ನಾನು ಸಿಎಂ ಆಗಿದ್ದಕ್ಕೆ ಕೆಲವರಿಗೆ ನಿದ್ದೆಯೇ ಬರುತ್ತಿಲ್ಲ, ನನ್ನನ್ನು ಜೈಲಿಗೆ ಕಳುಹಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಸಿಎಂ ಡಿ ಕೆ ಶಿವಕುಮಾರ್ ಇಂದು ಬೆಂಗಳೂರಿನ ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ವ್ಯಂಗ್ಯಭರಿತವಾಗಿ ಆರೋಪಿಸಿದ್ದಾರೆ.
ಬಿಡದಿ ಟೌನ್ ಶಿಪ್ ವಿಚಾರವಾಗಿ ವಸ್ತುನಿಷ್ಠ ವಿಚಾರವನ್ನು ಜನತೆಯ ಮುಂದೆ ತಿಳಿಸಬೇಕೆಂದು ಇಂದು ಸುದ್ದಿಗೋಷ್ಠಿ ಕರೆದಿದ್ದೇನೆ ಎಂದು ಹೇಳಿದ ಅವರು ನಾನು ರೈತನ ಮಗ, ವ್ಯವಸಾಯ ಮಾಡದಿದ್ದರೂ ಹುಟ್ಟಿನಿಂದ ಬೇಸಾಯಗಾರನ ಮಗ, ನನಗೆ ರೈತರ ಕಷ್ಟದ ಬಗ್ಗೆ ಅನುಭವವಿದೆ. ಹುಟ್ಟುತ್ತಲೇ ನಾನು ಕೃಷಿಕನ ಮಗ, ಹೀಗಿರುವಾಗ ನಾನು ರೈತರ ವಿರುದ್ಧ ನಿರ್ಧಾರ ತೆಗೆದುಕೊಳ್ಳುತ್ತೇನೆಯೇ, ಬಿಡದಿ ಟೌನ್ ಶಿಪ್ ಯೋಜನೆಯ ಪಿತಾಮಹ ನಾನಲ್ಲ ಎಂದರು.
ಡಿ ಕೆ ಶಿವಕುಮಾರ್ ಅವರು ಜೈಲಿಗೆ ಹೋಗುವ ದಿನ ಸನ್ನಿಹಿತವಾಗಿದೆ ಎಂದು ಹೆಚ್ ಡಿ ಕುಮಾರಸ್ವಾಮಿಯವರು ಮಾಧ್ಯಮಗಳ ಮುಂದೆ ಹೇಳಿದ್ದನ್ನು ನೋಡಿದ್ದೇನೆ, ನನಗೇನು ಜೈಲು ಅನುಭವ ಹೊಸದಲ್ಲ, ಅವರ ಇಚ್ಛೆಯಂತೆ ಆಗುವುದಾದರೆ ಆಗಲಿ, ನನ್ನನ್ನು ಜೈಲಿಗೆ ಕಳುಹಿಸಲು ಏನೇನು ಕುತಂತ್ರ ಮಾಡಿದರು ಎಂಬುದನ್ನೆಲ್ಲ ಮುಂದೆ ಹೇಳುತ್ತೇನೆ ಎಂದರು.
ಈ ಇಳಿ ವಯಸ್ಸಿನಲ್ಲಿ ದೇವೇಗೌಡರು ವಿಧಾನಸೌಧ ಮುಂದೆ ಬಂದು ಧರಣಿ ನಡೆಸುವ ಅಗತ್ಯವಿಲ್ಲ. ಬಿಡದಿ ಸುತ್ತಮುತ್ತ ರೈತ ಮಹಿಳೆಯರು ತಾಯಂದಿರು ನಮ್ಮ ಅಧಿಕಾರಿಗಳಿಗೆ ಪೊರಕೆಯಿಂದ ಹೊಡೆಯುವ ಅಗತ್ಯವಿಲ್ಲ, ನನಗೆ ಬೇಕಾದರೆ ಹೊಡೆಯಲಿ, ಸಹಿಸಿಕೊಳ್ಳುತ್ತೇನೆ, ಬಲವಂತವಾಗಿ ರೈತರ ಜಮೀನನ್ನು ಕಿತ್ತುಕೊಳ್ಳುವುದಿಲ್ಲ ಎಂದರು.
ರೈತರ ಮನವೊಲಿಸಲು ಪ್ರಯತ್ನಿಸಿದ್ದೇವೆ, ಇಚ್ಛೆಯುಳ್ಳವರು ಅವರ ಜಮೀನಿಗೆ ನ್ಯಾಯಬದ್ಧ ಬೆಲೆ ನೀಡಿ ಸರ್ಕಾರ ಜಮೀನು ತೆಗೆದುಕೊಳ್ಳುತ್ತಿಲ್ಲ, ಇಚ್ಛೆಯಿಲ್ಲದವರು ಖಂಡಿತಾ ಜಮೀನು ನೀಡುವುದು ಬೇಡ ಎಂದರು.
























