ಫೆಬ್ರವರಿ 27ರಂದು ‘ವೀರ ಕಂಬಳ’ ಸಿನಿಮಾ ಬಿಡುಗಡೆ ಆಗಲಿದೆ. ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರು ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಶೀರ್ಷಿಕೆಯೇ ಸೂಚಿಸುವಂತೆ ತುಳುನಾಡಿನ ಜನಜೀವನದೊಂದಿಗೆ ಹೊಸೆದುಕೊಂಡಿರುವ ಕಂಬಳದ ಕುರಿತು ಈ ಸಿನಿಮಾದಲ್ಲಿ ತೋರಿಸಲಾಗುತ್ತದೆ. ಒಟ್ಟಾರೆ ಸಿನಿಮಾ ಹೇಗಿರಬಹುದು ಎಂಬುದನ್ನು ತಿಳಿಸಲು ಈಗ ‘ವೀರ ಕಂಬಳ’ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಲಾಗಿದೆ. ಹಿರಿಯ ಸಂಗೀತ ನಿರ್ದೇಶಕ, ಗೀತರಚನಕಾರಹಂಸಲೇಖ ಅವರು ಟ್ರೇಲರ್ ಬಿಡುಗಡೆ ಮಾಡಿದ್ದಾರೆ.
‘ಬಾಬಾಸ್ ಬ್ಲೆಸಿಂಗ್ ಫಿಲ್ಮ್ಸ್’ ಮೂಲಕ ಡಾ. ವಿನಿತ ವಿಜಯ್ ಕುಮಾರ್ ರೆಡ್ಡಿ ಮತ್ತು ಅರುಣ್ ರೈ ತೊಡಾರ್ ಅವರು ‘ವೀರ ಕಂಬಳ’ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ರಾಜೇಶ್ ಕುಡ್ಲ ಅವರು ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ. ಆದಿತ್ಯ, ಪ್ರಕಾಶ್ ರಾಜ್, ರವಿಶಂಕರ್ ಅವರು ಪ್ರಧಾನ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ರಾಧಿಕಾ ನಾರಾಯಣ್ ಅವರು ಒಂದು ವಿಶೇಷ ಪಾತ್ರ ಮಾಡಿದ್ದಾರೆ.
ಟ್ರೇಲರ್ ಬಿಡುಗಡೆ ವೇಳೆ ರಾಜೇಂದ್ರ ಸಿಂಗ್ ಬಾಬು ಅವರು ಮಾತನಾಡಿದರು. ಕಂಬಳದ ಸುತ್ತಾ ಮುಂಬೈ ಭೂಗತ ಜಗತ್ತಿನ ನಂಟಿರುವ ರೋಚಕ ಅಂಶಗಳೊಂದಿಗೆ ಈ ಕಥೆ ಸೃಷ್ಟಿಯಾಗಿದೆ ಎಂಬ ಸುಳಿವನ್ನು ಅವರು ನೀಡಿದರು. ಟ್ರೇಲರ್ನಲ್ಲಿ ಕೂಡ ಅದು ಕಾಣಿಸಿದೆ. ಈ ಸಿನಿಮಾಗಾಗಿ ರಾಜೇಂದ್ರ ಸಿಂಗ್ ಬಾಬು ಅವರು ಹಲವು ವರ್ಷಗಳ ಕಾಲ ಶ್ರಮಿಸಿದ್ದಾರೆ.



























