ಪುತ್ತೂರು ತಾಲೂಕಿನ ೨ನೇ ಪ್ರಮುಖ ಪಟ್ಟಣವಾಗಿರುವ ಉಪ್ಪಿನಂಗಡಿಯಲ್ಲಿ ಕಸ ವಿಲೇವಾರಿ ಅವ್ಯವಸ್ಥೆ, ಟ್ರಾಫಿಕ್ ಸಮಸ್ಯೆಗಳೂ ಸೇರಿದಂತೆ ಹಲವು ಸಮಸ್ಯೆಗಳಿಂದ ಬಳಲುತ್ತಿದ್ದರೂ ಉಪ್ಪಿನಂಗಡಿ ಗ್ರಾಮಪಂಚಾಯತ್ ಯಾವುದೇ ವಿಚಾರಕ್ಕೆ ಸ್ಪಂಧಿಸದೆ ಮೌನಾಚರಣೆ ಮಾಡುತ್ತಿದೆ. ಸಾರ್ವಜನಿಕರ ಆರೋಗ್ಯ ಹಾಗೂ ಬದುಕಿನ ಹಿತದೃಷ್ಟಿಯಿಂದ ತಕ್ಷಣ ಈ ಸಮಸ್ಯೆಗಳಿಗೆ ಪರಿಹಾರ ನೀಡುವಲ್ಲಿ ಗ್ರಾಪಂ ಕ್ರಮಕೈಗೊಳ್ಳಬೇಕು ಎಂದು ಉಪ್ಪಿನಂಗಡಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಆಗ್ರಹಿಸಿದೆ.
ಸಂಘದ ಅಧ್ಯಕ್ಷ ಪ್ರಶಾಂತ್ ಡಿಕೋಸ್ತ ಮತ್ತು ಕಾರ್ಯದರ್ಶಿ ಯೂನಿಕ್ ಅಬ್ದುಲ್ ರಹಿಮಾನ್ ಅವರು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಉಪ್ಪಿನಂಗಡಿ ಗ್ರಾಪಂ ರಾಜ್ಯದಲ್ಲಿ ಅತ್ಯಂತ ಹೆಚ್ಚು ಆದಾಯ ಇರುವ ಗ್ರಾಪಂಗಳಲ್ಲಿ ಒಂದಾಗಿದೆ. ಆದರೆ ಇಲ್ಲಿನ ಕಸವಿಲೇವಾರಿಯ ಅವ್ಯವಸ್ಥೆಯಿಂದ ಜನತೆಯ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತಿದೆ. ಇಲ್ಲಿನ ಬಸ್ ನಿಲ್ದಾಣದ ಪರಿಸರ ಮತ್ತು ಅಂಗಡಿ ಮುಂಗಟ್ಟುಗಳ ಪಕ್ಕದಲ್ಲಿಯೇ ತ್ಯಾಜ್ಯ ಕೊಳೆತು ನಾರುತ್ತಿದೆ. ಈ ದುರ್ವಾಸನೆ ಒಂದು ಕಡೆಯಾದರೆ, ಮತ್ತೊಂದೆಡೆ ಸೊಳ್ಳೆ ಉತ್ಪಾದನೆಯ ತಾಣವಾಗಿ ಪರಿವರ್ತಿತವಾಗುತ್ತಿದೆ. ಪವಿತ್ರವಾದ ದಕ್ಷಿಣಕಾಶಿ ಎಂದೇ ಖ್ಯಾತಿ ಪಡೆದಿರುವ ಇಲ್ಲಿನ ಸಂಗಮ ಸ್ಥಾನವನ್ನು ಅಪವಿತ್ರಗೊಳಿಸುವ ನಿಟ್ಟಿನಲ್ಲಿ ಕೊಳೆತ ತ್ಯಾಜ್ಯಗಳನ್ನು ನೇತ್ರಾವತಿ ನದಿಗೆ ಎಸೆಯಲಾಗುತ್ತಿದೆ. ಪೇಟೆಯ ತ್ಯಾಜ್ಯ ನೀರನ್ನು ನೇರವಾಗಿ ನದಿಗೆ ಬಿಡಲಾಗುತ್ತಿದೆ. ಇದರಿಂದ ಪರಿಸರ ಹಾಗೂ ಕುಡಿಯುವ ನೀರಿನ ಮೂಲವಾದ ನೇತ್ರಾವತಿ ಮಾಲಿನ್ಯಗೊಳ್ಳುತ್ತಿದೆ. ಇದಕ್ಕೆ ತಕ್ಷಣ ವೈಜ್ಞಾನಿಕ ಕ್ರಮಗಳ ಮೂಲಕ ಗ್ರಾ.ಪಂ ತಡೆ ಹಾಕಬೇಕು ಎಂದು ಅವರು ಒತ್ತಾಯಿಸಿದರು.
ಟ್ರಾಫಿಕ್ ಸಮಸ್ಯೆ
ಹಿಂದೆ ತಾಲೂಕು ಕೇಂದ್ರವಾಗಿದ್ದ ಉಪ್ಪಿನಂಗಡಿ ಈಗ ತಾಲೂಕಿನ ಮುಖ್ಯಪಟ್ಟಣವಾಗಿದ್ದು, ಪ್ರಸ್ತುತ ಸದಾ ಕಾಲ ಟ್ರಾಫಿಕ್ ಸಮಸ್ಯೆ ಜನತೆಯನ್ನು ಕಾಡುತ್ತಿದೆ. ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಪ್ರತೀ ದಿನವೂ ವಾಹನಗಳ ದಟ್ಟಣೆಯಿಂದ ಓಡಾಟಕ್ಕೆ ಸಮಸ್ಯೆಯಾಗುತ್ತಿದೆ. ಗಾಂಧಿಪಾರ್ಕಿ ಬಳಿಯಿಂದ ಆರಂಭಗೊಳ್ಳುವ ಮುಖ್ಯ ರಸ್ತೆಯಲ್ಲಿ ಸದಾ ಕಾಲ ಟ್ರಾಫಿಕ್ಜಾಮ್ ಉಂಟಾಗುತ್ತಿದೆ. ಶಾಲಾ ಕಾಲೇಜುಗಳ ಮಕ್ಕಳು ಕೂಡಾ ಇದೇ ಮಾರ್ಗವಾಗಿ ಹೋಗುವುದರಿಂದ ಬೆಳಿಗ್ಗೆ ಮತ್ತು ಸಂಜೆ ಇಲ್ಲಿ ಪರಿಸ್ಥಿತಿ ಗಂಭೀರವಾಗುತ್ತಿದೆ. ಸರಕು ಸಾಗಾಟ ವಾಹನಗಳು ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ. ಇದರಿಂದ ವ್ಯಾಪಾರ ವಹಿವಾಟುಗಳ ಮೇಲೆ ತೀವ್ರವಾದ ಪರಿಣಾಮ ಬೀರುತ್ತಿದೆ. ರಾಷ್ಟಿçÃಯ ಹೆದ್ದಾರಿಯ ಕಾಮಗಾರಿ ಕುಂಟುತ್ತಾ ಸಾಗುತ್ತಿರುವುದು ಈ ಟ್ರಾಫಿಕ್ ಸಮಸ್ಯೆಗೆ ಮತ್ತೊಂದು ಕಾರಣವಾಗಿದೆ. ಇಲ್ಲಿ ನಡೆಯುವ ಅನಗತ್ಯ ಟ್ರಾಫಿಕ್ ಸಮಸ್ಯೆಗೆ ಕ್ರಮಕೈಗೊಳ್ಳಬೇಕು ಎಂದು ಅವರು ಹೇಳಿದರು.
ಉಪ್ಪಿನಂಗಡಿ ಬಸ್ ನಿಲ್ದಾಣದ ಬಳಿಯಲ್ಲಿ ಪುತ್ತೂರು ಎಪಿಎಂಸಿ ರೈತರ ಅನುಕೂಲಕ್ಕಾಗಿ ಕಟ್ಟಡವೊಂದನ್ನು ನಿರ್ಮಿಸಿ ಗ್ರಾಪಂಗೆ ಹಸ್ತಾಂತರ ಮಾಡಿತ್ತು. ಆದರೆ ಪ್ರಸ್ತುತ ಈ ಕಟ್ಟಡ ರೈತರ ಪಾಲಿಗೆ ದೊರೆಯದೆ ಇತರ ವ್ಯಾಪಾರಸ್ಥರ ಪಾಲಾಗಿದೆ. ರೈತರು ತಾವು ಬೆಳೆದ ಬೆಳೆಗಳನ್ನು ನೇರವಾಗಿ ಮಾರಾಟ ಮಾಡಲು ಅವಕಾಶ ಕಲ್ಪಿಸುವ ದೃಷ್ಟಿಯಿಂದ ಮಾಡಲಾದ ಈ ಕಟ್ಟಡ ಈಗ ವಾಣಿಜ್ಯ ಉದ್ದೇಶಕ್ಕಾಗಿ ಉಪಯೋಗವಾಗುತ್ತಿದೆ. ಇದನ್ನು ರೈತರಿಗೆ ಮೀಸಲಿಡಬೇಕು ಎಂದು ಅವರು ಒತ್ತಾಯಿಸಿದರು.
ಉಪ್ಪಿನಂಗಡಿ ಆರಕ್ಷಕ ಠಾಣೆ ಪುತ್ತೂರು ಡಿವೈಎಸ್ಪಿ ಕಚೇರಿಯ ಅಧೀನಕ್ಕೆ ಒಳಪಟ್ಟಿತ್ತು. ಉಪ್ಪಿನಂಗಡಿಯಿದ ಕೇವಲ 12ಕಿಮೀ ದೂರದಲ್ಲಿರುವ ಪುತ್ತೂರಿನ ಬದಲಿಗೆ ಈಗ ಈ ಠಾಣೆಯನ್ನು 24ಕಿಮೀ ದೂರದ ಬೆಳ್ತಂಗಡಿ ಡಿವೈಎಸ್ಪಿ ಕಚೇರಿ ಅಧೀನಕ್ಕೆ ಒಳಪಡಿಸಲಾಗಿದೆ. ಇದರಿಂದ ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರು ಬೆಳ್ತಂಗಡಿಗೆ ಅಲೆದಾಡುವಂತಾಗಿದೆ. ನ್ಯಾಯಾಲಯ, ಕಂದಾಯ ಇಲಾಖೆ ಸೇರಿದಂತೆ ಪ್ರತಿಯೊಂದು ವಿಚಾರಕ್ಕೂ ಪುತ್ತೂರಿಗೆ ಹೋಗಬೇಕಾದ ಜನರಿಗೆ ಇದೊಂದು ತೀವ್ರ ತೊಂದರೆಯಾಗಿರುವ ಬದಲಾವಣೆಯಾಗಿದೆ. ಹಾಗಾಗಿ ಹಿಂದಿನAತೆ ಪುತ್ತೂರು ಡಿವೈಎಸ್ಪಿ ಕಚೇರಿಯ ಅಧೀನಕ್ಕೆ ಬದಲಾಯಿಸಬೇಕು ಎಂದು ಅವರು ತಿಳಿಸಿದರು.
ಬೀದಿ ಬದಿಗಳಲ್ಲಿ ತಳ್ಳುವ ಗಾಡಿ ವ್ಯಾಪಾರಿಗಳು ಒಂದೆಡೆ ನೆಲೆ ನಿಂತು ವ್ಯಾಪಾರ ಮಾಡುವುದು ಮತ್ತು ಟೆಂಟ್ ಮತ್ತು ಶೆಡ್ ಗಳನ್ನು ಹಾಕಿಕೊಂಡು ವ್ಯಾಪಾರ ಮಾಡುವುದನ್ನು ಸಂಪೂರ್ಣ ನಿಷೇಧಿಸಬೇಕು. ಇದರಿಂದ ವರ್ತಕರ ವ್ಯಾಪಾರ ವಹಿವಾಟುಗಳಿಗೆ ಸಮಸ್ಯೆಗಳಗಾಗುತ್ತಿದೆ. ಈ ವಿಚಾರದಲ್ಲಿ ಗ್ರಾಪಂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದವರು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಉಪ್ಪಿನಂಗಡಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಶಬೀರ್ ಕೆಂಪಿ ಮತ್ತು ಸದಸ್ಯ ಇರ್ಷಾದ್ ಯು.ಟಿ ಉಪಸ್ಥಿತರಿದ್ದರು.

























