ಪುತ್ತೂರು: ಪುತ್ತೂರಿನ ದ್ವಾರಕಾ ಕಾರ್ಪೊರೇಷನ್ ಸಂಸ್ಥೆಯ ವತಿಯಿಂದ ಉಪ್ಪಿನಂಗಡಿ- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕೆಮ್ಮಾರದಲ್ಲಿ ಅನುಷ್ಠಾನಿಸಿದ ಹಿರಿಯ ನಾಗರಿಕರ ಬಡಾವಣೆ ಉಜ್ಜೀವನವು ಜೂ. 21ರಂದು ಲೋಕಾರ್ಪಣೆಗೊಂಡಿತು.
ಬಡಾವಣೆ ಉದ್ಘಾಟಿಸಿದ ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ಇಂತಹ ಬಡಾವಣೆಗಳು ಶ್ರೀಕೃಷ್ಣನ ಉದ್ದೇಶವನ್ನು ಈಡೇರಿಸುವ ಕಾರ್ಯ ಮಾಡುತ್ತಿದೆ. ಹಿರಿಯರನ್ನು ಒಂದೇ ಕಡೆ ಸೇರಿಸಿ ಕೂಡು ಕುಟುಂಬದ ನೆನಪು ಮರುಕಳಿಸುವಂತೆ ಮಾಡುವಲ್ಲಿ ಉಜ್ಜೀವನ ಬಡಾವಣೆಯು ಸಹಕಾರಿಯಾಗಿದೆ ಎಂದರು.
ಪ್ರಯಾಣಿಕರ ತಂಗುದಾಣ ಉದ್ಘಾಟಿಸಿದ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ, ಹಿರಿಯ ನಾಗರಿಕರಿಗೆ ಈ ಬಡಾವಣೆಯು ಸುಂದರ ಜೀವನ ನೀಡುವ ಕಾರ್ಯ ಮಾಡಲಿದ್ದು, ಹಿರಿಯರೇ ಸೇರಿಕೊಂಡು ಪರಸ್ಪರ ಸ್ನೇಹ ಹಂಚಿಕೊಳ್ಳಲು ಅನುಕೂಲವಾಗಲಿದೆ ಎಂದರು.
ದ್ವಾರಕಾ ನೆಸ್ಟ್ ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಮಾತನಾಡಿ, ಗೋಪಾಲಕೃಷ್ಣ ಭಟ್ ಅವರು ಯಾವುದೇ ಸ್ವಾರ್ಥವಿಲ್ಲದೆ ಇಂತಹ ವ್ಯವಸ್ಥೆ ಮಾಡುವ ಮೂಲಕ ಹಿರಿಯರಿಗೆ ಧೈರ್ಯ ತುಂಬುವ ಕಾರ್ಯ ಮಾಡಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅರ್ತ್ಯಡ್ಕ ಗೋಪಾಲಕೃಷ್ಣ ಭಟ್ ಮಾತನಾಡಿ, ಬಡಾವಣೆಯಲ್ಲಿ ಮುಂದಿನ ದಿನಗಳಲ್ಲಿ ಮನೆ ನಿರ್ಮಾಣ ಸಹಿತ ಗೋಶಾಲೆ, ಧ್ಯಾನ ಮಂದಿರ, ಥೀಮ್ ಬೇಸ್ಡ್ ಪಾರ್ಕ್ ಮೊದಲಾದ ಬಹಳಷ್ಟು ಯೋಜನೆಗಳು ಅನುಷ್ಠಾನಗೊಳ್ಳಲಿದೆ ಎಂದರು.
ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರಮೇಶ್ ಉಪ್ಪಂಗಳ ದ್ವಾರಕಾ ಮಾರ್ಟ್ ಉದ್ಘಾಟಿಸಿದರು.
ಪುತ್ತೂರು ಮಾಸ್ಟರ್ ಪ್ಲಾನರಿ ಮಾಲಕ ಎಸ್.ಕೆ.ಆನಂದ್ ಕುಮಾರ್, ಬೆಂಗಳೂರಿನ ಉದ್ಯಮಿ ಡಾ.ಹೇಮಂತ್ ರೈ ಮನವಳಿಕೆ, ರಾಮಕುಂಜ ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ರಾಧಾಕೃಷ್ಣ ಕೆ.ಎಸ್., ಹಿರೇಬಂಡಾಡಿ ಗ್ರಾ.ಪಂ.ಮಾಜಿ ಅಧ್ಯಕ್ಷ ಸದಾನಂದ ಶೆಟ್ಟಿ, ಪುತ್ತೂರು ಸಚಿನ್ ಟ್ರೆಡರ್ಸ್ ಮಾಲಕ ಮಂಜುನಾಥ್ ನಾಯಕ್, ಬೆಂಗಳೂರಿನ ವೈದ್ಯ ಡಾ.ಮುರಳೀಧರ, ದ್ವಾರಕಾ ಸಂಸ್ಥೆಯ ಗೌರವಾಧ್ಯಕ್ಷ ಹರಿಕೃಷ್ಣ ಭಟ್ ಅರ್ತ್ಯಡ್ಕ, ನಿರ್ದೇಶಕಿ ಲಕ್ಷ್ಮೀ ಅಮ್ಮ, ಸಹಾಯಕ ನಿರ್ದೇಶಕಿ ಅಶ್ವಿನಿ ಗೋಪಾಲಕೃಷ್ಣ ಉಪಸ್ಥಿತರಿದ್ದರು.
ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಅಮೃತಕೃಷ್ಣ ಸ್ವಾಗತಿಸಿದರು. ಕಾರ್ಯದರ್ಶಿ ಗಣರಾಜ ಕುಂಬ್ಳೆ ಕಾರ್ಯಕ್ರಮ ನಿರ್ವಹಿಸಿದರು.
























