ಮಂಗಳೂರು: ಉಳಾಯಿಬೆಟ್ಟು ಪದ್ಮನಾಭ ಕೋಟ್ಯಾನ್ ಮನೆ ದರೋಡೆ ಪ್ರಕರಣ, ಕೋಟ್ಯಾನ್ ಜತೆಗಿದ್ದವನೇ ಪ್ರಮುಖ ಆರೋಪಿ.
ಪ್ರಕರಣ ಬೇಧಿಸಿದ ಪೋಲಿಸ್ ಪಡೆ
ಭಾರಿ ಕುತೂಹಲ ಕೆರಳಿಸಿದ್ದ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಉಳಾಯಿಬೆಟ್ಟು ದರೋಡೆ ಪ್ರಕರಣವನ್ನು ಮಂಗಳೂರು ಪೊಲೀಸರು ಬೇಧಿಸಿದ್ದು ಪ್ರಕರಣ 10 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಜೂನ್ 21ರಂದು ರಾತ್ರಿ 8 ಗಂಟೆ ಸುಮಾರಿಗೆ ಎಂಟರಿಂದ ಒಂಬತ್ತು ಮಂದಿ ಮುಸುಕುಧಾರಿಗಳು ಮನೆಗೆ ನುಗ್ಗಿ ಗುತ್ತಿಗೆದಾರ ಪದ್ಮನಾಭ ಕೋಟ್ಯಾನ್ ರವರನ್ನು ಕಟ್ಟಿ ಹಾಕಿ ಥಳಿಸಿದ್ದು ಹಾಗೂ ಪತ್ನಿ, ಮಕ್ಕಳನ್ನು ಬೆದರಿಸಿ 9 ಲಕ್ಷ ಮೌಲ್ಯದ ನಗದು ಹಾಗೂ ಚಿನ್ನಾಭರಣ ದೋಚಿ ಮನೆಯ ವಾಹನದಲ್ಲೇ ಅಲ್ಪ ದೂರದ ವರೆಗೆ ಪ್ರಯಾಣಿಸಿ ನಂತರ ಅವರ ವಾಹನವನ್ನು ಮಧ್ಯದಲ್ಲೇ ಬಿಟ್ಟು ಇನ್ನೋವಾದಲ್ಲಿ ಪರಾರಿಯಾಗಿದ್ದರು.
ಸ್ಥಳೀಯ ನಾಲ್ವರು ಆರೋಪಿಗಳಾದ ವಸಂತ್, ರಮೇಶ್, ರೇಮಂಡ್ ಮತ್ತು ಬಾಲಕೃಷ್ಣ ಈ ದರೋಡೆಗೆ ಯೋಜನೆ ರೂಪಿಸಿ ನಳಿಕ ಜಾನ್ ಬಾಸ್ಕೋ ನೇತೃತ್ವದ ಕೇರಳ ತಂಡದೊಂದಿಗೆ ಸಂಪರ್ಕ ಹೊಂದಿದ್ದರು.
ದರೋಡೆಗೆ ಎಂಟು ತಿಂಗಳ ಹಿಂದೆಯೇ ಯೋಜನೆ ರೂಪಿಸಲಾಗಿತ್ತು. ಕೇರಳದ ತಂಡ ಮಂಗಳೂರಿಗೆ ಭೇಟಿ ನೀಡಿದ್ದು, ದರೋಡೆಗೆ ಪ್ರದೇಶದ ಸ್ಕೆಚ್ ಮತ್ತು ನಕ್ಷೆಯನ್ನು ಸಿದ್ಧಪಡಿಸುವಂತೆ ರಮೇಶ್ ಮತ್ತು ವಸಂತ್ ಅವರನ್ನು ಕೇಳಿದ್ದರು. ಅದರಂತೆ ಗುತ್ತಿಗೆದಾರನ ಬಳಿ 100 ರಿಂದ 300 ಕೋಟಿ ರೂ.ಗೂ ಹೆಚ್ಚು ಹಣವಿದೆ ಎಂದು ಸ್ಥಳೀಯ ಆರೋಪಿಗಳು ಕೇರಳ ತಂಡಕ್ಕೆ ತಿಳಿಸಿದ್ದು ಲೂಟಿ ಹೊಡೆಯಲು ಎಲ್ಲಾ
ರೀತಿಯ ಸ್ಕೆಚ್ ತಯಾರಿಸಿದ್ದರು. ಅದರಲ್ಲಿ ಯಶಸ್ವಿಯಾಗಿದ್ದರು.
ಈ ಪ್ರಕರಣದಲ್ಲಿ ಇನ್ನೂ 4-5 ಮಂದಿಯನ್ನು ಬಂಧಿಸಬೇಕಿದ್ದು 100ರಿಂದ 300 ಕೋಟಿ ಲೂಟಿ ಮಾಡಬಹುದೆಂದು ನಂಬಿಸಿ ಮಾಸ್ಟರ್ ಬೆಡ್ರೂಮ್ನ ಟೈಲ್ಸ್ ತೆಗೆಯಲು 20ಕ್ಕೂ ಹೆಚ್ಚು ಗೋಣಿ ಚೀಲಗಳು ಮತ್ತು ಸಲಕರಣೆಗಳನ್ನು ತಂದಿದ್ದರು. ಒಂದೇ ಒಂದು ಸುಳಿವೇ ಇಲ್ಲದ ಕುರುಡು ಪ್ರಕರಣವಾಗಿರುವುದರಿಂದ ಆರೋಪಿಗಳ ಪತ್ತೆಗೆ ಪೊಲೀಸರು ಮೂರು ತಂಡಗಳನ್ನು ರಚಿಸಿದ್ದರು. ಕಳೆದ 15 ದಿನಗಳಿಂದ ಈ ಪ್ರಕರಣವನ್ನು ಭೇದಿಸಲು ಅವಿರತವಾಗಿ ಶ್ರಮಿಸಿದ ಡಿಸಿಪಿ, ಎಸಿಪಿ ಮತ್ತು ಸಿಸಿಬಿ ಸಿಬ್ಬಂದಿಯನ್ನು ನಾನು ಅಭಿನಂದಿಸುತ್ತೇನೆ ಎಂದು ಪೊಲೀಸ್ ಆಯುಕ್ತರಾದ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.