ಪುತ್ತೂರು : ಪ್ರಭು ಶ್ರೀರಾಮಚಂದ್ರನ ಬಗ್ಗೆ ಅವಹೇಳನ ಮಾಡಿದ ಪ್ರೊ.ಭಗವಾನ್ ಅವರನ್ನ ಬಂಧಿಸಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರಗಿಸುವಂತೆ ಶ್ರೀರಾಮ ಭಕ್ತರು ಪುತ್ತೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮೊದಲಿಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ ಶ್ರೀರಾಮ ಭಕ್ತರು, ಪ್ರೊ.ಭಗವಾನ್ ಶ್ರೀರಾಮನ ಬಗ್ಗೆ ಮಾಡಿದ ಅವಹೇಳನಕ್ಕೆ ದೇವರು ಶಿಕ್ಷೆ ನೀಡಬೇಕು ಎಂದು ಪ್ರಾರ್ಥಿಸಿದರು. ಬಳಿಕ ಅಲ್ಲಿಂದ ಪುತ್ತೂರು ನಗರ ಠಾಣೆಯವರಿಗೆ ಕಾಲ್ನಡಿಗೆಯಲ್ಲಿ ತೆರಳಿದ ಶ್ರೀರಾಮ ಭಕ್ತರು ಪ್ರೊ.ಭಗವಾನ್ ಗೆ ಧಿಕ್ಕಾರ ಕೂಗಿದರು. ಹಿಂದೂ ಧರ್ಮದ ದೇವರಾದ ಶ್ರೀರಾಮಚಂದ್ರನ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡುವ ಪ್ರೊ. ಭಗವಾನ್ ಸಮಾಜದಲ್ಲಿ ಶಾಂತಿಯನ್ನ ಕೆದಡುವ ಯೋಚನೆಯಲ್ಲಿದ್ದಾರೆ. `ಪ್ರಭು ಶ್ರೀರಾಮಚಂದ್ರ ದಶರಥನಿಗೆ ಹುಟ್ಟಿರುವವನಲ್ಲ. ರಾಣಿ ಪುರೋಹಿತರ ಜೊತೆ ಮಲಗುತ್ತಾಳೆ’. ಎಂಬ ಅಸಂಬದ್ಧ ಹೇಳಿಕೆಯನ್ನ ನೀಡಿ ಸಮಾಜದ ಅಶಾಂತಿಗೆ ಕಾರಣವಾಗಿದ್ದಾರೆ.
2024ರಲ್ಲೂ ಪ್ರೊ.ಭಗವಾನ್ ಶ್ರೀರಾಮಚಂದ್ರನ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಆ ಸಂದರ್ಭದಲ್ಲೂ ಪುತ್ತೂರು ನಗರ ಠಾಣಾ ಪೊಲೀಸರಿಗೆ ದೂರು ನೀಡಿದ್ದರೂ ಯಾವುದೇ ಕ್ರಮಕೈಗೊಳ್ಳಲಿಲ್ಲ. ಇದೀಗ ಮತ್ತೆ ಮತ್ತೆ ಇಂತಹ ಅವಹೇಳನಕಾರಿ ಹೇಳಿಕೆ ನೀಡಿ ಪ್ರೊ.ಭಗವಾನ್ ಸಮಾಜದ ಶಾಂತಿಯನ್ನ ಕೆದಡುತ್ತಿದ್ದಾರೆ. ಇಂತಹವರ ವಿರುದ್ಧ ಕೂಡಲೇ ಕಾನೂನು ಕ್ರಮಕೈಗೊಳ್ಳಬೇಕು ಎಂದು ಶ್ರೀರಾಮ ಭಕ್ತರು ಪುತ್ತೂರು ನಗರ ಠಾಣೆಗೆ ದೂರು ದಾಖಲಿಸಿದ್ದಾರೆ.
ಈ ಸಂದರ್ಭದಲ್ಲಿ ಹಿಂದೂ ಮುಖಂಡರಾದ ಡಾ.ಸುರೇಶ್ ಪುತ್ತೂರಾಯ, ಮುರಳೀಕೃಷ್ಣ ಹಸಂತಡ್ಕ, ರಾಜೇಶ್ ಬನ್ನೂರು, ಹರಿಪ್ರಸಾದ್ ನೆಲ್ಲಿಕಟ್ಟೆ, ಬಾಲಚಂದ್ರ ಸೊರಕೆ, ಅಜಿತ್ ರೈ ಹೊಸಮನೆ, ಶಿವ ಭಟ್, ರತನ್ ನಾಯರ್, ಸತೀಶ್ ನಾಯ್ಕ್, ಮಹೇಶ್ ರೈ ಕೇರಿ, ಜಯಪ್ರಕಾಶ್ ಅಮೈ ಮೊದಲಾದವರು ಉಪಸ್ಥಿತರಿದ್ದರು.


























