ಪ್ರೀತಿಸಿದ ಯುವಕನೊಂದಿಗೆ ಪರಾರಿಯಾದ ಮಗಳಿಗಾಗಿ ಆಕೆಯ ಪೋಷಕರು ಪೊಲೀಸ್ ಠಾಣೆ ಮುಂದೆ ಕಣ್ಣಿರು ಹಾಕಿದ ಘಟನೆ ವಿಜಯಪುರದಲ್ಲಿ ನಡೆದಿದೆ. ಹೆತ್ತವರನ್ನು ಬಿಟ್ಟು ಪರಾರಿಯಾದ ಯುವತಿ, ಅನ್ಯಧರ್ಮೀಯನನ್ನು ಮದುವೆ ಆಗಿದ್ದಕ್ಕೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದು, ಮಹಿಳಾ ಪೊಲೀಸ್ ಠಾಣೆಯ ಎದುರಿಗೆ ಕೂತು ಗೋಳಿಟ್ಟಿದ್ದಾರೆ.
ಮೊಹಮದ್ ಸಲಿಂ ಸುತಾರ್ ಎಂಬ ಯುವಕನನ್ನು ಪ್ರೀತಿಸಿದ್ದ ಹುಡುಗಿ, ತಂದೆ ತಾಯಿಯನ್ನು ಎದುರುಹಾಕಿಕೊಂಡು ಆತನೊಂದಿಗೆ ಪರಾರಿಯಾಗಿದ್ದಳು. ಈ ಹಿನ್ನೆಲೆ ಮಗಳು ಕಾಣೆಯಾಗಿದ್ದಾಳೆಂದು ಫೆಬ್ರವರಿ 2ರಂದು ಯುವತಿಯ ಪೋಷಕರು ವಿಜಯನಗರ ಮಹಿಳಾ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದರು. ಇದೀಗ ಅದೇ ಠಾಣೆಗೆ ಸ್ವಯಂಪ್ರೇರಿತವಾಗಿ ಪ್ರಿಯಕರನೊಂದಿಗೆ ಬಂದ ಯುವತಿ, ತಾನು ಮದುವೆಯಾಗಿರುವುದಾಗಿ ತಿಳಿಸಿದ್ದಾಳೆ.
ಈ ವೇಳೆ ಠಾಣೆಗೆ ಬಂದ ತಂದೆ-ತಾಯಿ, ಮನೆಗೆ ವಾಪಸ್ ಬರುವಂತೆ ಮಗಳಲ್ಲಿ ಅಂಗಲಾಚಿದ್ದಾರೆ. ಆದರೆ ಯುವತಿ ಮಾತ್ರ ಹೆತ್ತವರ ಕಣ್ಣೀರಿಗೂ ಕರಗದೆ, ನಾನು ನನ್ನ ಗಂಡನ ಜೊತೆಗೆ ಹೋಗುತ್ತೇನೆ, ನಿಮ್ಮ ಜೊತೆ ಬರಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾಳೆ. ಯುವತಿಯೂ ಪ್ರಾಪ್ತ ವಯಸ್ಸಿನವಳಾದ್ದರಿಂದ ಪೊಲೀಸರು ಆಕೆಯನ್ನು ಪತಿಯ ಜೊತೆಗೇ ಕಳುಹಿಸಿಕೊಟ್ಟಿದ್ದಾರೆ.
ಪೋಷಕರು ಎಷ್ಟೇ ಕರೆದರೂ ಒಪ್ಪದ ಮಗಳು ಗಂಡನೊಂದಿಗೇ ಹೋದಾಗ, ಆಕೆಯಿದ್ದ ಪೊಲೀಸ್ ವಾಹನಕ್ಕೂ ಅಡ್ಡಬಿದ್ದು ಮಗಳನ್ನು ಓಲೈಸಲು ಪೋಷಕರು ಪ್ರಯತ್ನಿಸಿದ್ದಾರೆ. ಆದರೂ ಹೆತ್ತ ಕರುಳಿಗೆ ಸಮಾಧಾನವಾಗದೇ ಪೊಲೀಸ್ ಠಾಣೆಯ ಮುಂದೇ ಕುಳಿತು ತಂದೆ ತಾಯಿಯಿಬ್ಬರೂ ಗೋಗರೆದಿದ್ದಾರೆ. ಮಗಳು ಮಾತ್ರ ತಂದೆ ತಾಯಿಯ ಮುಖವನ್ನೂ ನೋಡದೆ ಅನ್ಯಕೋಮಿನ ಪ್ರಿಯಕರನೊಂದಿಗೆ ಹೊರಟು ಹೋಗಿದ್ದಾಳೆ.


























