ಪುತ್ತೂರು: ಶೂನ್ಯದಿಂದ ಸಾಧನೆಯ ಶಿಖರಕ್ಕೇರಿದ ಪುತ್ತೂರಿನ ‘ಬಿಂದು’ ಬ್ರ್ಯಾಂಡ್ನ ಸತ್ಯಶಂಕರ ಕೆ. ಸೇರಿದಂತೆ ಕರ್ನಾಟಕದ 26 ಮಂದಿ ಸಾಧಕರ ಜೀವನಗಾಥೆ ಒಳಗೊಂಡಿರುವ ‘ಕನ್ನಡಪ್ರಭ’ ದಿನಪತ್ರಿಕೆಯ ಚೊಚ್ಚಲ ಪ್ರಕಟಣೆಯಾದ ‘ಗೆದ್ದವರ ಸಿದ್ಧ ಸೂತ್ರ’- A Text Book of Success ಕೃತಿಯನ್ನು ಬೆಂಗಳೂರು ಲೋಕಭವನದ ಬ್ಯಾಂಕ್ವೆಂಟ್ ಹಾಲ್ನಲ್ಲಿ ರಾಜ್ಯಪಾಲ ಥಾವರ್ಚಂದ್ ಗೆಹಲೋಟ್ ಶುಕ್ರವಾರ ಲೋಕಾರ್ಪಣೆಗೊಳಿಸಿದರು.
ಈ ಸಂದರ್ಭ ಮಾತನಾಡಿದ ಅವರು, ಈ ಕೃತಿಯು ಪ್ರಧಾನಿ ನರೇಂದ್ರ ಮೋದಿ ಅವರ ನವಭಾರತದ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ. ವಿವಿಧ ಕ್ಷೇತ್ರಗಳಲ್ಲಿ ಅಸಮಾನ್ಯ ಸಾಧನೆ ಮಾಡಿದವರ ಸತ್ಯ ಕಥೆಗಳನ್ನು ಸಂಗ್ರಹಿಸಿ ಪ್ರಕಟಿಸಿರುವ ‘ಕನ್ನಡಪ್ರಭ’ದ ಕಾರ್ಯ ಶ್ಲಾಘನೀಯ. ಈ ಕೃತಿ ಯುವ ಜನಾಂಗಕ್ಕೆ ಸ್ಫೂರ್ತಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು
ಈ ಪುಸ್ತಕದಲ್ಲಿರುವ ಜೀರೋದಿಂದ ಹೀರೋ ಆಗಿರುವ ಸತ್ಯಶಂಕರ ಕೆ. ಸೇರಿದಂತೆ 26 ಮಂದಿ ಸಾಧಕರು ಯಶಸ್ಸಿನ ಜೀವಂತ ಉದಾಹರಣೆಯಾಗಿದ್ದಾರೆ. ಇವರ ಹೋರಾಟದ ಹಾದಿ ‘ಆತ್ಮನಿರ್ಭರ ಭಾರತ’ಕ್ಕೆ ನೀಡಿದ ದೊಡ್ಡ ಕೊಡುಗೆಯಾಗಿದೆ. ಬಡತನ, ಸಾಮಾಜಿಕ ಅಡೆತಡೆ ಮತ್ತು ಕಷ್ಟಗಳ ನಡುವೆಯೂ ದೃಢಸಂಕಲ್ಪದಿಂದ ಕನಸು ನನಸು ಮಾಡಿಕೊಂಡ ಇವರ ಕಥೆಗಳು ಇಂದಿನ ಪೀಳಿಗೆಗೆ ದಾರಿದೀಪವಾಗಲಿದೆ ಎಂದು ರಾಜ್ಯಪಾಲರು ಆಶಿಸಿದರು.
ಸತ್ಯಶಂಕರ ಸಾಧನೆ ಪ್ರಸ್ತಾಪಿಸಿದ ರಾಜ್ಯಪಾಲರು ‘ಗೆದ್ದವರ ಸಿದ್ಧ ಸೂತ್ರ’ ಕೃತಿಯಲ್ಲಿ ದಾಖಲಾಗಿರುವ ಸತ್ಯಶಂಕರ ಸಹಿತ ಕೆಲವು ಪ್ರಮುಖ ಸಾಧಕರನ್ನು ಉದಾಹರಿಸಿ ರಾಜ್ಯಪಾಲರು ಮಾತನಾಡಿದರು. ‘ಆಟೋ ಚಾಲಕನಿಂದ ಅಂತಾರಾಷ್ಟ್ರೀಯ ಗುಣಮಟ್ಟದ ಪಾನೀಯ ಬ್ರ್ಯಾಂಡ್ ಸೃಷ್ಟಿಸಿದ ಸತ್ಯಶಂಕರ, ಕಾಂತಾರ ಚಿತ್ರದ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿನ ರಿಷಬ್ ಶೆಟ್ಟಿ….. ಮುಂತಾದವರು ನಮಗೆಲ್ಲ ಮಾದರಿ’ ಎಂದರು.
ಈ ವೇಳೆ ಕನ್ನಡಪ್ರಭ-ಏಷ್ಯಾನೆಟ್ ಸುವರ್ಣ ನ್ಯೂಸ್ ಸಮೂಹ ಸಂಪಾದಕೀಯ ನಿರ್ದೇಶಕ ರವಿ ಹೆಗಡೆ ಹಾಗೂ ಪುರವಣಿ ಸಂಪಾದಕ ಜೋಗಿ ಇದ್ದರು.‘ಗೆದ್ದವರ ಸಿದ್ಧ ಸೂತ್ರ’- A Text Book of Success ಕೃತಿಯಲ್ಲಿ ಸತ್ಯಶಂಕರ ಕೆ. ಅವರು ‘ಬಿಂದು’ ಉತ್ಪನ್ನವನ್ನು ಜಾಗತಿಕ ಬ್ರ್ಯಾಂಡ್ ಆಗಿ ರೂಪಿಸಿದ ಬಗೆಯ ಸಮಗ್ರ ಚಿತ್ರಣ ಇದೆ. ಬಿಂದು ಉತ್ಪನ್ನಗಳಿಗೆ ಸಿಕ್ಕಿದ ಮನ್ನಣೆ, ಬಿಂದುವಿನ ಎಲ್ಲ ಉತ್ಪನ್ನಗಳ ಪರಿಚಯ ಸೇರಿದಂತೆ ಸಾಧಕರ ಸಾಧನೆಯ ವಿವರ ಕೃತಿಯಲ್ಲಿ ಮೂಡಿಬಂದಿದೆ.

























