ಪುತ್ತೂರು: ಮೀನುಗಾರಿಕಾ ಇಲಾಖೆಯ ಮತ್ಸ್ಯಾಶ್ರಮ ಯೋಜನೆಯಡಿ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ 125 ಮನೆ ಮಂಜೂರುಗೊಂಡಿದೆ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ತಿಳಿಸಿದ್ದಾರೆ.
ಬುಧವಾರ ಬೆಂಗಳೂರಿನಲ್ಲಿ ಮೀನುಗಾರಿಕಾ ಹಾಗೂ ಬಂದರು ಸಚಿವರಾದ ಮಂಕಾಳು ವೈದ್ಯ ಅವರನ್ನು ಭೇಟಿಯದ ಶಾಸಕರು ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅನೇಕ ಹಿಂದುಳಿದ ಕುಟುಂಬಗಳಿದ್ದು ಮನೆ ಇಲ್ಲದ ಅನೇಕ ಕುಟುಂಬಗಳಿದೆ. ಮನೆ ಪಡೆಯಲು ಗ್ರಾಪಂ ಗೆ ಅರ್ಜಿ ಸಲ್ಲಿಸಿ ಮನೆ ಮಂಜೂರಾತಿಗಾಗಿ ಅನೇಕ ವರ್ಷಗಳಿಂದ ಕಾಯುತ್ತಿದ್ದಾರೆ. ಆದರೆ ಕಳೆದ ಹಲವು ವರ್ಷಗಳಿಂದ ಸರಕಾರದಿಂದ ಮನೆ ಮಂಜೂರಾಗದೇ ಇರುವ ಕಾರಣಕ್ಕೆ ಬಡವರು ಅವಕಾಶದಿಂದ ವಂಚಿತರಾಗಿದ್ದಾರೆ.
ಈ ನಿಟ್ಟಿನಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಹೆಚ್ಚುವರಿ ಮನೆಗಳನ್ನು ಮಂಜೂರು ಮಾಡುವಂತೆ ಸಚಿವರಲ್ಲಿ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿದ ಸಚಿವರು ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ೧೨೫ ಮನೆಗಳನ್ನು ಮಂಜೂರುಗೊಳಿಸಿ ಆದೇಶಿಸಿದ್ದಾರೆ.
ಅನೇಕ ಮಂದಿ ಬಡವರು ಮನೆಗೆ ಅರ್ಜಿ ಕೊಟ್ಟು ಆಸೆಗಣ್ಣಿನಿಂದ ಕಾಯುತ್ತಿದ್ದಾರೆ. ಬಡವರಿಗೊಂದು ಮನೆ ನಿರ್ಮಾಣ ಮಾಡಿ ಕೊಡುವುದು ನನ್ನ ಉದ್ದೇಶವಾಗಿದೆ. ಪುತ್ತೂರು ಕ್ಷೇತ್ರದಲ್ಲಿ ಮನೆ ಇಲ್ಲದೆ ಯಾರೂ ಇರಬಾರದು ಆ ರೀತಿ ಆದರೆ ಅದುವೇ ನನಗೆ ದೊಡ್ಡ ಸಂತೋಷವಾಗಿದೆ. ಮನೆ ಇಲ್ಲದ ಬಡವರಿಗೆ ಹಂಚಲು ೧೨೫ ಮನೆಯನ್ನು ಸರಕಾರದಿಂದ ಮಂಜೂರು ಮಾಡಿಸಿದ್ದೇನೆ. ಅಶೋಕ್ ರೈ , ಶಾಸಕರು ಪುತ್ತೂರು