ಪುತ್ತೂರು: ಪುತ್ತೂರಿನಲ್ಲಿ ಆಯೋಜಿಸಲಾದ ರಾಜ್ಯದ ಪ್ರಥಮ ಬೃಹತ್ ತಿರಂಗ ಯಾತ್ರೆ,ಧಾರಾಕಾರ ಮಳೆಯ ನಡುವೆಯೂ ಸಾವಿರಾರು ರಾಷ್ಟ್ರಪ್ರೇಮಿಗಳ ಅಭೂತಪೂರ್ವ ಭಾಗವಹಿಸುವಿಕೆಯೊಂದಿಗೆ ಅದ್ದೂರಿಯಾಗಿ ನಡೆಯಿತು.ರಾಷ್ಟ್ರಭಕ್ತಿ, ರಾಷ್ಟ್ರೀಯ ಏಕತೆ ಮತ್ತು ಹುತಾತ್ಮ ಯೋಧರ ತ್ಯಾಗವನ್ನು ಸ್ಮರಿಸುವ ಜೊತೆಗೆ ಭ್ರಷ್ಟಾಚಾರ ಮತ್ತು ಭಯೋತ್ಪಾದನೆ ನಿರ್ಮೂಲನೆ ಉದ್ದೇಶದಿಂದ ನಗರದೆಲ್ಲೆಡೆ ತ್ರಿವರ್ಣ ಧ್ವಜಗಳ ಹಾರಾಟ, ದೇಶಭಕ್ತಿ ಘೋಷಣೆಗಳು ಹಾಗೂ ಯುವಜನರ ಉತ್ಸಾಹದಿಂದ ಪುತ್ತೂರು ದೇಶಪ್ರೇಮದ ಭಾವನೆಯಲ್ಲಿ ಮಿಂದೇಳಿತು.
ಸ್ವಾತಂತ್ರ್ಯೋತ್ಸವದ ಅಂಗವಾಗಿ ಆ.7ರಂದು ನಡೆದ ಈ ತಿರಂಗ ಯಾತ್ರೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಯುವಕ-ಯುವತಿಯರು, ಮಹಿಳೆಯರು, ಹಿರಿಯ ನಾಗರಿಕರು, ವಿದ್ಯಾರ್ಥಿಗಳು ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಪಾಲ್ಗೊಂಡು ರಾಷ್ಟ್ರಧ್ವಜ ಹಿಡಿದು ದೇಶಭಕ್ತಿಯ ಸಂದೇಶವನ್ನು ಸಾರಿದರು.ಕರ್ನಾಟಕದಲ್ಲಿ ಈ ವರ್ಷದ ತಿರಂಗ ಅಭಿಯಾನದ ಮೊದಲ ಪ್ರಮುಖ ಕಾರ್ಯಕ್ರಮವಾಗಿ ಪುತ್ತೂರಿನಲ್ಲಿ ಯಶಸ್ವಿಯಾಗಿ ನಡೆದ ಯಾತ್ರೆ ರಾಜ್ಯದ ಗಮನ ಸೆಳೆಯಿತು.
ಪುತ್ತೂರಿನ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಿಂದ ಸಂಜೆ ಸುಮಾರು 3.30ಕ್ಕೆ ಆರಂಭವಾದ ತಿರಂಗ ಯಾತ್ರೆಗೆ ಮೊದಲು ದೇವಳದ ಎದುರು ಭಾಗದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿಯವರು ಪ್ರಾರ್ಥನೆ ಮಾಡಿದರು. ಬಳಿಕ ಹೈಕೋರ್ಟ್ನ ಹಿರಿಯ ವಕೀಲ ಅರುಣ್ಶ್ಯಾಮ್ ಅವರು ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿದರು. ವಿವೇಕಾನಂದ ಕಾಲೇಜಿನ ಎನ್ಸಿಸಿ ಕೆಡೆಟ್ಗಳಿಬ್ಬರು ರಾಷ್ಟ್ರಧ್ವಜದೊಂದಿಗೆ ಪಥ ಸಂಚಲನದ ಮೂಲಕ ರಥ ಬೀದಿಯಲ್ಲಿ ಬಂದು ಮಾಜಿ ಸಚಿವ ಸಿ.ಟಿ. ರವಿ ಹಾಗೂ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಧ್ವಜ ನೀಡಿದರು.
ಅವರು ತಿರಂಗ ಯಾತ್ರೆಯಲ್ಲಿ ಪಾಲ್ಗೊಳ್ಳುವ ಪ್ರಮುಖರಿಗೆ ರಾಷ್ಟ್ರಧ್ವಜ ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದರು. ಯಾತ್ರೆಯು ಮುಖ್ಯರಸ್ತೆ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ರಸ್ತೆಯಾಗಿ ಕೋರ್ಟ್ ರಸ್ತೆಯ ಮೂಲಕ ಸಂಚರಿಸಿ ಕಿಲ್ಲೆ ಮೈದಾನ ತಲುಪಿತು. ಅಲ್ಲಿ ಅಮರ್ ಜವಾನ್ ಸ್ಮಾರಕ ಜ್ಯೋತಿ ಎದುರು ಎಲ್ಲರೂ ಸೇರಿ ಹುತಾತ್ಮ ಯೋಧರಿಗೆ ಪುಷ್ಪನಮನ ಸಲ್ಲಿಸಿದರು.ದೇಶದ ರಕ್ಷಣೆಗಾಗಿ ತಮ್ಮ ಪ್ರಾಣವನ್ನು ಅರ್ಪಿಸಿದ ಯೋಧರ ತ್ಯಾಗವನ್ನು ಸ್ಮರಿಸಿ ಮೌನಾಚರಣೆ .
ತಿರಂಗ ಯಾತ್ರೆಯಂಗವಾಗಿ ಪುರಭವನದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಮಾಜಿ ಸಚಿವ,ರಾಷ್ಟ್ರೀಯ ಬಿಜೆಪಿ ಮಾಜಿ ಕಾರ್ಯದರ್ಶಿಯೂ ಆಗಿರುವ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರು ಅಜ್ಞಾನ, ಭ್ರಷ್ಟಾಚಾರ ಮತ್ತು ಭಯೋತ್ಪಾದನೆ ವಿರುದ್ಧ ಭಾರತ ನಿರಂತರ ಹೋರಾಟ ನಡೆಸಬೇಕಾಗಿದೆ ಎಂದು ಹೇಳಿದರು.ತಿರಂಗಾ ಯಾತ್ರೆ ಪ್ರಾರಂಭವಾಗೋ ಕಾಲಕ್ಕೆ ಜೋರಾಗಿ ಮಳೆ.ಈಗ ಮಳೆ ನಿಂತಿದೆ.ಮಳೆರಾಯನಿಗೆ ಒಂದು ಮಾತನ್ನು ನೆನಪಿಸಬೇಕೆಂದ ಅವರು, ಕಾರ್ಗಿಲ್ ಯುದ್ಧ ಸಮಯದಲ್ಲಿ ವಿಕ್ರಂ ಬಾತ್ರ ಅವರು ಒಂದು ಶಿಖರವನ್ನು ಗೆದ್ದು ಇನ್ನೊಂದು ಶಿಖರವನ್ನು ಗೆಲ್ಲಬೇಕು ಅಂತ ಹೇಳೋ ಸಂದರ್ಭದಲ್ಲಿ ಗುಂಡಿನ ಮಳೆಗೆ ಹೆದರದೆ ದಿಲ್ ಮಾಂಗೆ ಮೋರ್ ಎಂದರು.ಅದೇ ರೀತಿ ಗುಂಡಿನ ಮಳೆಗೆ ಹೆದರದೆ ಇರತಕ್ಕಂತಹ ದೇಶಭಕ್ತರು ಇನ್ನು ಮಳೆಗೆ ಹೆದರುತ್ತಾರೆಯೇ ಅನ್ನೋ ಸಂದೇಶವನ್ನು ನೀವೆಲ್ಲರೂ ಕೊಟ್ಟಿದ್ದೀರಿ ಎಂದು ಹೇಳಿ ತಿರಂಗ ಯಾತ್ರೆಯಲ್ಲಿ ಪಾಲ್ಗೊಂಡವರನ್ನು ಅಭಿನಂದಿಸಿದರು.
ದೇಶದ ಅಭಿವೃದ್ಧಿಗೆ ಕೇವಲ ಆರ್ಥಿಕ ಪ್ರಗತಿ ಸಾಕಾಗುವುದಿಲ್ಲ.ಜ್ಞಾನವಂತ, ಪ್ರಾಮಾಣಿಕ ಹಾಗೂ ಸುರಕ್ಷಿತ ಭಾರತ ನಿರ್ಮಾಣವೂ ಅಷ್ಟೇ ಮುಖ್ಯ ಎಂದು ಹೇಳಿದ ಸಿಟಿ ರವಿಯವರು,ಅಜ್ಞಾನದ ವಿರುದ್ಧ ಹೋರಾಡುವ ಮೂಲಕ ಜಾಗೃತ ಸಮಾಜವನ್ನು ನಿರ್ಮಿಸಬೇಕಾಗಿದೆ.ಅದೇ ರೀತಿ ಭ್ರಷ್ಟಾಚಾರದ ವಿರುದ್ಧ ಪ್ರತಿಯೊಬ್ಬರೂ ದೃಢ ನಿಲುವು ತಾಳಬೇಕು ಎಂದು ಕರೆ ನೀಡಿದರು.
ಭಾರತದ ಸ್ವಾತಂತ್ರ್ಯವು ಕೇವಲ ಒಂದೇ ರೀತಿಯ ಹೋರಾಟದ ಫಲವಲ್ಲ.ಅಹಿಂಸಾತ್ಮಕ ಚಳವಳಿಗಳ ಜೊತೆಗೆ ಕ್ರಾಂತಿಕಾರಿಗಳು ನಡೆಸಿದ ವೀರ ಹೋರಾಟ, ತ್ಯಾಗ ಮತ್ತು ಬಲಿದಾನಗಳೂ ಸ್ವಾತಂತ್ರ್ಯ ಪಡೆಯುವಲ್ಲಿ ಮಹತ್ವದ ಪಾತ್ರ ವಹಿಸಿವೆ ಎಂದು ಹೇಳಿದ ಸಿ.ಟಿ.ರವಿ ಅವರು,ತ್ರಿವರ್ಣ ಧ್ವಜವು ದೇಶದ ಏಕತೆ, ಶೌರ್ಯ, ತ್ಯಾಗ ಮತ್ತು ರಾಷ್ಟ್ರೀಯ ಭಾವನೆಯ ಪ್ರತೀಕವಾಗಿದೆ. ದೇಶದ ವಿಷಯಕ್ಕೆ ಬಂದಾಗ ಎಲ್ಲ ಭಾರತೀಯರಿಗೂ ತಿರಂಗವೇ ಅತ್ಯಂತ ಗೌರವದ ಧ್ವಜ ಎಂದು ಹೇಳಿದರು.ಭಾರತದ ಸ್ವಾತಂತ್ರ್ಯ ಹೋರಾಟವನ್ನು ಕೇವಲ ಅಹಿಂಸಾತ್ಮಕ ಹೋರಾಟದ ದೃಷ್ಟಿಯಿಂದ ಮಾತ್ರ ನೋಡಬಾರದು.ಮಹಾತ್ಮ ಗಾಂಧಿಜಿ ನೇತೃತ್ವದ ಚಳವಳಿಯು ಜನರಲ್ಲಿ ಸ್ವಾತಂತ್ರ್ಯದ ಅರಿವು ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸಿತ್ತು.
ಅದೇ ಸಮಯದಲ್ಲಿ ಭಗತ್ ಸಿಂಗ್, ನೇತಾಜಿ ಸುಭಾಷ್ಚಂದ್ರ ಭೋಸ್, ವೀರ ಸಾವರ್ಕರ್ ಸೇರಿದಂತೆ ಅನೇಕ ಕ್ರಾಂತಿಕಾರಿಗಳ ತ್ಯಾಗ ಮತ್ತು ಹೋರಾಟವೂ ದೇಶದ ಸ್ವಾತಂತ್ರ್ಯಕ್ಕೆ ಕಾರಣವಾಗಿದೆ.ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಎಲ್ಲ ನಾಯಕರ ಕೊಡುಗೆಯನ್ನು ಸಮಾನ ಗೌರವದಿಂದ ಸ್ಮರಿಸಬೇಕು.ದೇಶದ ಸ್ವಾತಂತ್ರ್ಯವು ಲಕ್ಷಾಂತರ ಜನರ ತ್ಯಾಗದ ಫಲವಾಗಿದೆ.ಕೆದಂಬಾಡಿ ರಾಮಯ್ಯ ಗೌಡರು, ಮಂಜ ಬೈದ, ಎನ್.ಎಸ್.ಕಿಲ್ಲೆಯವರಂತಹ ಅನೇಕ ಸ್ಥಳೀಯ ಹಾಗೂ ಹೆಸರಿಲ್ಲದ ಹೋರಾಟಗಾರರ ಕೊಡುಗೆಯನ್ನೂ ದೇಶ ಮರೆಯಬಾರದು ಎಂದು ಹೇಳಿದ ಸಿ.ಟಿ.ರವಿ ಅವರು ಇಂದಿನ ಪೀಳಿಗೆಯ ಹೋರಾಟ ಸ್ವಾತಂತ್ರ್ಯ ಪಡೆಯುವುದಕ್ಕಾಗಿ ಅಲ್ಲ, ಸ್ವಾತಂತ್ರ್ಯವನ್ನು ಬಲಪಡಿಸುವುದಕ್ಕಾಗಿ ಆಗಬೇಕು.
ಬಡತನ ಮುಕ್ತ ಭಾರತ ಎಂದರೆ ಬಡವರನ್ನು ದೂರ ಮಾಡುವುದಲ್ಲ, ಬಡವರಿಗೆ ಶಕ್ತಿ ನೀಡುವುದು.ಬಡವರ ಆರ್ಥಿಕ ಸಬಲೀಕರಣಕ್ಕಾಗಿ ನರೇಂದ್ರ ಮೋದಿ ಸರ್ಕಾರದ ವಿವಿಧ ಯೋಜನೆಗಳು ನೆರವಾಗುತ್ತಿವೆ.ಪ್ರತಿಯೊಬ್ಬ ಭಾರತೀಯನೂ ದೇಶದ ಅಭಿವೃದ್ಧಿ ಮತ್ತು ಬಲಿಷ್ಠ ಭಾರತದ ನಿರ್ಮಾಣದಲ್ಲಿ ತನ್ನ ಜವಾಬ್ದಾರಿಯನ್ನು ನಿಭಾಯಿಸಬೇಕು ಎಂದು ಕರೆ ನೀಡಿದರು.ನಮ್ಮ ದೇಶ 2047ಕ್ಕೆ ವಿಶ್ವಗುರು ಆಗಬೇಕು.ಅದಕ್ಕೆ ನಮ್ಮ ವ್ಯವಸ್ಥೆ ಹಳಿತಪ್ಪದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ನಮ್ಮ ಮೇಲೆ ಇದೆ.ವ್ಯವಸ್ಥೆ ಹಳಿತಪ್ಪದಂತೆ ನೋಡಿಕೊಳ್ಳೋದಕ್ಕೆ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಮ್ಮೆಲ್ಲರಿಗೂ ಒಂದು ಶಕ್ತಿಯನ್ನು ಕೊಟ್ಟಿದ್ದಾರೆ.ಅದನ್ನು ನಾವೆಲ್ಲ ಬಳಸಿಕೊಳ್ಳಬೇಕೆಂದು ಸಿಟಿ ರವಿ ತಿಳಿಸಿದರು.

ದ.ಕ.ಸಂಸದ ಕ್ಯಾ|ಬ್ರಿಜೇಶ್ ಚೌಟ ಅವರು ಮಾತನಾಡಿ ಪುತ್ತೂರಿನಲ್ಲಿ ನಡೆದ ತಿರಂಗ ಯಾತ್ರೆ ಅತ್ಯಂತ ಭಾವನಾತ್ಮಕ ಕಾರ್ಯಕ್ರಮವಾಗಿದೆ.ತಿರಂಗವನ್ನು ಪ್ರೇರಣೆಯಾಗಿಟ್ಟುಕೊಂಡು ಸ್ವಾತಂತ್ರ್ಯದ ಹೋರಾಟ ಮಾಡಿದ್ದಾರೆ.ಆ ಹೋರಾಟ ಮಾಡಿದ ಮಹಾಪುರುಷರಿಗೆ ನಮನ ಸಲ್ಲಿಸಬೇಕು ಎಂಬ ದೃಷ್ಟಿಯಿಂದ ಈ ತಿರಂಗ ಯಾತ್ರೆ. ನಮ್ಮ ಸೈನಿಕರು ಭಾರತದ ಅಖಂಡತೆಗಾಗಿ ಇದೇ ಧ್ವಜಕ್ಕಾಗಿ ಬಲಿದಾನ ನೀಡಿದವರಿದ್ದಾರೆ.ಭಾಷೆ, ಧರ್ಮ, ಜಾತಿ ಬಿಟ್ಟು ತಿರಂಗದ ಅಡಿಯಲ್ಲಿ ನಾವೆಲ್ಲ ಒಂದೇ ಎಂಬ ಕಲ್ಪನೆಯಲ್ಲಿ ಇರಬೇಕೆಂದರು.ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹೇಳಿದಂತೆ ನಾವೆಲ್ಲ ಒಂದಾಗಿ ಒಟ್ಟಾಗಿ ನಡೆಯಬೇಕು ಒಂದೆ ಮನಸ್ಸಿನಿಂದ ಒಗ್ಗಟ್ಟಿನಿಂದ ಕೆಲಸ ಮಾಡಬೇಕಾಗಿದೆ ಎಂದ ಅವರು ಆ.13ರಿಂದ 15ರ ತನಕ ಪ್ರತಿ ಮನೆಯಲ್ಲೂ ತಿರಂಗ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ರಾಜ್ಯ ತಿರಂಗ ಯಾತ್ರೆಯ ಸಹಸಂಚಾಲಕಿಯಾಗಿರುವ ಮಾಜಿ ಶಾಸಕಿ ರೂಪಾಲಿ ನಾಯ್ಕ್, ಮಂಗಳೂರು ವಿಭಾಗ ಪ್ರಭಾರಿ ಭರತೇಶ್, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ,ಮಂಗಳೂರು ಶಾಸಕ ವೇದವ್ಯಾಸ ಕಾಮತ್,ಮಂಗಳೂರು ಉತ್ತರದ ಶಾಸಕ ಡಾ.ಭರತ್ ಶೆಟ್ಟಿ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ವಿಧಾನ ಪರಿಷತ್ ಸದಸ್ಯ ಮತ್ತು ಪುತ್ತೂರಿನಲ್ಲಿ ತಿರಂಗ ಯಾತ್ರೆಯ ಜವಾಬ್ದಾರಿಯನ್ನು ಹೊತ್ತಿರುವ ಕಿಶೋರ್ ಕುಮಾರ್ ಪುತ್ತೂರು ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಬಿಜೆಪಿ ನಗರ ಮಂಡಲದ ಅಧ್ಯಕ್ಷ ಶಿವಕುಮಾರ್ ಪಿ.ಬಿ., ಸ್ವರ್ಣಲತಾ ಹೆಗ್ಡೆ, ಸಂತೋಷ್ ರೈ ಕೈಕಾರ, ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಚಾಕೋಟೆ, ಯುವರಾಜ್ ಪೆರಿಯತ್ತೋಡಿ, ಸುನಿಲ್ ದಡ್ಡು, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ವಿದ್ಯಾ ಆರ್.ಗೌರಿ, ವಿದ್ಯಾಧರ ಜೈನ್, ನಾಗೇಶ್ ಬಲ್ನಾಡು, ಯತೀಂದ್ರ ಕೊಚ್ಚಿ,ನಿತೀಶ್ ಕುಮಾರ್ ಶಾಂತಿವನ,ಶಶಿಧರ ನಾಯಕ್ ಅತಿಥಿಗಳನ್ನು ಗೌರವಿಸಿದರು.
ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು ಸ್ವಾಗತಿಸಿ,ನಗರ ಮಂಡಲದ ಅಧ್ಯಕ್ಷ ಶಿವಕುಮಾರ್ ಪಿ.ಬಿ.ವಂದಿಸಿದರು.ಬಿಜೆಪಿ ಗ್ರಾಮಾಂತರ ಮಂಡಲದ ಉಪಾಧ್ಯಕ್ಷ ಹರಿಪ್ರಸಾದ್ ಯಾದವ್ ಕಾರ್ಯಕ್ರಮ ನಿರೂಪಿಸಿದರು.ಪಕ್ಷದ ವಕ್ತಾರ ರಾಜೇಶ್ ಬನ್ನೂರು ಅವರು ತಿರಂಗ ಯಾತ್ರೆಯುದ್ದಕ್ಕೂ ಉದ್ಘೋಷಕರಾಗಿದ್ದರು.ಪುರಭವನದಲ್ಲಿ ಸಮಾವೇಶದ ಆರಂಭದಲ್ಲಿ ವಿವೇಕಾನಂದ ವಿದ್ಯಾರ್ಥಿಗಳು ಕರ್ನಾಟಕ ಶಾಸೀಯ ಪರಿಕರಗಳನ್ನು ನುಡಿಸಿ ವಂದೇ ಮಾತರಂ ಹಾಡಿದರು. ಸಭೆಯ ಕೊನೆಯಲ್ಲಿ ಕಡಮಜಲು ಸುಭಾಶ್ ರೈ ಅವರು ಕಿಲ್ಲೆ ಪ್ರತಿಷ್ಟಾನದಿಂದ ಸಿ.ಟಿ.ರವಿ ಅವರಿಗೆ ಎನ್ಎಸ್ ಕಿಲ್ಲೆಯವರ ಕುರಿತ ತಮ್ಮ ಪುಸ್ತಕಗಳನ್ನು ನೀಡಿದರು.
ವಿಶ್ವಹಿಂದು ಪರಿಷತ್ ಕರ್ನಾಟಕ ಪ್ರಾಂತ ಉಪಾಧ್ಯಕ್ಷ ಯು.ಪೂವಪ್ಪ, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ಮಾಜಿ ಜಿ.ಪಂ.ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ,ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್,ಪ್ರಮುಖರಾದ ಸುಲೋಚನಾ ಭಟ್, ಶೈಲಜಾ ಕೆ.ಟಿ ಭಟ್, ಉದ್ಯಮಿ ಸೀತಾರಾಮ ರೈ ಕೆದಂಬಾಡಿಗುತ್ತು, ಹರ್ ಘರ್ ತಿರಂಗದ ರಾಜ್ಯ ಸಂಚಾಲಕ ಮತ್ತು ಬಿಜೆಪಿ ರಾಜ್ಯ ಉಪಾಧ್ಯಕ್ಷ ಗೋಪಾಲ್ ನಾಯಕ್, ಮಾಜಿ ಶಾಸಕರಾದ ಪ್ರತಾಪಸಿಂಹ ನಾಯಕ್, ಬಾಲಕೃಷ್ಣ,ಒಬಿಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಆರ್.ಸಿ.ನಾರಾಯಣ, ಗ್ರಾಮಾಂತರ ಮಂಡಲದ ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಕ್ಯಾಂಪ್ಕೋ ಮಾಜಿ ಅಧ್ಯಕ್ಷ ಕೊಂಕೋಡಿ ಪದ್ಮನಾಭ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ, ತಾ.ಪಂ ಮಾಜಿ ಅಧ್ಯಕ್ಷರಾದ ಪುಲಸ್ತ್ಯ ರೈ, ರಾಧಾಕೃಷ್ಣ ಬೋರ್ಕರ್,ಮುರಳಿಕೃಷ್ಣ ಹಸಂತಡ್ಕ, ಸುಳ್ಯ ಮಂಡಲದ ಅಧ್ಯಕ್ಷ ವೆಂಕಟ ವಳಲಂಬೆ, ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕೃಷ್ಣ ಶೆಟ್ಟ ಕಡಬ, ಬಿಜೆಪಿ ನಗರ ವ್ಯಾಪಾರ ಪ್ರಕೋಷ್ಟದ ಸಂಚಾಲಕ ಉಜ್ವಲ್ ಪ್ರಭು, ಮೋಹನ್ ರೈ, ಬಾಲಕೃಷ್ಣ ರೈ, ಸುರೇಶ್ ಆಳ್ವ ಸಹಿತ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ತಿರಂಗ ಯಾತ್ರೆಯಲ್ಲಿ ಭಾಗವಹಿಸಿದ್ದರು.

























