ಕರ್ನಾಟಕ ರಾಜ್ಯ ಸರ್ಕಾರವು ಮಾದಕ ದ್ರವ್ಯಗಳ ವಿರುದ್ಧ ಶೂನ್ಯ-ಸಹಿಷ್ಣುತೆ (Zero Tolerance) ನೀತಿಯನ್ನು ಘೋಷಿಸಿದ್ದು, 2028 ನೇ ಇಸವಿಯೊಳಗೆ ಕರ್ನಾಟಕವನ್ನು ಮಾದಕ ದ್ರವ್ಯ ಮುಕ್ತ ರಾಜ್ಯವನ್ನಾಗಿ ಮಾಡುವವರೆಗೆ ಈ ಹೋರಾಟವು ನಿರಂತರವಾಗಿ ಮುಂದುವರಿಯಬೇಕಾದ ಯುದ್ಧವೆಂದು ಪದೇ ಪ್ರತಿಪಾದಿಸಿದೆ.
“ಆಪರೇಷನ್ ರೈಸ್ (Operation RISE)” ಎಂಬ ಹೆಸರಿನಲ್ಲಿ ಕರ್ನಾಟಕ ಸರ್ಕಾರವು ರಾಜ್ಯವ್ಯಾಪಿ ಮಾದಕ ದ್ರವ್ಯ ವಿರೋಧಿ ಅಭಿಯಾನವನ್ನು ದಿನಾಂಕ 30-06-2026 ರಂದು ಅಧಿಕೃತವಾಗಿ ಆರಂಭಿಸಲಾಗಿದೆ. ಇದು ರಾಜ್ಯದ “ಮಾದಕ ದ್ರವ್ಯಗಳ ವಿರುದ್ಧದ ಹೋರಾಟ”ವನ್ನು ಸಮನ್ವಯಿತ ಜಾರಿ ಕ್ರಮಗಳು, ತಡೆಗಟ್ಟುವಿಕೆ, ಜಾಗೃತಿ ಹಾಗೂ ಪುನರ್ವಸತಿ ಕಾರ್ಯಕ್ರಮಗಳ ಮೂಲಕ ಮತ್ತಷ್ಟು ಬಲಪಡಿಸುವ ಉದ್ದೇಶವನ್ನು ಹೊಂದಿದೆ. ಈ ಮೂಲಕ ಮಾದಕ ವಸ್ತುಗಳ ಅಕ್ರಮ ಜಾಲಗಳ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಯುವಜನರಲ್ಲಿ ಜಾಗೃತಿ ಮೂಡಿಸುವುದು ಹಾಗೂ ವ್ಯಸನಿಗಳಿಗೆ ಸೂಕ್ತ ಪುನರ್ವಸತಿ ಸೇವೆಗಳನ್ನು ಒದಗಿಸುವುದಕ್ಕೆ ಆದ್ಯತೆ ನೀಡಲಾಗಿದೆ.
‘ಬೇಡ ಬ್ರೋ‘ ಅಭಿಯಾನವು ವಿದ್ಯಾರ್ಥಿಗಳು ಹಾಗೂ ಯುವ ಉದ್ಯೋಗಿಗಳನ್ನು ಗುರಿಯಾಗಿಸಿಕೊಂಡಿದ್ದು, ಮಾದಕ ವ್ಯಸನದಿಂದ ದೂರವಿರಲು ಪ್ರೇರೇಪಿಸುವುದರ ಜೊತೆಗೆ ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸುವ ಮೂಲಕ ಮಾದಕ ವಸ್ತುಗಳ ಬೇಡಿಕೆಯನ್ನು (Demand Reduction) ಕಡಿಮೆ ಮಾಡುವ ಉದ್ದೇಶವನ್ನು ಹೊಂದಿರುತ್ತದೆ.
ಈ ಅಭಿಯಾನದ ಅಂಗವಾಗಿ, ಎಲ್ಲಾ ಪೊಲೀಸ್ ಘಟಕಗಳು ನಿಗದಿಪಡಿಸಲಾದ 20 ದಿನಗಳ ಕಾಲಮಿತಿಯೊಳಗೆ ತಮ್ಮ ವ್ಯಾಪ್ತಿಯ ಜಿಲ್ಲೆಗಳು ಹಾಗೂ ತಾಲ್ಲೂಕುಗಳಲ್ಲಿ ಸೂಚಿಸಲಾದ ಚಟುವಟಿಕೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಜೊತೆಗೆ ಶಿಕ್ಷಣ ಸಂಸ್ಥೆಗಳು, ಪೋಷಕರು, ಸಮುದಾಯ ಹಾಗೂ ಆರೋಗ್ಯ ಇಲಾಖೆಗಳ ಸಹಭಾಗಿತ್ವದೊಂದಿಗೆ ಜಾಗೃತಿ ಮತ್ತು ತಡೆಗಟ್ಟುವ ಕಾರ್ಯಕ್ರಮಗಳನ್ನು ವ್ಯಾಪಕವಾಗಿ ಹಮ್ಮಿಕೊಳ್ಳಲಾಗುತ್ತಿದೆ.
ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಅಂಕಿ ಅಂಶಗಳು:
- 2025ನೇ ಸಾಲಿನಲ್ಲಿ ಒಟ್ಟು 717 ಎನ್ಡಿಪಿಎಸ್ (NDPS) ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳಲ್ಲಿ 231 ಮಾರಾಟಗಾರರು ಹಾಗೂ 723 ಗ್ರಾಹಕರು ಒಳಗೊಂಡಿರುತ್ತಾರೆ.
- 2026 ರ ಜುಲೈ 15 ರವರೆಗೆ ಒಟ್ಟು 426 ಎನ್ಡಿಪಿಎಸ್ ಪ್ರಕರಣಗಳು ದಾಖಲಾಗಿದ್ದು, 142 ಮಾರಾಟಗಾರರು ಹಾಗೂ 438 ಗ್ರಾಹಕರು ಒಳಗೊಂಡಿರುತ್ತಾರೆ.
- ಎನ್ಡಿಪಿಎಸ್ ಪ್ರಕರಣಗಳಲ್ಲಿ ಬಂಧಿತರಾದ ಆರೋಪಿತರ ಪೈಕಿ ಪ್ರಸ್ತುತ 95 ಆರೋಪಿತರು ನ್ಯಾಯಾಂಗ ಬಂಧನದಲ್ಲಿದ್ದು, ಇವರಲ್ಲಿ 6 ಮಂದಿ ವಿದೇಶಿ ಪ್ರಜೆಗಳಾಗಿದ್ದಾರೆ.
ರಾಜ್ಯ ಸರ್ಕಾರದ ‘ಆಪರೇಷನ್ RISE’ ಮತ್ತು ‘ಬೇಡ ಬ್ರೋ‘ ಉಪಕ್ರಮಗಳು ಕಾನೂನು ಜಾರಿ, ಸಾರ್ವಜನಿಕ ಜಾಗೃತಿ, ಪುನರ್ವಸತಿ ಹಾಗೂ ಸಮುದಾಯದ ಸಕ್ರಿಯ ಸಹಭಾಗಿತ್ವದ ಮೂಲಕ ಮಾದಕ ದ್ರವ್ಯಗಳ ವಿರುದ್ಧ ಸಮಗ್ರ ಹೋರಾಟವನ್ನು ಮತ್ತಷ್ಟು ಬಲಪಡಿಸುತ್ತಿವೆ. ಈ ಅಭಿಯಾನಗಳು ಸುರಕ್ಷಿತ, ಆರೋಗ್ಯಕರ ಹಾಗೂ ವ್ಯಸನಮುಕ್ತ ಸಮಾಜ ನಿರ್ಮಾಣದತ್ತ ಮಹತ್ವದ ಹೆಜ್ಜೆಯಾಗಿದ್ದು, ಯುವಜನರನ್ನು ಮಾದಕ ವ್ಯಸನದಿಂದ ದೂರವಿರಿಸಿ ಉತ್ತಮ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿವೆ.
ಕೈಗೊಳ್ಳಲಾದ ಹೆಚ್ಚುವರಿ ಉಪಕ್ರಮಗಳು:
- ಮಂಗಳೂರು ನಗರ ವ್ಯಾಪ್ತಿಯ 174 ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ 101 ಶಿಕ್ಷಣ ಸಂಸ್ಥೆಗಳಲ್ಲಿ ‘Anti Drug Committee’ ಗಳನ್ನು ರಚಿಸಲಾಗಿರುತ್ತದೆ.
- ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಸೇರ್ಪಡೆ ಸಮಯ ಸ್ವಯಂ ಪ್ರೇರಿತವಾಗಿ ಘೋಷಣಾ ಪತ್ರ (Undertaking) ಪಡೆಯಲಾಗುತ್ತಿದೆ.
- ಶಿಕ್ಷಣ ಸಂಸ್ಥೆಗಳಲ್ಲಿ ನಿರಂತರವಾಗಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.
- ನಿಯಮಿತವಾಗಿ ವಿದ್ಯಾರ್ಥಿಗಳನ್ನು ಮಾದಕದ್ರವ್ಯ ಸೇವನೆ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.
- ಮಾದಕದ್ರವ್ಯ ಪರೀಕ್ಷೆ ಬಗ್ಗೆ “Mobile Forensic Lab” ನ್ನು ಬಳಕೆ ಮಾಡಲಾಗುತ್ತಿದೆ.
- ಮಾದಕದ್ರವ್ಯ ಸಾಗಾಟ ಮತ್ತು ಸಂಗ್ರಹದ ಪತ್ತೆಗೆ ವಿಶೇಷವಾಗಿ ತರಬೇತಿ ಪಡೆದ (Belgian Melonis) ಶ್ವಾನದಳವನ್ನು ಬಳಸಲಾಗುತ್ತಿದೆ.
























