ಬೆಂಗಳೂರು : ಅಸಹಜ ಲೈಂಗಿಕ ದೌರ್ಜನ್ಯ ಕೇಸ್ನಲ್ಲಿ ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣಗೆ ಷರತ್ತುಬದ್ಧ ಜಾಮೀನು ನೀಡಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ನಿಂದ ಸೋಮವಾರ ಆದೇಶ ಹೊರಡಿಸಲಾಗಿದೆ. ಇತ್ತೀಚೆಗೆ ಹೊಳೆನರಸೀಪುರದಲ್ಲಿ ದಾಖಲಾಗಿದ್ದ ಮೊದಲ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂರಜ್ ರೇವಣ್ಣ ಪರ ವಕೀಲರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಬೆಂಗಳೂರಿನ 42ನೇ ಎಸಿಎಂಎಂ ಕೋರ್ಟ್ ವಜಾಗೊಳಿಸಿ ಆದೇಶ ಹೊರಡಿಸಿತ್ತು.
- ನ್ಯಾಯಾಲಯದಿಂದ ಲಿಖಿತ ಅನುಮತಿಯನ್ನು ಪಡೆದಿರಬೇಕು.
- ಅರ್ಜಿದಾರರು ಯಾವುದೇ ರೀತಿಯಲ್ಲಿ ಸಂತ್ರಸ್ತೆಯನ್ನು ನೇರವಾಗಿ ಅಥವಾ ಪರೋಕ್ಷವಾಗಿ ಸಂಪರ್ಕಿಸಬಾರದು.
- ಅರ್ಜಿದಾರರು I.O ಮುಂದೆ ಹಾಜರಾಗಬೇಕು. ತಿಂಗಳ ಪ್ರತಿ ಎರಡನೇ ಭಾನುವಾರ ಮತ್ತು ಬೆಳಿಗ್ಗೆ 9.00 ರಿಂದ ಸಂಜೆ 5.00 ರವರೆಗೆ ಅವರ ಹಾಜರಾತಿ ಹಾಕುವುದು.
- 6 ತಿಂಗಳ ಅವಧಿಗೆ ಅಥವಾ ಚಾರ್ಜ್ ಶೀಟ್ ಸಲ್ಲಿಸುವವರೆಗೆ (ಯಾವುದು ಮೊದಲು) ಅರ್ಜಿದಾರರು ಇದೇ ರೀತಿಯ ಅಪರಾಧವನ್ನು ಮಾಡಬಾರದು.
ಜೂನ್ 22ರಂದು ಅರಕಲಗೂಡು ಮೂಲದ ಯುವಕ ಹಾಗೂ ಜೂನ್ 25ರಂದು ಹೊಳೆನರಸೀಪುರ ಮೂಲದ ಯುವಕ ಸೂರಜ್ ವಿರುದ್ಧ ಅಸಹಜ ಲೈಂಗಿಕ ದೌರ್ಜನ್ಯದ ಕೇಸ್ ದಾಖಲಿಸಲಾಗಿತ್ತು. ಎರಡೂ ಕೇಸ್ನ ತನಿಖೆ ನಡೆಸಿದ್ದ ಸಿಐಡಿ ಹಾಸನದ ಗನ್ನಿಕಡ ತೋಟದ ಮನೆಯಲ್ಲಿ ಸ್ಥಳ ಮಹಜರು ಮಾಡಿದ್ದರು. ಸಂತ್ರಸ್ತನನ್ನು ಕರೆ ತಂದು ಸ್ಥಳ ಮಹಜರು ಪೂರ್ಣಗೊಳಿಸಿದ್ದರು.
ಇನ್ನು ಸೂರಜ್ ರೇವಣ್ಣ ವಿರುದ್ಧ ಮತ್ತೊಂದು ಅಸಹಜ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಸೂರಜ್ ರೇವಣ್ಣ ಬ್ರಿಗೇಡ್ನ ಖಜಾಂಚಿಯಿಂದಲೇ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲಿ ಸೂರಜ್ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ನಾಲ್ಕು ವರ್ಷಗಳ ಹಿಂದೆ ಕೊರೊನಾ ಸಮಯದಲ್ಲಿ ದೌರ್ಜನ್ಯ ಆರೋಪ ಮಾಡಲಾಗಿತ್ತು.