ರಾಜ್ಯದ ಯಾವ ಭಾಗದಲ್ಲಿ ಬೇಕಾದರೂ ಕಂಬಳ ನಡೆಸಬಹುದು ಎಂದು ಹೈಕೋರ್ಟ್ ಅನುಮತಿ ಕೊಟ್ಟ ನಂತರ ಕಂಬಳವನ್ನು ಬೇರೆ ಜಿಲ್ಲೆಗಳಲ್ಲಿ ನಡೆಸಲು ಆಯೋಜಕರು ಉತ್ಸಾಹ ತೋರಿದ್ದಾರೆ. ಮೈಸೂರು ಮತ್ತು ಶಿವಮೊಗ್ಗದಲ್ಲಿ ಕಂಬಳ ನಡೆಸಲು ಮಾತುಕತೆಗಳು ನಡೆಯುತ್ತಿದ್ದು ಎಲ್ಲವೂ ಅಂದುಕೊಂಡಂತೆ ನಡೆದರೆ ಕಂಬಳದ ಕಂಪು ರಾಜ್ಯದ ಇತರ ಭಾಗಗಳಿಗೂ ಹಬ್ಬಲಿದೆ.
ಕಳೆದೆರಡು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಕಂಬಳ ನಡೆದಿದ್ದು, ನಿರೀಕ್ಷೆಗೂ ಮೀರಿ ಕಂಬಳಕ್ಕೆ ಪ್ರೋತ್ಸಾಹ ಸಿಕ್ಕಿತ್ತು. ಕಳೆದ ವರ್ಷವೂ ಬೆಂಗಳೂರಿನಲ್ಲಿ ಕಂಬಳ ನಡೆಸಲು ಪ್ರಯತ್ನ ನಡೆಸಿದ್ದಾದರೂ ಅರಮನೆ ಮೈದಾನದಲ್ಲಿ ಸ್ಥಳಕ್ಕೆ ಅವಕಾಶ ಸಿಗದಿದ್ದ ಕಾರಣ ಬೆಂಗಳೂರು ಕಂಬಳ ಪ್ರಯತ್ನವನ್ನು ಕೈ ಬಿಡಲಾಯಿತು. ಶಿವಮೊಗ್ಗದಲ್ಲಿ ಕಂಬಳ ನಡೆಸಲು ಸ್ಥಳ ಗುರುತು ಮಾಡಲಾಗಿತ್ತು. ಆದರೆ ವಿವಿಧ ಕಾರಣಗಳಿಂದ ಶಿವಮೊಗ್ಗ ಕಂಬಳವೂ ಎಣಿಸಿದಂತೆ ನಡೆಯಲಿಲ್ಲ. ಆದರೆ ಈ ಬಾರಿ ಹೈಕೋರ್ಟ್ ಅನುಮತಿ ನೀಡಿದ್ದರಿಂದ ಕಂಬಳ ನಡೆಸಲು ಆಯೋಜಕರು ಮತ್ತೆ ಮುಂದಾಗಿದ್ದಾರೆ.
ನಾಲ್ಕು ತಿಂಗಳು ಕಂಬಳದ ಋತು ನಡೆಯಲಿದ್ದು ಈಗಾಗಲೇ ಭರ್ಜರಿ ತಯಾರಿಗಳು ನಡೆಯುತ್ತಿದೆ. ಕೊಬ್ಬಿದ ಕೋಣಗಳನ್ನು ಸ್ಪರ್ಧೆಗೆ ಮಾಲಕರು ಅಣಿಗೊಳಿಸುತ್ತಿದ್ದಾರೆ. ಅವುಗಳಿಗೆ ಹುರುಳಿ, ತರಕಾರಿ, ಹಣ್ಣು ಹಂಪಲುಗಳನ್ನು ನೀಡಿ ಮೈಕಟ್ಟು ಸದೃಢವಾಗಿರಿಸಲಾಗುತ್ತಿದೆ. ನಿಯಮಿತ ವ್ಯಾಯಾಮ, ನಿರಂತರ ತರಬೇತಿಯನ್ನು ನೀಡಿ ಕೆಸರ ಗದ್ದೆಯ ಓಟಕ್ಕೆ ಸಿದ್ಧಗೊಳಿಸಲಾಗುತ್ತಿದೆ.
ಜಲ್ಲಿಕಟ್ಟಿನಂತೆ ಕಂಬಳದಲ್ಲಿ ಕೋಣಗಳನ್ನು ಹಿಡಿದು ಪರಾಕ್ರಮ ತೋರುವ ಆಟ ಅಲ್ಲ. ಹಿರಿಯರು ಒಂದು ಹಂತದ ಕೃಷಿ ಕಾರ್ಯ ಮುಗಿದ ಬಳಿಕ ಅವುಗಳನ್ನು ಕೆಸರ ಗದ್ದೆಯಲ್ಲಿ ಓಡಿಸುತ್ತಿದ್ದರು. ಊರೊಳಗೇ ನಡೆಯುತ್ತಿದ್ದ ಕಂಬಳ ಈಗ ವಿಸ್ತಾರವಾಗಿದೆ. ಆಧುನಿಕ ಸ್ಪರ್ಶ ಕೂಡಾ ಕಂಬಳಕ್ಕೆ ಸಿಕ್ಕಿದೆ. ಎಲ್ಲಾ ಕಡೆ ಬಹಳ ವೈಭವೋಪೇತವಾಗಿ ಕಂಬಳವನ್ನು ನಡೆಸಲಾಗುತ್ತದೆ. ದೇವರ ಕಂಬಳದಲ್ಲಿ ಸ್ಪರ್ಧೆಯಲ್ಲಿ ಗೆದ್ದ ಕೋಣಗಳಿಗೆ ಚಿನ್ನದ ಬಹುಮಾನ ಇರೋದಿಲ್ಲ. ಅವುಗಳಿಗೆ ಆಹಾರ ವಸ್ತುಗಳನ್ನು ನೀಡಿ ಪುರಸ್ಕಾರ ಮಾಡಲಾಗುತ್ತದೆ. ಇನ್ನುಳಿದ ಕಡೆಗಳಲ್ಲಿ ಗರಿಷ್ಠ ಎರಡು ಪವನ್ ಚಿನ್ನದ ವರೆಗೆ ಪ್ರಶಸ್ತಿಯನ್ನು ನೀಡಲಾಗುತ್ತದೆ.
ಕಂಬಳ ಕೋಣಗಳನ್ನು ಸಾಕೋದು ಕೂಡಾ ತುಂಬಾ ಜಾಗರೂಕತೆಯಿಂದ ಆಗಬೇಕಾದ ಕೆಲಸ. ಕಾಲ ಕಾಲಕ್ಕೆ ಅವುಗಳಿಗೆ ಎಣ್ಣೆ ಮಸಾಜ್ ಮಾಡಬೇಕು. ಆರೋಗ್ಯದಲ್ಲಿ ವ್ಯತ್ಯಾಸ ಆಗದಂತೆ ಆಹಾರ ನೀಡಬೇಕು. ದಿನನಿತ್ಯ ವ್ಯಾಯಾಮ ಮಾಡಬೇಕು. ಅವುಗಳ ಲಾಲನೆ ಪಾಲನೆಗೇ ಒಂದು ಜೋಡಿ ಕೋಣಕ್ಕೆ ಕನಿಷ್ಠ ನಾಲ್ವರು ಬೇಕು. ಹೀಗಾಗಿ ಕೋಣ ಸಾಕಲೂ ಪ್ರತಿ ವರ್ಷ ಲಕ್ಷಾಂತರ ರೂಪಾಯಿ ಹಣವನ್ನು ಮಾಲಕರು ವ್ಯಯಿಸುತ್ತಾರೆ.























