ಪುತ್ತೂರು: ಕಬಕದಿಂದ ಕುಡೇರಪಡ್ಡು, ಅರ್ಕ, ಬಟ್ರುಪ್ಪಾಡಿ, ಕೊಡಿಪ್ಪಾಡಿ, ಕೊಂಟ್ರುಪ್ಪಾಡಿ ಮತ್ತು ಕುಡೇರಪಡುವಿನಿಂದ ಓಜಾಲ, ಕುಂಡಡ್ಕ ರಸ್ತೆಯು ಸಂಪೂರ್ಣ ಜಖಂಗೊಂಡಿದೆ.
ಈ ಕುರಿತು ಶಾಸಕರು ಸಹಿತ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಲಾಗಿದೆ. ಇಲಾಖೆಯ ಗಮನಕ್ಕೆ ತರಲಾಗಿದೆ. ಆದರೆ ಕೇವಲ ಬ್ಯಾನರ್ನಲ್ಲಿ ಮಾತ್ರ ಅನುದಾನ ಬಿಡುಗಡೆಯಾಗಿದ್ದು ಇಲ್ಲಿನ ತನಕ ಯಾವುದೇ ರಸ್ತೆ ಅಭಿವೃದ್ಧಿಯಾಗಿಲ್ಲ. ಹಾಗಾಗಿ ಗ್ರಾಮಸ್ಥರೆಲ್ಲ ಸೇರಿಕೊಂಡು ನಾವು ಪ್ರತಿಭಟನೆಗೆ ಸಿದ್ಧತೆ ನಡೆಸುತ್ತಿದ್ದೇವೆ ಎಂದು ಕಬಕ ಗ್ರಾ.ಪಂ ಮಾಜಿ ಸದಸ್ಯ ಸಾಮಾಜಿಕ ಹೋರಾಟಗಾರ ಚಂದ್ರಶೇಖರ್ ಗೌಡ ಅವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.

ಕಬಕ ಕೊಡಿಪ್ಪಾಡಿ ಮತ್ತು ಕುಳ ಗ್ರಾಮಗಳ ಗ್ರಾಮೀಣ ಪ್ರದೇಶದ ಸಾರ್ವಜನಿಕ ಸಂಪರ್ಕ ರಸ್ತೆ ಸುಮಾರು 4ಸಾವಿರಕ್ಕೂ ಮಿಕ್ಕಿ ಜನಸಂಖ್ಯೆ ಇರುವ ಪ್ರದೇಶವಾಗಿದೆ. ಈ ರಸ್ತೆಯಲ್ಲೇ ಅತಿ ಹೆಚ್ಚು ವಾಹನ ಸಂಚಾರವಿದೆ. ಆದರೆ ಸುಗಮ ಸಂಚಾರಕ್ಕೆ ಯೋಗ್ಯವಾಗಿಲ್ಲ. ರಸ್ತೆಯ ಟಾರು ಸಂಪೂರ್ಣ ಕಿತ್ತು ಹೋಗಿದ್ದು, ರಸ್ತೆಯಲ್ಲಿ ಹೊಂಡಗಳು ನಿರ್ಮಾಣ ಆಗಿದೆ. ಈ ಕುರಿತು 2025ರಲ್ಲೇ ಮನವಿ ಸಲ್ಲಿಸಲಾಗಿತ್ತು. ದ.ಕ.ಜಿ.ಪಂ ಇಂಜಿನಿಯರಿಂಗ್ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರಸ್ತೆಯ ಅಭಿವೃದ್ಧಿಯ ಸಲುವಾಗಿ ರೂ.50ಲಕ್ಷ ಅನುದಾನ ಅಗತ್ಯ ಇರುವುದಾಗಿ ರೇಖಾ ಅಂದಾಜಪಟ್ಟಿ ತಯಾರಿಸಿ ಇಂಜಿನಿಯರಿಂಗ್ ವಿಭಾಗದಿಂದ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಆದರೆ ಸರಕಾರ ಇದನ್ನು ನಿರ್ಲಕ್ಷಿಸಿದೆ. ಶಾಸಕರು ಕೊಡಿಪ್ಪಾಡಿ ಗ್ರಾಮದ ಅರ್ಕ ರಸ್ತೆ ಅಭಿವೃದ್ಧಿಗೆ ರೂ.25ಲಕ್ಷ ರೂಪಾಯಿ ಅನುದಾನ ಒದಗಿಸಿದ ಕುರಿತು ಶಾಸಕರಿಗೆ ಸಹಿತ ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪದ್ಮನಾಭ ಪೂಜಾರಿ, ವಲಯ ಕಾಂಗ್ರೆಸ್ ಅಧ್ಯಕ್ಷ ಕೇಶವ ಪೂಜಾರಿ, ಬೂತ್ ಅಧ್ಯಕ್ಷ ಇಬ್ರಾಹಿಂ ಕಲಂದಡ್ಕ ಅವರಿಗೆ 2025ರ ಡಿ.22ಕ್ಕೆ ಪತ್ರಿಕೆಯಲ್ಲಿ ಅಭಿನಂದನೆ ಜಾಹಿರಾತು ನೀಡಿದ್ದರು. ಅಭಿನಂದನೆ ಹಾಕಿ ಒಂದೂವರೆ ವರ್ಷ ಆದರೂ ಇನ್ನೂ ರಸ್ತೆ ಅಭಿವೃದ್ಧಿ ಕಂಡಿಲ್ಲ. ಕಳೆದ ಮೂರು ವರ್ಷದಿಂದ ಕೊಡಿಪ್ಪಾಡಿ ಗ್ರಾ.ಪಂಗೆ ಒಂದು ರೂಪಾಯಿ ಅನುದಾನ ನೀಡಿಲ್ಲ. ಅಭಿನಂದನೆ ಕೋರಿ ಬ್ಯಾನರ್ ಹಾಕಿ ಬ್ಯಾನರ್ ಹರಿದು ಹೋದರೂ ಅನುದಾನ ಬಂದಿಲ್ಲ. ಮುಂದೆ ಜಿಲ್ಲಾಧಿಕಾರಿ,ಪೊಲೀಸ್ ವರಿಷ್ಟಾಧಿಕಾರಿ ಮತ್ತು ಸಹಾಯಕ ಕಮೀಷನರ್ಗೆ ಮನವಿ ನೀಡಿ ನಾವು ಹೋರಾಟ ಮಾಡಲಿದ್ದೇವೆ ಎಂದು ಅವರು ಹೇಳಿದರು.
ಕೊಡಿಪ್ಪಾಡಿ ಗ್ರಾಮದಲ್ಲಿ ಒಳರಸ್ತೆಗೆ ಮಾತ್ರ ಅನುದಾನ ನೀಡಲಾಗಿದೆ. ಒಳರಸ್ತೆಯನ್ನು ಸಂಪರ್ಕಿಸುವ ಮುಖ್ಯರಸ್ತೆಗೆ ಅನುದಾನ ನೀಡುತ್ತಿಲ್ಲ. ರಿಕ್ಷಾ ಚಾಲಕರು ಈ ರಸ್ತೆಯಲ್ಲಿ ಬರಲು ಹಿಂದೇಟು ಹಾಕುತ್ತಿದ್ದಾರೆ. ಜೊತೆಗೆ ಬೆಳಗ್ಗೆ ಮತ್ತು ಸಂಜೆ ಬರುವ ಸರಕಾರಿ ಬಸ್ ರಸ್ತೆಯಲ್ಲಿ ಬಸ್ ಓಡಿಸುವುದು ಕಷ್ಟ ಎಂದು ಕೆಲವೊಮ್ಮೆ ಬರುವುದಿಲ್ಲ. ಪಂಚಾಯತ್ನಲ್ಲಿ ಆದಾಯ ಇಲ್ಲ. ಆದರೂ ಸಣ್ಣಪುಟ್ಟ ಕೆಲಸ ಮಾಡಲಾಗುತ್ತಿದೆ ಎಂದು ಗ್ರಾ.ಪಂ ಮಾಜಿ ಸದಸ್ಯರಾದ ಸ್ಮಿತಾ ಕೊಡಿಪ್ಪಾಡಿ ಮತ್ತು ಗಿರಿಧರ ಗೌಡ ಗೋಮುಖ ಅವರು ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಕಬಕ ಜೈಹಿಂದ್ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಧನಂಜಯ ಗೌಡ,ಗ್ರಾ.ಪಂ ಮಾಜಿ ಸದಸ್ಯರಾದ ಸ್ಮಿತಾ ಕೊಡಿಪ್ಪಾಡಿ ಮತ್ತು ಗಿರಿಧರ ಗೌಡ ಗೋಮುಖ, ಸದಸ್ಯರಾದ ಮುರಳಿಧರ ಗೌಡ, ಹರೀಶ್ ನಾಯ್ ಕೊಡಿಪ್ಪಾಡಿ ಉಪಸ್ಥಿತರಿದ್ದರು

























