ಚಿಕ್ಕಮಗಳೂರು: ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರ ಕಾರಿಗೆ ಲಾರಿಯೊಂದು ಢಿಕ್ಕಿ ಹೊಡೆದಿದೆ.
ಚಿಕ್ಕಮಗಳೂರು ತಾಲೂಕಿನ ಲಕ್ಯಾ ಕ್ರಾಸ್ ಬಳಿ ಈ ಅಪಘಾತ ಸಂಭವಿಸಿದ್ದು, ಶುಕ್ರವಾರ ಬಸವ ತತ್ವ ಕಾರ್ಯಕ್ರಮ ಮುಗಿಸಿ ವಾಪಸ್ ಚಿಕ್ಕಮಗಳೂರು ನಗರದಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ. ಲಾರಿ ಢಿಕ್ಕಿ ಹೊಡೆದ ರಭಸಕ್ಕೆ ಕಾರಿನ ಹಿಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.
ಇನ್ನು ಅಪಘಾತದಲ್ಲಿ ಅದೃಷ್ಟವಶಾತ್ವಿಜಯೇಂದ್ರ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಿಜಯೇಂದ್ರ ಅವರು ಬೇರೊಂದು ಕಾರಿನಲ್ಲಿ ಪ್ರಯಾಣಿಸುತ್ತಿದ್ದರಿಂದ ಅವರು ಅಪಘಾತದಿಂದ ಆಗಿದ್ದಾರೆ. ಅಂತೆಯೇ ಅಪಘಾತಕ್ಕೀಡಾದ ವಿಜಯೇಂದ್ರಗೆ ಸೇರಿದ ಕಾರಿನ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹೊರ ಜಿಲ್ಲೆಗಳಿಗೆ ತೆರಳುವಾಗ ವಿಜಯೇಂದ್ರ ಅವರು ಇದೇ ಕಾರನ್ನು ಬಳಸುತ್ತಿದ್ದರು. ಆದರೆ, ಅದೃಷ್ಟವಶಾತ್ ಇಂದು ಮತ್ತೊಂದು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ.
ಲಾರಿ ಚಾಲಕನ ಬಂಧನ
ಸದ್ಯ ಪೊಲೀಸರು ಅಪಘಾತ ಮಾಡಿದ ಲಾರಿ ಚಾಲಕನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಲಾರಿ ಮರದ ಪೀಸ್ ತುಂಬಿಕೊಂಡು ಚಿಕ್ಕಮಗಳೂರು ನಗರದಿಂದ ಮುಂಬಯಿಗೆ ತೆರಳುತ್ತಿತ್ತು. ಸದ್ಯ ಪೊಲೀಸರು ಕಾರು ಸೇರಿದಂತೆ ಲಾರಿಯನ್ನು ಸಹ ಗ್ರಾಮಾಂತರ ಠಾಣೆಗೆ ತೆಗೆದುಕೊಂಡು ಹೋಗಿದ್ದು, ಲಾರಿ ಚಾಲಕನ ವಿರುದ್ಧ ಪ್ರಕರಣ ದಾಖಲಿಸಲು ಸಿದ್ದತೆ ನಡೆಸಿದ್ದಾರೆ.
ಸ್ನೇಹಿತನಿಗೆ ಸೇರಿದ ಕಾರು
ಕಡೂರು ತಾಲೂಕಿನ ಬೀರೂರಿನ ಹರೀಶ್ ಅವರಿಗೆ ಸೇರಿದ ಕಾರು ಇದಾಗಿದ್ದು, ಹರೀಶ್ ಬಿವೈ ವಿಜಯೇಂದ್ರ ಅವರ ಆಪ್ತ ಎನ್ನಲಾಗಿದೆ. ಚಿಕ್ಕಮಗಳೂರಿಗೆ ಆಗಮಿಸಿದ್ದ ವಿಜಯೇಂದ್ರ ಅವರನನ್ನು ಮಾತನಾಡಿಸಲು ಸ್ನೇಹಿತ ಹರೀಶ್ ಬಂದಿದ್ದರು. ಮಾತನಾಡಿಸಿ ವಾಪಸ್ ಬೀರೂರಿಗೆ ವಿಜಯೇಂದ್ರ ಕಾರಿನ ಹಿಂದೆ ಹೋಗುವಾಗ ಅಪಘಾತ ಸಂಭವಿಸಿದೆ.