ಬಂಟ್ವಾಳ: ಹಿಂದು ಜಾಗರಣ ವೇದಿಕೆ ಬಂಟ್ವಾಳ ತಾಲ್ಲೂಕು ವತಿಯಿಂದ ಶ್ರೀ ಕ್ಷೇತ್ರ ಕಾರಿಂಜೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ವೀರೇಂದ್ರ ಅಮೀನ್ ಅವರಿಗೆ ಮನವಿಪತ್ರ ಸಲ್ಲಿಸಿ, ವ್ಯವಸ್ಥಾಪನಾ ಸಮಿತಿ ಸದಸ್ಯ ಪ್ರಶಾಂತ್ ನಾಯಕ್ ನೆಲ್ಲಿಗುಡ್ಡೆ ಅವರನ್ನು ವ್ಯವಸ್ಥಾಪನಾ ಸಮಿತಿಯಿಂದ ಕೈಬಿಡುವಂತೆ ಆಗ್ರಹಿಸಲಾಯಿತು.
ಮನವಿಪತ್ರದಲ್ಲಿ, 2026ರ ಜೂನ್ ತಿಂಗಳಲ್ಲಿ ಪ್ರಶಾಂತ್ ನಾಯಕ್ ನೆಲ್ಲಿಗುಡ್ಡೆ ಅವರ ವಿರುದ್ಧ ದನವನ್ನು ಮೋಸದ ಮೂಲಕ ಪಡೆದುಕೊಂಡು ಹಿಂದಿರುಗಿಸದೆ ಅನ್ಯಧರ್ಮೀಯರಿಗೆ ಮಾರಾಟ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿರುವುದನ್ನು ಉಲ್ಲೇಖಿಸಲಾಗಿದೆ. ಇಂತಹ ಗಂಭೀರ ಆರೋಪ ಎದುರಿಸುತ್ತಿರುವ ವ್ಯಕ್ತಿಯನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯಲ್ಲಿ ಮುಂದುವರಿಸುವುದು ದೇವಸ್ಥಾನದ ಗೌರವ ಹಾಗೂ ಭಕ್ತರ ಭಾವನೆಗಳಿಗೆ ಧಕ್ಕೆಯಾಗುವ ಸಾಧ್ಯತೆ ಇರುವುದರಿಂದ ಅವರನ್ನು ಸಮಿತಿಯಿಂದ ಕೈಬಿಡುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆ ಮಂಗಳೂರು ಗ್ರಾಮಾಂತರ ಜಿಲ್ಲೆಯ ಸಂಯೋಜಕರಾದ ನರಸಿಂಹ ಮಾಣಿ, ಸಹ ಸಂಯೋಜಕರಾದ ಪುಷ್ಪರಾಜ್ ಕಮ್ಮಾಜೆ, ಕಾರ್ಯಕಾರಿಣಿ ಸದಸ್ಯರಾದ ಅನೂಪ್ ಮಯ್ಯ, ಹಿಂದೂ ಜಾಗರಣ ವೇದಿಕೆ ಬಂಟ್ವಾಳ ತಾಲ್ಲೂಕಿನ ಸಂಯೋಜಕರಾದ ಪ್ರಣೀತ್ ವಾಮದಪದವು, ಸಹ ಸಂಯೋಜಕರಾದ ದಿನೇಶ್ ಬಡೆಗೊಟ್ಟು, ದೂರುದಾರರಾದ ರವಿ ಶರ್ಬೆಟ್ಟು ಹಾಗೂ ಕಾರಿಂಜ ಕ್ಷೇತ್ರದ ಸದಸ್ಯರು ಉಪಸ್ಥಿತರಿದ್ದರು. ಮನವಿಪತ್ರ ಸ್ವೀಕರಿಸಿದ ಅಧ್ಯಕ್ಷರು ವಿಷಯವನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
























