ಹೈದರಾಬಾದ್: ಆಂಧ್ರ ಪ್ರದೇಶದ ವಿಧಾನಸಭಾ ಚುನಾವಣೆಯ ಬಹುತೇಕ ಚಿತ್ರಣ ಲಭಿಸಿದೆ. ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ನೇತೃತ್ವದ ಆಡಳಿತಾರೂಢ ವೈಎಸ್ಆರ್ ಕಾಂಗ್ರೆಸ್ ಪಕ್ಷ (YSRCP), ಕಾಂಗ್ರೆಸ್ ನೇತೃತ್ವದ ʼಇಂಡಿಯಾʼ ಒಕ್ಕೂಟ ಮತ್ತು ಬಿಜೆಪಿ, ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಪಕ್ಷ (TDP) ಮತ್ತು ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಪಕ್ಷ (JSP) ಒಳಗೊಂಡ ಎನ್ಡಿಎ (NDA) ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಸದ್ಯ ಟಿಡಿಪಿ ಮುನ್ನಡೆ ಕಾಯ್ದುಕೊಂಡಿದೆ . ಟಿಡಿಪಿ 125 ಕ್ಷೇತ್ರಗಳಲ್ಲಿ ಮುಂದಿದ್ದು, ವೈಎಸ್ಆರ್ಸಿ 20, ಜೆಎಸ್ಪಿ 17 ಮತ್ತು ಬಿಜೆಪಿ 7 ಕಡೆಗಳಲ್ಲಿ ಮುನ್ನಡೆ ಸಾಧಿಸಿದೆ. ಒಟ್ಟಿನಲ್ಲಿ ಎನ್ಡಿಯ 149 ಕಡೆ ಮುನ್ನಡೆ ಕಾಯ್ದುಕೊಂಡಿದೆ. ಆಂಧ್ರಪ್ರದೇಶದಲ್ಲಿ 175 ವಿಧಾನಸಭಾ ಸ್ಥಾನಗಳಿದ್ದು, ಬಹುಮತ ಪಡೆಯಲು 88 ಕ್ಷೇತ್ರಗಳಲ್ಲಿ ಜಯ ಗಳಿಸುವುದು ಅಗತ್ಯ.
ಆಂಧ್ರಪ್ರದೇಶದ ಪಿತಾಪುರಂ ವಿಧಾನಸಭಾ ಕ್ಷೇತ್ರದಲ್ಲಿ ನಟ ಮತ್ತು ಜನಸೇನಾ ಸಂಸ್ಥಾಪಕ ಪವನ್ ಕಲ್ಯಾಣ್ ಅವರು ಪ್ರಬಲ ಮುನ್ನಡೆಯೊಂದಿಗೆ ತಮ್ಮ ಮೊದಲ ಗೆಲುವಿನತ್ತ ಸಾಗುತ್ತಿದ್ದಾರೆ. ಪವನ್ ಕಲ್ಯಾಣ್ ವಿರುದ್ಧ ಜಗನ್ ಮೋಹನ್ ರೆಡ್ಡಿ ಅವರ ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷದ (ವೈಎಸ್ಆರ್ಪಿ) ವಂಗಾ ಗೀತಾ ವಿಶ್ವನಾಥಂ ಸ್ಪರ್ಧಿಸುತ್ತಿದ್ದಾರೆ.
ಪವನ್ ಕಲ್ಯಾಣ್ ಈ ಬಾರಿ ಲೋಕಸಭಾ ಮತ್ತು ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಚಂದ್ರಬಾಬು ನಾಯ್ಡು ಅವರ ಟಿಡಿಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ. ಎನ್ಡಿಎ ಜತೆಗಿನ ಸೀಟು ಹಂಚಿಕೆ ಒಪ್ಪಂದದ ಭಾಗವಾಗಿ, ಟಿಡಿಪಿಗೆ 144 ವಿಧಾನಸಭಾ ಮತ್ತು 17 ಲೋಕಸಭಾ ಕ್ಷೇತ್ರಗಳನ್ನು ನೀಡಲಾಗಿತ್ತು. ಬಿಜೆಪಿ 6 ಲೋಕಸಭಾ ಮತ್ತು 10 ವಿಧಾನಸಭಾ ಸ್ಥಾನಗಳಲ್ಲಿ ಸ್ಪರ್ಧಿಸಿದೆ. ಒಪ್ಪಂದದ ಪ್ರಕಾರ, ಜನಸೇನಾ 2 ಲೋಕಸಭಾ ಮತ್ತು 21 ವಿಧಾನಸಭಾ ಸ್ಥಾನಗಳಲ್ಲಿ ಸ್ಪರ್ಧಿಸಿದೆ.