ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ರಾಜಾಂಗಣದ ಮೂಲಕ ದೇವಳದ ಅನುಮತಿ ಇಲ್ಲದೆ ಅನ್ಯಮತೀಯರ ಕಟ್ಟಡಕ್ಕೆ ಮಣ್ಣು ಸಾಗಾಟ ಮಾಡಲಾಗಿದೆ ಎಂದು ಆರೋಪಿಸಿ ಭಕ್ತರ ಗುಂಪೊಂದು ಆ.13ರ ರಾತ್ರಿ ದೇವಸ್ಥಾನದ ವಠಾರದಲ್ಲಿ ಜಮಾಯಿಸಿ ಆಕ್ಷೇಪ ವ್ಯಕ್ತಪಡಿಸಿದ ಘಟನೆ ನಡೆದಿದೆ.
ದೇವಸ್ಥಾನದ ಹೊರಾಂಗಣದಲ್ಲಿ ಶ್ರೀ ಅಯ್ಯಪ್ಪ ಗುಡಿಗೆಂದು ಕಾಯ್ದಿರಿಸಲಾಗಿರುವ ಸ್ಥಳದ ಸಮೀಪದಲ್ಲಿರುವ ಉದ್ಯಮದ ಕಟ್ಟಡದ ಕಾಮಗಾರಿಗಾಗಿ ಪಿಕಪ್ ವಾಹನದಲ್ಲಿ ಮಣ್ಣು ಸಾಗಿಸಲಾಗುತ್ತಿತ್ತು ಎನ್ನಲಾಗಿದೆ. ದೇವಳದ ರಾಜಾಂಗಣದ ಮೂಲಕ ಪಿಕಪ್ ಸಂಚರಿಸಿರುವುದು ಭಕ್ತರ ಗಮನಕ್ಕೆ ಬಂದಿದ್ದು, ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.
ದೇವಳದ ವಠಾರದಲ್ಲಿ ರಾಶಿ ಹಾಕಲಾಗಿದ್ದ ಮಣ್ಣನ್ನು ಸಮೀಪದ ಖಾಸಗಿ ಜಾಗಕ್ಕೆ ಸಾಗಿಸಲಾಗುತ್ತಿದೆ ಎಂದು ಆರೋಪಿಸಿದ ಭಕ್ತರು, ಈ ಕುರಿತು ದೇವಸ್ಥಾನದ ಸಿಬ್ಬಂದಿ ಹಾಗೂ ಕಾರ್ಯನಿರ್ವಹಣಾಧಿಕಾರಿಯವರ ಗಮನಕ್ಕೆ ತಂದರು.
ಮಹಾಲಿಂಗೇಶ್ವರ ದೇವಸ್ಥಾನ ಸಂರಕ್ಷಣಾ ಸಮಿತಿ ಪ್ರಮುಖ ಹರಿಪ್ರಸಾದ್ ಶೆಟ್ಟಿ ಮಾತನಾಡಿ, “ದೇವಳದ ಹೊರಾಂಗಣದಲ್ಲಿ ಅನುಮತಿ ಇಲ್ಲದೆ ಮಣ್ಣು ಹಾಕಲಾಗಿದ್ದು, ಅದನ್ನು ಬೇರೆ ಜಾಗಕ್ಕೆ ಸಾಗಿಸಲಾಗುತ್ತಿದೆ. ಈ ಬಗ್ಗೆ ಸಿಬ್ಬಂದಿಯನ್ನು ವಿಚಾರಿಸಿದಾಗ ನಮಗೆ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ. ಅಧ್ಯಕ್ಷರು ಹಾಗೂ ಕಾರ್ಯನಿರ್ವಹಣಾಧಿಕಾರಿಯವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಸ್ಥಳಕ್ಕೆ ಆಗಮಿಸಿರಲಿಲ್ಲ. ಮಣ್ಣು ತುಂಬಿಸುವವರು ಅಧ್ಯಕ್ಷರ ಸೂಚನೆಯಂತೆ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ” ಎಂದು ಆರೋಪಿಸಿದರು.
“ಧಾರ್ಮಿಕ ಕ್ಷೇತ್ರದ ವಠಾರದಲ್ಲಿ ಇಂತಹ ಘಟನೆಗಳಿಗೆ ಅವಕಾಶ ನೀಡಬಾರದು. ಅಧ್ಯಕ್ಷರು ಅಥವಾ ಕಾರ್ಯನಿರ್ವಹಣಾಧಿಕಾರಿಯವರು ಸ್ಥಳಕ್ಕೆ ಆಗಮಿಸಿ ಸ್ಪಷ್ಟನೆ ನೀಡಬೇಕು” ಎಂದು ಅವರು ಆಗ್ರಹಿಸಿದರು. ಇದೇ ವೇಳೆ, ಸಂಬಂಧಿಸಿದ ಜಾಗವನ್ನು ವಕೀಲ ಎನ್.ಕೆ. ಜಗನ್ನಿವಾಸರಾವ್ ಅವರಿಗೆ ಲೀಸ್ಗೆ ನೀಡಲಾಗಿದೆ ಎಂಬ ಮಾಹಿತಿ ಇದೆ ಎಂದರು.
ಅಜಿತ್ ರೈ ಹೊಸಮನೆ ಮಾತನಾಡಿ, ದೇವಸ್ಥಾನದ ಭದ್ರತಾ ಸಿಬ್ಬಂದಿ ಹಾಗೂ ಕಾರ್ಯನಿರ್ವಹಣಾಧಿಕಾರಿಯವರಿಗೆ ಮಾಹಿತಿ ಇಲ್ಲದೆ ಮಣ್ಣು ಸಾಗಾಟ ನಡೆದಿರುವುದು ಪ್ರಶ್ನಾರ್ಹವಾಗಿದೆ. ಈ ಬಗ್ಗೆ ಹಿಂದೂ ಸಂಘಟನೆ ತೀವ್ರವಾಗಿ ಖಂಡಿಸುತ್ತದೆ. ದೇವಸ್ಥಾನದ ಆಡಳಿತಾಧಿಕಾರಿ ಅಥವಾ ಅಧ್ಯಕ್ಷರು ತಕ್ಷಣ ಸ್ಥಳಕ್ಕೆ ಆಗಮಿಸಿ ಸ್ಪಷ್ಟನೆ ನೀಡಬೇಕು. ಇಲ್ಲದಿದ್ದರೆ ಸ್ಥಳದಿಂದ ಕದಲುವುದಿಲ್ಲ ಎಂದು ಎಚ್ಚರಿಸಿದರು.
ಬಳಿಕ ಸ್ಥಳಕ್ಕೆ ಆಗಮಿಸಿದ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಶ್ರೀನಿವಾಸ್ ಕೆ.ವಿ. ಅವರು, ದೇವಸ್ಥಾನದ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಪರಿಶೀಲಿಸಿ, ದೇವಳದ ಅನುಮತಿ ಇಲ್ಲದೆ ಮಣ್ಣು ಸಾಗಾಟ ಮಾಡಿರುವುದು ದೃಢಪಟ್ಟಲ್ಲಿ ಸಂಬಂಧಿಸಿದ ಪಿಕಪ್ ವಾಹನದ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭಕ್ತರಿಗೆ ತಿಳಿಸಿದರು ಬಳಿಕ ನೆರೆದಿದ್ದ ಭಕ್ತರು ಸ್ಥಳದಿಂದ ತೆರಳಿದರು. ಪುತ್ತೂರು ದೇವಾಲಯವನ್ನು ರಾಜಕೀಯ ಕ್ಕೆ ಬಳಸಿ ದವರು ಪರ ವಿರೋಧ ಮಾಡಿದ್ರೆ ಯೇನು ಆಗುತ್ತೆ ಅನೋದು ಮುಂದಿನ ದಿನಗಳಲ್ಲಿ ಕಾಣಬಹುದು ನಿಜವಾದ ಭಕ್ತಿ ಯಾರಲ್ಲಿ ಇದೆ ಎನ್ನುದು ಯಕ್ಷ ಪ್ರಶ್ನೆ ಯಾಗಿದೆ.
ಜಯಂತ್ ಕುಂಜೂರುಪಂಜ, ಹರಿಪ್ರಸಾದ್ ದೋಳ್ಪಾಡಿ , ಚೇತನ್, ಜಗದೀಶ್, ಶಶಿಧರ್ ನಾಯಕ್, ನಾಗೇಶ್ ಟಿ.ಎಸ್ ಕೆಮ್ಮಾಯಿ ಭೂಮಿ ಸ್ಟುಡಿಯೋ ಸೇರಿದಂತೆ ಹಲವರು ಉಪಸ್ಥಿತರಿದ್ದರು.
























