವರೆಗೆ ನಡೆಯಲಿದ್ದು, ಹತ್ತೂರ ಜನ ಮಂದಿ ಸೇರುವ ಇತಿಹಾಸ ಪ್ರಸಿದ್ಧ ಪುತ್ತೂರು ಕಂಬಳ ಈ ಕಾರ್ಯಕ್ರಮದಲ್ಲಿ ಲಕ್ಷಾಂತರ ಮಂದಿ ಸೇರುವ ನಿರೀಕ್ಷೆ ಇದೆ.
ಪುತ್ತೂರು ನಗರ ಠಾಣಾ ಸರಹದ್ದು ಮತೀಯವಾಗಿ ಅತೀ ಸೂಕ್ಷ್ಮ ಪ್ರದೇಶವಾಗಿರುವುದರಿಂದ ಸಾರ್ವಜನಿಕ ಶಾಂತಿ ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ, ಪುತ್ತೂರು ನಗರ ಠಾಣೆಯಲ್ಲಿ ಜನ ಸೇರಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗಿರುವುದಾಗಿ ಹಾಗೂ ಕಂಬಳ ನಡೆಯುವ ಸಮಯದಲ್ಲಿ ಕಿಡಿಗೇಡಿಗಳು ಅಮಲು ಪದಾರ್ಥ ಸೇವಿಸಿಕೊಂಡು ಕಿರುಕುಳ ಉಂಟುಮಾಡುವುದನ್ನು ತಪ್ಪಿಸಲು ಪುತ್ತೂರು ನಗರದಲ್ಲಿರುವ ಎಲ್ಲಾ ಬಾರ್ ಮತ್ತು ವೈನ್ಶಾಪ್, ಮದ್ಯ ಅಂಗಡಿಗಳನ್ನು ಜನವರಿ 24 ರಂದು ಬೆಳಿಗ್ಗೆ 6 ಗಂಟೆಯಿಂದ 25 ರ ರಾತ್ರಿ 12 ಗಂಟೆಯವರೆಗೆ ಮುಚ್ಚಲು ಹಾಗೂ ಅಮಲು ಪದಾರ್ಥಗಳನ್ನು ಮಾರಾಟ ಮಾಡದಂತೆ ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ ಆದೇಶಿಸಿದ್ದಾರೆ.


























