ಮುಂಬೈ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ ಬೆನ್ನಲ್ಲೇ ಕಾಕ್ರೋಚ್ ಜನತಾ ಪಕ್ಷ (CJP) ಸಂಸ್ಥಾಪಕ ಅಭಿಜಿತ್ ದೀಪ್ಕೆ ಅವರ ತಾಯಿ ಅನಿತಾ ದೀಪ್ಕೆ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
ಅವನಿಗಿನ್ನೂ ಚಿಕ್ಕ ವಯಸ್ಸು. ಆದರೂ ದೇಶದ ಮಟ್ಟದಲ್ಲಿ ದೊಡ್ಡ ಹೋರಾಟ ನಡೆಸಿದ್ದಾನೆ. ಈಗ ಅವನು ಸುರಕ್ಷಿತವಾಗಿ ಮನೆಗೆ ಬರಬೇಕು, ಅದೇ ನಮ್ಮ ಆಸೆ ಎಂದು ಅವರು ಹೇಳಿದ್ದಾರೆ. ಹಲವು ದಿನಗಳಿಂದ ನಡೆಯುತ್ತಿದ್ದ ವಿದ್ಯಾರ್ಥಿ ಹೋರಾಟದ ಬಳಿಕ ಈ ಬೆಳವಣಿಗೆ ನಡೆದಿದ್ದು, ಮಗನ ಬಗ್ಗೆ ಹೆಮ್ಮೆ ಇದೆ ಎಂದು ಅವರು ಭಾವುಕರಾಗಿ ಹೇಳಿದ್ದಾರೆ.
ನನಗೆ ತುಂಬಾ ಸಂತೋಷವಾಗಿದೆ. ನನ್ನ ಮಗನ ಬಗ್ಗೆ ತುಂಬಾ ಹೆಮ್ಮೆ ಇದೆ. ಆದರೆ ಪ್ರತಿಭಟನೆಯ ದಿನಗಳಲ್ಲಿ ಅವನಿಗೆ ಏನಾಗುತ್ತೋ ಎಂಬ ಭಯ ನಮ್ಮನ್ನು ಕಾಡುತ್ತಿತ್ತು. ಅವನ ಮೇಲೆ ಹಲ್ಲೆ ನಡೆದ ಬಳಿಕ ರಾತ್ರಿಯೆಲ್ಲ ನಿದ್ದೆ ಬರುತ್ತಿರಲಿಲ್ಲ, ಊಟ ಸೇರುತ್ತಿರಿಲ್ಲ. ಜೂ. 7ರಿಂದ ನಮ್ಮ ಮನೆಯ ವಾತಾವರಣವೇ ಬದಲಾಗಿತ್ತು ಎಂದು ಅನಿತಾ ದೀಪ್ಕೆ ಹೇಳಿದ್ದಾರೆ. ಆದರೆ, ಕೊನೆಗೂ ಆತ ಅಂದುಕೊಂಡಿದ್ದನ್ನು ಸಾಧಿಸಿದ್ದಾನೆ. ನಮಗೆ ಬಹಳ ಸಂತೋಷವಾಗಿದೆ ಎಂದು ಬಾವುಕ ನುಡಿಗಳನ್ನಾಡಿದರು.
ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ (ಔರಂಗಾಬಾದ್) ನಿವಾಸಿಗಳಾದ ಭಗವಾನ್ ಶಂಕರ್ ದೀಪ್ಕೆ ಮತ್ತು ಅನಿತಾ ದೀಪ್ಕೆ, ದೇಶವ್ಯಾಪಿ ವಿದ್ಯಾರ್ಥಿ ಹೋರಾಟಕ್ಕೆ ನೇತೃತ್ವ ನೀಡಿದ ಅಭಿಜಿತ್ ದೀಪ್ಕೆ ಅವರ ಪೋಷಕರಾಗಿದ್ದಾರೆ.
























