ಪುತ್ತೂರು: ಅಗೋಸ್ಟ್ 13, ರೋಟರಿ ಕ್ಲಬ್ ಪುತ್ತೂರು ಯುವ ನೇತೃತ್ವದಲ್ಲಿ, ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ಹಾಗೂ ರೋಟರಿ ಯುವದ ಎಕ್ಸಿಕ್ಯುಟಿವ್ ಸೆಕ್ರೆಟರಿಯಾಗಿರುವ ಪುತ್ತೂರು ಉಮೇಶ್ ನಾಯಕ್ ಅವರ ನೇತೃತ್ವದಲ್ಲಿ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಯಾದ ಶ್ರೀಮತಿ ಸುನಿತಾ ಅವರ ಸೂಚನೆ ಮೇರೆಗೆ ಪಚ್ಚನಾಡಿಯ ನಿರಾಶ್ರಿತರ ಪರಿಹಾರ ಕೇಂದ್ರದ ಸಹಕಾರದೊಂದಿಗೆ ನಗರದ ವಿವಿಧ ಭಾಗಗಳಲ್ಲಿ ಏಕಕಾಲದಲ್ಲಿ ಬೃಹತ್ ಕಾರ್ಯಾಚರಣೆ ನಡೆಸಿ, ಆಸರೆಯಿಲ್ಲದೆ ಕಷ್ಟದಲ್ಲಿದ್ದ 7 ಜನ ನಿರಾಶ್ರಿತರನ್ನು ರಕ್ಷಿಸಿ, ನಿರಾಶ್ರಿತರ ಪುನರ್ವಸತಿ ಕೇಂದ್ರಕ್ಕೆ ಸುರಕ್ಷಿತವಾಗಿ ರವಾನಿಸುವ ಮೂಲಕ ಅತ್ಯಂತ ಶ್ಲಾಘನೀಯ ಮಾನವೀಯ ಸೇವೆಯನ್ನು ಮೆರೆಯಲಾಗಿದೆ.
ಮಧ್ಯಾಹ್ನ ಸುಮಾರು 2:00 ಗಂಟೆಯಿಂದ 5:30 ಗಂಟೆಯ ಅವಧಿಯಲ್ಲಿ ನಗರದ ಜಿ.ಎಲ್. ಮಾಲ್ ಬಳಿ ಓರ್ವ ಮಹಿಳೆ, ಕಲ್ಲಾರೆಯ ತಾರಾ ಮೆಡಿಕಲ್ ಮುಂಭಾಗದಲ್ಲಿ ಓರ್ವ ವಯೋ ವೃದ್ಧ , ದರ್ಬೆ ಚಪ್ಪಲ್ ಬಜಾರ್ ಬಳಿ ಓರ್ವ ಮಾನಸಿಕ ಸ್ವಂತ ಯುವಕ , ದರ್ಬೆಯ ಅಂಕಲ್ ಸ್ವೀಟ್ಸ್ ಬಳಿ ಓರ್ವ ಗೋಣಿಚೀಲ ಹೊತ್ತುಕೊಂಡು ತಿರುಗುವ ಮಾನಸಿಕ ಅಸ್ವಸ್ಥ ವ್ಯಕ್ತಿ ಹಾಗೂ ದರ್ಬೆ ಪಿ ಸಿ ಪೈ ಪೆಟ್ರೋಲ್ ಪಂಪ್ ಬಳಿ ಮತ್ತೋರ್ವ ವ್ಯಕ್ತಿ ಹಾಗೂ ದರ್ಬೆಯ ದೇವರಕಟ್ಟೆ ಬಳಿಯಿಂದ ಓರ್ವ ವ್ಯಕ್ತಿ ಹಾಗೂ ನಿರಾಶ್ರಿತರ ಕೇಂದ್ರದಿಂದ ನೇರವಾಗಿ ಒಂದು ವ್ಯಕ್ತಿಯ ರಕ್ಷಣೆ ಸೇರಿದಂತೆ ಒಟ್ಟು 7 ಮಂದಿ ನಿರಾಶ್ರಿತರು ಹಾಗೂ ನಿರ್ಗತಿಕರನ್ನು ಅತ್ಯಂತ ಮುತುವರ್ಜಿಯಿಂದ ಪತ್ತೆಹಚ್ಚಿ ರಕ್ಷಿಸಲಾಯಿತು.
ಈ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿರುವ ಸಂದರ್ಭದಲ್ಲಿ ಸಮಾಜ ಸೇವಕರು ಹಾಗೂ ತಾಲೂಕು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ರಜಾಕ್ ಬಪ್ಪಳಿಗೆ ಅವರು ರಕ್ಷಣಾ ಕಾರ್ಯಾಚರಣೆಯಲ್ಲಿ ಸ್ವಯಂ ಪ್ರೇರಿತರಾಗಿ ಸೇರಿ ಅತ್ಯಂತ ಕಾಳಜಿಯಿಂದ ನಿರಾಶ್ರಿತರು ಹಾಗೂ ಭಿಕ್ಷುಕರನ್ನು ಹುಡುಕಿ ಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಸ್ಥಳೀಯ ದರ್ಬೆ ಪರಿಸರದ ಆಟೋ ಚಾಲಕರು ಸೂಕ್ತ ಸಹಕಾರ ನೀಡಿದರು.
ಯಾವುದೇ ಒಂದು ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾಗಬೇಕಾದರೆ ಸ್ಥಳದಲ್ಲಿದ್ದು ಶ್ರಮಿಸುವ ತಂಡದ ಜೊತೆಗೆ, ಅವರಿಗೆ ತಕ್ಷಣವೇ ಆಸರೆ ನೀಡುವ ಪುನರ್ವಸತಿ ಕೇಂದ್ರದ ಸ್ಪಂದನೆಯೂ ಅಷ್ಟೇ ಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ ಮಂಗಳೂರಿನ ಪಚ್ಚನಾಡಿ ನಿರಾಶ್ರಿತರ ಪರಿಹಾರ ಕೇಂದ್ರದ ಅಧೀಕ್ಷಕರಾದ ಶ್ರೀ ಲಕ್ಷ್ಮಣ್ ಸದಲಗಿ ಅವರ ನೇತೃತ್ವದ ಸಿಬ್ಬಂದಿ ತಂಡವು ತೋರಿದ ದಕ್ಷತೆ ಹಾಗೂ ಮಾನವೀಯ ಕಾಳಜಿ ನಿಜಕ್ಕೂ ಮಾದರಿಯಾದುದು. ಪುತ್ತೂರಿನಲ್ಲಿ ನಿರ್ಗತಿಕ ವ್ಯಕ್ತಿಗಳು ತಿರುಗುತ್ತಿರುವ ವಿಚಾರದಲ್ಲಿ ಪುತ್ತೂರು ಉಮೇಶ್ ನಾಯಕ್ ಅವರು ಪುತ್ತೂರು ಪೊಲೀಸ್ ಠಾಣೆ ಹಾಗೂ ಸಮಾಜ ಕಲ್ಯಾಣ ಇಲಾಖೆಗೆ ದೂರನ್ನು ನೀಡಿದ್ದು ರಕ್ಷಣೆ ಹಾಗೂ ಪುನರ್ವಸತಿ ಮಾಡುವಲ್ಲಿ ಸಹಕಾರ ಕೋರಿದರು, ಇವರ ಸ್ಪಂದನೆಗೆ ತಕ್ಷಣವೇ ಸ್ಪಂದಿಸಿದ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಾದ ಶ್ರೀಮತಿ ಸುನಿತಾ ಅವರು ಪಚ್ಚನಾಡಿ ಕೇಂದ್ರದ ಅಧೀಕ್ಷಕರಿಗೆ ವಿಷಯವನ್ನು ತಿಳಿಸಿದ್ದು, ನಿರಾಶ್ರಿತ ಪರಿಹಾರ ಕೇಂದ್ರದ ಅಧಿಕಾರಿಗಳು ತ್ವರಿತವಾಗಿ ಸ್ಪಂದಿಸಿದರು
ಈ ರಕ್ಷಣಾ ಸೇವೆಯಲ್ಲಿ ಪಚ್ಚನಾಡಿ ಕೇಂದ್ರದ ಅಧೀಕ್ಷಕರಾದ ಶ್ರೀ ಲಕ್ಷ್ಮಣ್ ಸದಲಗಿ, ಮಹಿಳಾ ವಾರ್ಡನ್ ಶ್ರೀಮತಿ ಶೈಲಜಾ, ಸ್ಟಾಫ್ ನರ್ಸ್ ಶ್ರೀ ಗಿರೀಶ್ ಹಾಗೂ ಭದ್ರತಾ ಸಿಬ್ಬಂದಿಗಳಾದ ಶ್ರೀ ಪ್ರದೀಪ್, ಶ್ರೀ ಮಣಿಕಂಠ ಹಾಗೂ ವಾಹನ ಚಾಲಕರಾದ ಶ್ರೀ ಸಾಯಿ ಕುಮಾರ್ ಸಹಕರಿಸಿದರು.
ಅಧೀಕ್ಷಕ ಲಕ್ಷ್ಮಣ್ ಸದಲಗಿ ಅವರ ಮಾರ್ಗದರ್ಶನದಲ್ಲಿ ಕೇಂದ್ರದ ಇಡೀ ತಂಡವು ಅತ್ಯಂತ ಮುತುವರ್ಜಿಯಿಂದ ಕರ್ತವ್ಯ ನಿರ್ವಹಿಸಿದ್ದು, ನಿರಾಶ್ರಿತರಿಗೆ ಸೂಕ್ತ ಆಸರೆ ನೀಡಿ ಅವರಲ್ಲಿ ಆತ್ಮವಿಶ್ವಾಸ ತುಂಬುವಲ್ಲಿ ಇವರ ಸಕಾಲಿಕ ನೆರವು ಅತ್ಯಂತ ಪ್ರಶಂಸನೀಯವಾಗಿದೆ.
ಈ ಹಿಂದೆ 2024ರಲ್ಲಿ ಪುತ್ತೂರು ಉಮೇಶ್ ನಾಯಕ್ ಅವರ ನೇತೃತ್ವದಲ್ಲಿ ಶಿಶು ಅಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಜಂಟಿ ಸಹಯೋಗದೊಂದಿಗೆ ಒಂದೇ ರಾತ್ರಿ ಸುಮಾರು 9 ರಿಂದ ತಡರಾತ್ರಿ 2 ಗಂಟೆ ತನಕ ಏಕಕಾಲಕ್ಕೆ 13 ಮಂದಿ ನಿರ್ಗತಿಕರನ್ನು ಹುಡುಕಿ ರಕ್ಷಿಸಿ ಕೆರೆ ಮೂಲೆ ಯಲ್ಲಿರುವ ದೀಪಶ್ರೀ ಪುನರ್ವಸತಿ ಕೇಂದ್ರಕ್ಕೆ ಸೇರಿಸಿ ನಿರ್ಗತಿಕರಿಗೆ ಆಶ್ರಯ ಕಲ್ಪಿಸಲಾಗಿತ್ತು. 2024ರ ಆ ಬೃಹತ್ ಕಾರ್ಯಾಚರಣೆಯ ನಂತರ ನಡೆದ ಅತ್ಯಂತ ದೊಡ್ಡ ಹಾಗೂ ಪ್ರಮುಖ ರಕ್ಷಣಾ ಕಾರ್ಯಾಚರಣೆ ಇದಾಗಿದೆ ಎಂಬ ವಿಚಾರವನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳಬಹುದು.
ಪುತ್ತೂರು ಉಮೇಶ್ ನಾಯಕ್ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಗೆ ರೋಟರಿ ಕ್ಲಬ್ ಪುತ್ತೂರು ಯುವ, ಪಚ್ಚನಾಡಿ ಕೇಂದ್ರದ ಸಿಬ್ಬಂದಿಗಳು ಹಾಗೂ ಸಹಕರಿಸಿದ ಸಮಾಜ ಸೇವಕರಾದ ರಜಾಕ್ ಬಪ್ಪಳಿಗೆ ಮತ್ತು ಅಧಿಕಾರಿಗಳ ಈ ಮಾನವೀಯ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
























