ಪುತ್ತೂರು: ಅಕ್ರಮ ಸಕ್ರಮ ಕಡತವಿಲೇವಾರಿ ಮಾಡುವಾಗ , 94 ಸಿ ಸಿಸಿ ಹಕ್ಕು ಪತ್ರ ವಿತರಣೆ ಮಾಡುವಾಗ ಮತ್ತು ಇತರೆ ಅಭಿವೃದ್ದಿ ಕೆಲಸ ಮಾಡಿದಾಗ ಶಾಸಕ ಅಶೋಕ್ ರೈಯವರು ಜನರ ಬಳಿ ವೋಟು ಕೇಳುತ್ತಾರೆ ಎಂದು ಮೊನ್ನೆ ಬಿಜೆಪಿಯವರು ಆರೋಪ ಮಾಡಿದ್ದರು, ಅಶೋಕ್ ರೈ ಜನರ ಬಳಿ ವೋಟು ಕೇಳಿದ್ದು ನಿಜ ಆದರೆ ನಿಮ್ಮ ಹಾಗೆ ಬಡವರ ಬಳಿ ಹಣ ಕೇಳಿಲ್ಲ ಎಂದು ಶಾಸಕ ಅಶೋಕ್ ರೈ ತಿರುಗೇಟು ನೀಡಿದ್ದಾರೆ.
ಅವರು ನೆಟ್ಟಣಿಗೆ ಮುಡ್ನೂರು ಗ್ರಾಪಂ ಕಚೇರಿ ಸಭಾಂಗಣದಲ್ಲಿ ನಡೆದ 25ನೇ ಅಕ್ರಮ ಸಕ್ರಮ ಬೈಠಕ್ ಉದ್ಘಾಟಿಸಿ ಮಾತನಾಡಿದರು.
ಅಕ್ರಮ ಸಕ್ರಮ ಮಾಡುವುದಕ್ಕೆ , 94 ಸಿ ಹಕ್ಕು ಪತ್ರ ನೀಡಲು ಬಿಜೆಪಿ ಶಾಸಕರು ಎಲ್ಲರಿಂದಲೂ ಹಣ ಪಡೆದುಕೊಂಡಿದ್ದಾರೆ, ಹಣ ಕೊಡದವರ ಯಾವುದೇ ಕಡತವನ್ನು ಇವರು ವಿಲೇವಾರಿ ಮಾಡಿಯೇ ಇಲ್ಲ. ನಾನು ಶಾಸಕನಾದ ಬಳಿಕ ಒಬ್ಬೊಬ್ಬರೇ ಬಂದು ನನ್ನಲ್ಲಿ ವಿಷಯ ಹೇಳಿದ್ದಾರೆ. ನನ್ನ ಬಳಿ ಬಿಜೆಪಿ ಶಾಸಕರ ಕಥೆ ಹೇಳಿದವರ ಪೈಕಿ ಬಿಜೆಪಿಯವರೂ ಇದ್ದಾರೆ, ಅವರ ಶಕ್ತಿ ಕೇಂದ್ರದ ಅಧ್ಯಕ್ಷರುಗಳೂ ಇದ್ದಾರೆ ಅವರ ಪಕ್ಷದವರೇ ಆದರೂ ಹಣ ಕೊಡದ ಕಾರಣ ಕಡತ ವಿಲೇವಾರಿ ಮಾಡಿಕೊಟ್ಟಿಲ್ಲ, ಬಡವರ ಕಡತಕ್ಕೆ ಕುಮ್ಕಿ ಎಂದು ನಾಮಕರಣ ಮಾಡಿ ಜೀವ ಮಾನದಲ್ಲಿ ಅವರಿಗೆ ಅಕ್ರಮ ಸಕ್ರಮ ಮಾಡದ ಹಾಗೆ ಮಾಡಿದ್ದಾರೆ ಇದು ಮಹಾ ಅನ್ಯಾಯವಾಗಿದೆ ಎಂದ ಶಾಸಕರು ನಾನು ಬಡವರಿಗೆ ಅನ್ಯಾಯ ಮಾಡಿಲ್ಲ, ಪಕ್ಷ ಬೇದವಿಲ್ಲದೆ, ಧರ್ಮ ಬೇಧವಿಲ್ಲದೆ ಅರ್ಹರಿಗೆ ಅಕ್ರಮ ಸಕ್ರಮ ಮಾಡಿಕೊಟ್ಟಿದ್ದೇನೆ ಎಂದು ಖಾರವಾಗಿಯೇ ಹೇಳಿದರು.
ಬಡವರಿಗೆ ಮೋಸ ಮಾಡಬೇಡಿ: ಭಾವುಕರಾದ ಶಾಸಕರು
ಕಳೆದ ಹಲವಾರು ವರ್ಷಗಳಿಂದಮನೆ ಕಟ್ಟಿ ಮಾಡಿಕೊಂಡಿರುವ ಬಡವರು ತಮ್ಮ ಸ್ವಾಧೀನದಲ್ಲಿರುವ 9 ಸೆಂಟ್ಸ್ ಜಾಗಕ್ಕೆ ಹಕ್ಕು ಪತ್ರ ಕೇಳುತ್ತಾರೆ ಅದಕ್ಕಾಗಿ ಅವರನ್ನು ಅಲೆದಾಡಿಸಬೇಡಿ, ಕದ್ದು ಮುಚ್ಚಿ ಅವರಿಂದ ಹಣ ಕೇಳಬೇಡಿ. ಬಡವರ ಕಷ್ಟ ಏನೆಂಬುದನ್ನು ನಾನು ಚಿಕ್ಕವನಿರುವಾಗ ಅನುಭವಿಸಿದ್ದೇನೆ ಎಂದ ಶಾಕರು ತಮ್ಮ ಬಾಲ್ಯ ಪ್ರಾಯದಲ್ಲಿ ಕೊಟ್ಟಿಗೆಯ ಜೀವನ ನೆನೆದು ಭಾವುಕರಾದರು. ಯಾರಾದರೂ ಬಡವರಿಂದ ಹಣ ಪಡೆದುಕೊಂಡಿದ್ದರೆ ಅದನ್ನು ಅವರಿಗೆ ಮರಳಿಸಿ ಯಾಕೆಂದರೆ ಅವರ ಬೆವರು ಸುರಿಸಿ ಮಾಡಿದ ಹಣ ಆ ಹಣವನ್ನು ಯಾರೂ ದೋಚುವ ಕೆಲಸ ಮಾಡಬೇಡಿ ಎಂದು ಶಾಸಕರು ಮನವಿ ಮಾಡಿದರು. ಬಡವರಿಗೆ ದ್ರೋಹ ಮಾಡಿದವ ಏಳಿಗೆಯಾಗುವುದಿಲ್ಲ ಎಂದು ಕೂಡಾ ಹೇಳಿದರು.
9 ಸೆಂಟ್ ಜಾಗದವಿದೆ 5 ಸೆಂಟ್ ಕೊಟ್ಟಿದ್ದು ಯಾಕೆ?
ನೆಟ್ಟಣಿಗೆ ಮುಡ್ನೂರು ಗ್ರಾಮದ ಮಹಿಳೆಯೋರ್ವರಿ ೯ ಸೆಂಟ್ಸ್ ಜಾಗ ಇದ್ದರೂ ಗ್ರಾಮಕರಣಿಕ 5 ಸೆಂಟ್ ಜಾಗ 94 ಸಿಗೆ ಮಂಜೂರು ಮಾಡಿದ್ದರು. ಈ ಬಗ್ಗೆ ಮಹಿಳೆ ಶಾಸಕರಲ್ಲಿ ದೂರು ನೀಡಿದರು. ತಕ್ಷಣ ಗ್ರಾಮಕರಣಿಕರನ್ನು ಪ್ರಶ್ನಿಸಿದ ಶಾಸಕರು ಅವರ ಬಳಿ 9 ಸೆಂಟ್ ಜಾಗ ಇದ್ದಲ್ಲಿ 9 ಸೆಂಟ್ ಕೊಡಬೇಕು . 5 ಸೆಂಟ್ ಮಾಡಿಕೊಡ್ಲಿಕ್ಕೆ ನೀನು ಯಾರು? ಬಡವರ ಬಳಿ ಇರುವುದೇ 9 ಸೆಂಟ್ ಜಾಗ ಅದಕ್ಕೂ ಯಾಕೆ ಕತ್ತರಿ ಹಾಕುತ್ತೀಯ? 9 ಸೆಂಟ್ ಹಕ್ಕು ಪತ್ರ ಪಡೆದರೆ ಏನಾದರೂ ಪ್ರಯೋಜನವಾಗುತ್ತದೆ ಅವರಿಗೆ 9 ಸೆಂಟ್ ಮಾಡಿಕೊಡಿ ಎಂದು ೫ ಸೆಂಟ್ ಜಾಗದ ಹಕ್ಕು ಪತ್ರವನ್ನು ಶಾಸಕರು ನೀಡದೇ ಮುಂದಿನ ಬೈಠಕ್ನಲ್ಲಿ ಇವರ ಹಕ್ಕು ಪತ್ರ ರೆಡಿಮಾಡುವಂತೆ ವಿ ಎ ಗೆ ಸೂಚನೆ ನೀಡಿದರು. ಇದೇ ರೀತಿ ಇನ್ನೊಬ್ಬರಿಗೆ 3 ಸೆಂಟ್ ಮಂಜೂರು ಮಾಡಿದ್ದನ್ನು ಶಾಸಕರು ತಡೆ ಹಿಡಿದು ಮುಂದಿನ ಬೈಠಕ್ನಲ್ಲಿ ಹಕ್ಕು ಪತ್ರ ಕೊಡುವುದಾಗಿ ಹೇಳಿದರು.
ನಿವೇಶನವೇ ಇಲ್ಲದವರಿಗೆ ನಿವೇಶನ ಕೊಡುತ್ತೇನೆ
ಯಾವುದೇ ಗ್ರಾಮದಲ್ಲಿ ಯಾರಿಗಾದರೂ ನಿವೇಶನವೇ ಇಲ್ಲದೇ ಇದ್ದರೆ ಅಂಥವರಿಗೆ ೨.೭೫ ಸೆಂಟ್ ಜಾಗವನ್ನು ನಾನು ಕೊಡಿಸ್ತೇನೆ. ಸೋಮವಾರ ಕಚೇರಿಗೆ ಅರ್ಜಿ ಸಮೇತವಾಗಿ ಬರಬೇಕು. ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಯಾರೂ ಕೂಡಾ ನಿವೇಶನವಿಲ್ಲದೆ ಇರಬಾರದು ಎಂಬುದೇ ನನ್ನ ಉದ್ದೇಶ ಇದರ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಇಂಥಹ ಸರಕಾರ ಯಾವತ್ತೂ ಬಂದಿಲ್ಲ
ಕರ್ನಾಟಕದ ಕಾಂಗ್ರೆಸ್ ಸರಕಾರದ ಮಾದರಿ ಸರಕಾರ ದೇಶದಲ್ಲಿ ಈ ಹಿಂದೆ ಎಲ್ಲಿಯೂ ಬಂದಿಲ್ಲ ಇನ್ನು ಬರುವುದೂ ಇಲ್ಲ. ಸರಕಾರದ ಪಂಚ ಗ್ಯಾರಂಟಿ ಯೋಜನೆಯು ಪ್ರತೀ ಕುಟುಂಬಕ್ಕೂ ನೆರವಾಗಿದೆ. ನೇರವಾಗಿ ಜನರ ಖಾತೆಗೆ ಹಣ ಜಮೆಯಾಗುತ್ತಿದೆ ಇದರಿಂದ ಒಂದು ಸಣ್ಣ ಕುಟುಂಬ ಬದುಕುವಂತಾಗಿದೆ. ಬಸ್ ಫ್ರೀ, ಕರೆಂಟ್ ಫ್ರೀ, ಅಕ್ಕಿ ಫ್ರೀ ಇದೆಲ್ಲವೂ ಕಾಂಗ್ರೆಸ್ ಸರಕಾರದ ಯೋಜನೆಯಾಗಿದೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಮತಚಲಾಯಿಸುವಂತೆ ಮನವಿ ಮಾಡಿದರು.
ಜನ ಸೇವೆಯೇ ಶಾಸಕರ ಧ್ಯೇಯ; ಬಡಗನ್ನೂರು
ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ಮಹಮ್ಮದ್ ಬಡಗನ್ನೂರು ಮಾತನಾಡಿ ಜನ ಸೇವೆಯೇ ಶಾಸಕರ ಮುಖ್ಯ ಧ್ಯೇಯವಾಗಿದೆ. ಹೊಸ ಸರಕಾರ ನಾಳೆ ಅಧಿಕಾರಕ್ಕೆ ಬರುವ ಸಿದ್ದತೆಯಲ್ಲಿದ್ದು, ಶಾಸಕರುಗಳು ಸಚಿವ ಸ್ಥಾನಕ್ಕಾಗಿ ಲಾಭಿ ನಡೆಸುತ್ತಿರುವ ವೇಳೆ ಅಶೋಕ್ ರೈಗಳು ನೆಟ್ಟಣಿಗೆ ಮುಡ್ನೂರಿನಲ್ಲಿ ಅಕ್ರಮ ಸಕ್ರಮ ಬೈಠಕ್ ಮಾಡುತ್ತಿದ್ದಾರೆ ಇಂಥಹ ಶಾಸಕರನ್ನು ಪಡೆದ ಧನ್ಯರು ಎಂದು ಹೇಳಿದರು. ಅಶೋಕ್ ರೈಯವರು ಮುಂದಿನ ಮೂರು ಅವಧಿಗೆ ಶಾಸಕರಾದರೆ ಮುಂದಿನ 30 ವರ್ಷ ಕ್ಷೇತ್ರದ ಜನತೆ , ಬಡವರು ನೆಮ್ಮದಿಯ ಜೀವನ ನಡೆಸಬಹುದಾಗಿದೆ , ಶಾಸಕರನ್ನು ಬೆಂಬಲಿಸುವ ಮೂಲಕ ಮುಂದಿನ ಚುನಾವಣೆಯಲ್ಲಿ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಅಕ್ರಮ ಸಕ್ರಮ ಸಮಿತಿ ಕಾರ್ಯದರ್ಶಿ ತಹಶಿಲ್ದಾರ್ ಕೂಡ್ಲಿಗಿ, ಸದಸ್ಯರಾದ ರಾಮಣ್ಣ ಪಿಲಿಂಜ, ರೂಪರೇಖಾ ಆಳ್ವ ಉಪಸ್ಥಿತರಿದ್ದರು. ಕಂದಾಯ ನಿರೀಕ್ಷಕರಾದ ಗೋಪಾಲ ಸ್ವಾಗತಿಸಿದರು. ಗ್ರಾಮಕರಣಿಕ ನರಿಯಪ್ಪ ವಂದಿಸಿದರು. ಶಾಸಕರ ಕಚೇರಿ ಸಿಬಂದಿ ಪ್ರವೀಣ್ , ಕೃಷ್ಣಪ್ರಸಾದ್ ಬೊಳ್ಳಾವು ,ಪಿ ಎ ರಂಜಿತ್ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.

























