ರಿಷಬ್ ಶೆಟ್ಟಿ ಅವರು ಹಿಂದಿಯ ‘ಕೌನ್ ಬನೇಗಾ ಕರೋಡ್ಪತಿ’ ಶೋಗೆ ಸ್ಪರ್ಧಿಯಾಗಿ ತೆರಳಿದ್ದರು. ಈ ಎಪಿಸೋಡ್ ಶುಕ್ರವಾರ (ಅಕ್ಟೋಬರ್ 19) ಪ್ರಸಾರ ಕಂಡಿದೆ. ರಿಷಬ್ ಶೆಟ್ಟಿ ಅವರು ಬರೋಬ್ಬರೊ 12.50 ಲಕ್ಷ ರೂಪಾಯಿ ಹಣ ಗೆದ್ದಿದ್ದಾರೆ. ಈ ಹಣವನ್ನು ದೈವಾರಾಧಕರು ಹಾಗೂ ಸರ್ಕಾರಿ ಶಾಲೆಗಳ ಏಳ್ಗೆಗೆ ಬಳಕೆ ಮಾಡೋದಾಗಿ ರಿಷಬ್ ಶೆಟ್ಟಿ ಹೇಳಿದ್ದಾರೆ.
ರಿಷಬ್ ಶೆಟ್ಟಿ ಅವರು ‘ಕಾಂತಾರ: ಚಾಪ್ಟರ್ 1’ ಸಿನಿಮಾ ಮೂಲಕ ದೊಡ್ಡ ಗೆಲುವು ಕಂಡರು. ಈ ಗೆಲುವಿನಿಂದ ಅವರಿಗೆ ತುಂಬಾನೇ ಖುಷಿ ಆಗಿದೆ. ನಿರ್ದೇಶನ ಹಾಗೂ ನಟನೆ ಎರಡರಲ್ಲೂ ಅವರು ಹೆಚ್ಚು ಅಂಕ ಪಡೆದುಕೊಂಡಿದ್ದಾರೆ. ಈಗ ಅವರು ‘ಕೆಬಿಸಿ’ ಶೋನಲ್ಲೂ ಮಿಂಚಿದ್ದಾರೆ. ಈ ಶೋನಲ್ಲಿ ರಿಷಬ್ ಗಮನ ಸೆಳೆದರು.
ರಿಷಬ್ ಶೆಟ್ಟಿ ಅವರು ತಮ್ಮ ಹಳೆಯ ಕಥೆಗಳನ್ನು ಹೇಳಿಕೊಂಡರು. ‘ಕನ್ನಡದಲ್ಲಿ ರಾಜ್ಕುಮಾರ್ ಅವರನ್ನು ನಾನು ಆರಾಧಿಸುತ್ತೇನೆ, ಹಿಂದಿಯಲ್ಲಿ ನೀವೇ ನಮ್ಮ ಫೇವರಿಟ್’ ಎಂದು ಹೇಳಿದರು. ರಿಷಬ್ ಶೆಟ್ಟಿ ಅವರು 12 ಪ್ರಶ್ನೆಗಳನ್ನು ಎದುರಿಸಿದ್ದಾರೆ. ಎಲ್ಲಾ ಪ್ರಶ್ನೆಗಳಿಗೆ ಸರಿಯಾದ ಉತ್ತರ ಕೊಟ್ಟು 12.5 ಲಕ್ಷ ರೂಪಾಯಿ ಗೆದ್ದಿದ್ದಾರೆ. ಈ ವೇಳೆ ಟೈಮ್ ಅಪ್ ಆಗಿದೆ.
ರಿಷಬ್ ಅವರು ಆಟ ಶುರುವಾಗುವುದಕ್ಕೂ ಮೊದಲೇ ಹಣವನ್ನು ಎಲ್ಲಿ ಬಳಸುತ್ತೇನೆ ಎಂಬುದನ್ನು ವಿವರಿಸಿದರು. ‘ರಿಷಬ್ ಫೌಂಡೇಷನ್ ಅನ್ನು ನಾನು ನಡೆಸುತ್ತಿದ್ದೇನೆ. ಇದರಲ್ಲಿ ಬಂದ ಹಣವನ್ನು ನಾನು ಚಾರಿಟಿ ಮೂಲಕ ಸರ್ಕಾರಿ ಶಾಲೆ ಹಾಗೂ ದೈವ ನರ್ತಕರಿಗೆ ಸಹಾಯ ಮಾಡಲು ಬಯಸುತ್ತೇನೆ’ ಎಂದು ರಿಷಬ್ ಹೇಳಿದರು. ಇದಕ್ಕೆ ಅಮಿತಾಭ್ ಸಂತೋಷ ಹೊರಹಾಕಿದರು.
‘ಕಾಂತಾರ’ ಹಾಗೂ ‘ಕಾಂತಾರ: ಚಾಪ್ಟರ್ 1’ ಚಿತ್ರದಲ್ಲಿ ದೈವದ ಬಗ್ಗೆ ರಿಷಬ್ ಹೇಳಿದ್ದಾರೆ. ಅವರು ಈ ಸಿನಿಮಾ ಮಾಡಲು ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಸಾಕಷ್ಟು ಅಧ್ಯಯನ ಕೂಡ ನಡೆಸಿದ್ದರು. ಆದಾಗ್ಯೂ ದೈವಕ್ಕೆ ಅಪಪ್ರಚಾರ ಆಗುತ್ತಿದೆ ಎಂಬ ಮಾತುಗಳು ಕೇಳಿ ಬಂದವು. ಇದರ ಮಧ್ಯೇಯೇ ದೈವಾರಾಧಕರ ಏಳ್ಗೆಗೆ ಅವರು ದುಡಿಯುತ್ತಿದ್ದಾರೆ ಎಂಬುದು ಖುಷಿಯ ವಿಚಾರ.