ಲಖನೌ : ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕೋಟ್ಯಾಂತರ ರೂಪಾಯಿ ದೇಣಿಗೆ ವಿಶ್ವದೆಲ್ಲಡೆಯಿಂದ ಹರಿದು ಬಂದಿತ್ತು. ಆ ಹಣ ದುರುಪಯೋಗವಾಗಿದೆ ಎನ್ನುವ ಬಲವಾದ ಸುದ್ದಿಯ ನಡುವೆ, ಬಿಜೆಪಿ ಮಾಜಿ ಸಂಸದರೊಬ್ಬರ ಹೇಳಿಕೆ, ಈ ಅಕ್ರಮದ ಸಂಶಯನ್ನು ಇನ್ನಷ್ಟು ಗಟ್ಟಿಯಾಗುವಂತೆ ಮಾಡಿದೆ.
ಎಷ್ಟು ಹಣ ದುರುಪಯೋಗವಾಗಿದೆ ಎನ್ನುವ ಸಂಪೂರ್ಣ ಮಾಹಿತಿ ನನಲ್ಲಿದೆ. ಆದರೆ, ಸದ್ಯಕ್ಕೆ ಅದ್ಯಾವುದನ್ನೂ ಬಹಿರಂಗ ಪಡಿಸುವ ಪರಿಸ್ಥಿತಿಯಲ್ಲಿ ನಾನಿಲ್ಲ ಎಂದು ಬಿಜೆಪಿಯ ಮಾಜಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್, ಹೊಸ ಬಾಂಬ್ ಸಿಡಿಸಿದ್ದಾರೆ. ಆ ಮೂಲಕ, ಭಕ್ತರು ಕೊಟ್ಟ ದೇಣಿಗೆ ಹಣ ದುರುಪಯೋಗ ಆಗಿದೆ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ.
ಬಂದಿರುವ ದೇಣಿಗೆಯಲ್ಲಿ ದುರುಪಯೋಗ ಮತ್ತು ವಂಚನೆ ನಡೆದಿದೆ ಎನ್ನುವ ಆರೋಪಗಳು ಕೇಳಿ ಬಂದಿವೆ. ಈ ಬಗ್ಗೆ ನನಗೆ ಸಾಕಷ್ಟು ಮಾಹಿತಿಯಿದೆ. ಆದರೆ, ಈ ಬಗ್ಗೆ ಸದ್ಯಕ್ಕಂತೂ ಏನನ್ನೂ ಹೇಳುವ ಪರಿಸ್ಥಿತಿಯಲ್ಲಿ ನಾನಿಲ್ಲ. ಯಾಕೆಂದರೆ, ಅವರಂತಹ ಬಲಿಷ್ಠರ ಮುಂದೆ ನಾನು ತುಂಬಾ ಸಣ್ಣವನು. ಮುಂದೊಂದು ದಿನ ಈ ಬಗ್ಗೆ ಮಾತನಾಡುವೆ” ಎಂದು ಉತ್ತರ ಪ್ರದೇಶದ ಕೇಸರ್’ಗಂಜ್ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಮತ್ತು ಬಿಜೆಪಿ ನಾಯಕ, ಬ್ರಿಜ್ ಭೂಷಣ್ ಹೇಳಿದ್ದಾರೆ.
ದೆಹಲಿಯಲ್ಲಿ ಹತ್ತು ದಿನಗಳ ಕಾಲ ತಂಗಿ, ವಿಷ್ಣೋಹರಪುರದಲ್ಲಿನ ತಮ್ಮ ನಿವಾಸಕ್ಕೆ ವಾಪಸ್ ಆದ ನಂತರ ಬ್ರಿಜ್ ಭೂಷಣ್ ಮಾತನಾಡುತ್ತಿದ್ದರು. ಅಯೋಧ್ಯೆಯ ರಾಮಮಂದಿರದ ಅಕ್ರಮದ ಬಗ್ಗೆ ನಾನೀಗ ಮಾತನಾಡಿದರೆ ನಾನು ಸಂಕಷ್ಟಕ್ಕೆ ಸಿಲುಕುವೆ ಎಂದು ಇವರು ಹೇಳಿದ್ದಾರೆ. ಅವರು ತುಂಬಾ ಶಕ್ತಿಶಾಲಿ ವ್ಯಕ್ತಿಗಳು, ಅವರ ಮುಂದೆ ನಾನು ದುರ್ಬಲ. ಸದ್ಯದ ಮಟ್ಟಿಗೆ ಸತ್ಯವನ್ನು ಮಾತನಾಡುವ ಧೈರ್ಯ ನನಗಿಲ್ಲ ಎಂದು ಬ್ರಿಜ್ ಭೂಷಣ್ ಶರಣ್ ಸಿಂಗ್ ಹೇಳಿದ್ದಾರೆ. ಇವರ ಹೇಳಿಕೆ, ರಾಮಮಂದಿರದ ಅಕ್ರಮದ ಕುರಿತಾದ ಸುದ್ದಿಗೆ ಹೊಸ ಆಯಾಮವನ್ನು ನೀಡಿದೆ.
ಬ್ರಿಜ್ ಭೂಷಣ್ ತಮ್ಮ ಪತ್ರಿಕಾಗೋಷ್ಠಿಯಲ್ಲಿ ಪದೇಪದೇ ’ಅವರು ಬಲಿಷ್ಠರು’ ಎನ್ನುವ ಪದವನ್ನು ಬಳಸಿದ್ದಾರೆ. ಆದರೆ, ಆ ’ಅವರು’ ಯಾರು ಎನ್ನುವುದರ ಬಗ್ಗೆ ಸುಳಿವನ್ನು ಬ್ರಿಜ್ ಭೂಷಣ್ ನೀಡಿಲ್ಲ. ಸತ್ಯ ಹೇಳಿದರೆ ಸಂಕಷ್ಟಕ್ಕೆ ಸಿಲುಕುವೆ ಎಂದು ಬ್ರಿಜ್ ಭೂಷಣ್ ಹೇಳುವ ಮೂಲಕ, ಅಯೋಧ್ಯೆ ರಾಮಮಂದಿರ ದೇಣಿಗೆ ದುರ್ಬಳಕೆ ಆಗಿದೆ ಎನ್ನುವ ಸುದ್ದಿಗೆ ಹೊಸ ಟ್ವಿಸ್ಟ್ ಕೊಟ್ಟಂತಾಗಿದೆ. ದೇಣಿಗೆಯಲ್ಲಿ ಅಕ್ರಮ ನಡೆದಿದೆ ಎಂದು ದೇಶಾದ್ಯಂತ ಭಾರೀ ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲಿ ಬಿಜೆಪಿ ನಾಯಕನ ಹೇಳಿಕೆ ಹೊಸ ತಿರುವನ್ನು ನೀಡುವ ಸಾಧ್ಯತೆಯಿದೆ.

























